ಬೆಳ್ಳಂದೂರು ಗೇಟ್ ಬಳಿ ಪ್ರತಿಭಟನಾಕಾರರಿಂದ ಪೊಲೀಸರ ಮೇಲೆ ಕಲ್ಲು ತೂರಾಟ; ಲಾಠಿ ಚಾರ್ಜ್
ಕೇಂದ್ರ ಸರಕಾರದ ನೂತನ ಪಿ.ಎಫ್ ನೀತಿ ವಿರೋಧಿಸಿ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು, ಎ.19: ಕೇಂದ್ರ ಸರಕಾರದ ನೂತನ ಪಿ.ಎಫ್ ನೀತಿಯನ್ನು ವಿರೋಧಿಸಿ ಗಾರ್ಮೆಂಟ್ಸ್ ಕಾರ್ಮಿಕರು ಬೆಂಗಳೂರಿನಲ್ಲಿ ಇಂದು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಆಗಿದ್ದು, ಕಾರ್ಮಿಕರ ಪ್ರತಿಭಟನೆ ಹಿಂಸೆಗೆ ತಿರುಗಿದೆ.
ನಗರದ ಸರ್ಜಾಪುರ ರಸ್ತೆಯಲ್ಲಿರುವ ಬೆಳ್ಳಂದೂರು ಗೇಟ್ ಬಳಿ ಪ್ರತಿಭಟನೆಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಇಬ್ಬರಿಗೆ ಗಾಯವಾಗಿದೆ. ಕೋಡಿಚಿಕ್ಕನಹಳ್ಳಿಯಲ್ಲಿ ಹಿಂಸಾಚಾರಕ್ಕೆ ಇಳಿದ ಕಾರ್ಮಿಕರನ್ನುನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಹೊಸೂರು, ತುಮಕೂರು, ಸರ್ಜಾಪುರ ರಸ್ತೆಯಲ್ಲಿರುವ ಎಲ್ಲ ಗಾರ್ಮೆಂಟ್ಸ್ಗಳಿಗೂ ರಜೆ ಸಾರಲಾಗಿದೆ.
ಹೊಸೂರು ರಸ್ತೆಯ ಅಲ್ಲಲ್ಲಿ ಕಾರ್ಮಿಕರು ಜಮಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮವಾಗಿ ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ,ವೆಸ್ಟ್ ಆಫ್ ಕಾರ್ಡ್ ರೋಡ್, ಕಂಠೀರವ ಸ್ಟುಡಿಯೋ, ತುಮಕೂರು ರಸ್ತೆ, ಮಾಗಡಿ ರಸ್ತೆ, ಜಾಲಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. 10 ಸಾವಿರ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರೀ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದಾರೆ.
. ಬೊಮ್ಮನಹಳ್ಳಿಯಲ್ಲಿ ಸೋಮವಾರ ನಡೆದ ಕಾರ್ಮಿಕರ ಪ್ರತಿಭಟನೆ ಹಿಂಸೆಗೆ ತಿರುಗಿ ಕಲ್ಲು ತೂರಾಟದಿಂದಾಗಿ ಹಲವು ಮಂದಿಗೆ ಗಾಯವಾಗಿತ್ತು. ಆನೇಕ ವಾಹನಗಳು ಜಖಂಗೊಂಡಿತ್ತು.





