ಕೇಂದ್ರದ ಪಿಎಫ್ ನೀತಿ ವಿರುದ್ಧ ಆಕ್ರೋಶ: ಬೀದಿಗಿಳಿದ ಕಾರ್ಮಿಕರ ಮೇಲೆ ಪೊಲೀಸ್ ದೌರ್ಜನ್ಯ
ರಣರಂಗವಾದ ಬೆಂಗಳೂರು

ಬೆಂಗಳೂರು,ಎ.19: ಕೇಂದ್ರದ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಯನ್ನು ವಿರೋಧಿಸಿ ಸಿದ್ಧ ಉಡುಪು ಕಾರ್ಖಾನೆಗಳ ಸಾವಿರಾರು ಕಾರ್ಮಿಕರ ಆಕ್ರೋಶದ ಕಟ್ಟೆಯೊಡೆದಿದೆ. ಇಲ್ಲಿನ ಹೊಸೂರು ರಸ್ತೆಯ ಹೆಬ್ಬಗೋಡಿ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿದಂತೆ ನಗರದ ವಿವಿಧೆಡೆ ಕಾರ್ಮಿಕರು ಬೀದಿಗಿಳಿದ ಹಿನ್ನೆಲೆಯಲ್ಲಿ ಉದ್ಯಾನನಗರಿ ಬೆಂಗ ಳೂರು ಅಕ್ಷರಶಃ ಸ್ತಬ್ಧವಾಗಿತ್ತು.
ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರ ಪ್ರತಿಭಟನೆ, ಧರಣಿ ಸತ್ಯಾ ಗ್ರಹ, ರಸ್ತೆ ತಡೆ, ಪೊಲೀಸರ ಲಾಠಿ ಪ್ರಹಾರ, ಹಿಂಸಾಚಾರ, ವಾಹನಗಳಿಗೆ ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸ್ಥಿತಿ ಸಂಪೂರ್ಣ ಉದ್ವಿಗ್ನ ಗೊಂಡಿತ್ತು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ವಿದ್ಯಾರ್ಥಿನಿ ಪ್ರೀತಿ ಮತ್ತು ಮಂಜುನಾಥಪ್ಪ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಮಧ್ಯೆ ಕೆಲ ಕಿಡಿಗೇಡಿಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಸೇರಿ ಒಟ್ಟು 30 ವಾಹನಗಳನ್ನು ಜಖಂಗೊಳಿಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ಆವರಣದಲ್ಲಿ ನಿಂತಿದ್ದ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿಹಚ್ಚಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿದ್ದ ಕಿಡಿಗೇಡಿಗಳ ಗುಂಪೊಂದು ಹೆಬ್ಬಗೋಡಿ ಪೊಲೀಸ್ ಠಾಣೆಗೆ ನುಗ್ಗಿ ಎಸಿಪಿ ಓಬಳೇಶ್, ಎಸ್ಸೈ ಗಿರೀಶ್ ಸೇರಿದಂತೆ ಅಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆಗೆ ವಿಫಲಯತ್ನ ನಡೆಸಿದೆ. ಇದರಿಂದ ಅಧಿಕಾರಿ ಗಳು ಸೇರಿ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಬ್ಬಗೋಡಿ: ಬೊಮ್ಮನಹಳ್ಳಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯ ವೇಳೆ ಲಾಠಿ ಪ್ರಹಾರ, ಅಮಾಯಕ ಕಾರ್ಮಿಕರ ಬಂಧನ ಖಂಡಿಸಿ ಬೆಳಗ್ಗೆ 10ಗಂಟೆಯಿಂದಲೇ ಸಿದ್ಧ ಉಡುಪು ಕಾರ್ಖಾನೆಗಳ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರು ಏಕಾಏಕಿ ಬೀದಿಗಿಳಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇದೇ ವೇಳೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕಿಡಿಗೇಡಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಗಾಳಿಯಲ್ಲಿ ಗುಂಡು: ಈ ಮಧ್ಯೆಯೇ ಪರಿಸ್ಥಿತಿ ತಹಬದಿಗೆ ಬಾರದ್ದರಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ, ಅಶ್ರುವಾಯು ಸಿಡಿಸಿ ಉದ್ರಿಕ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಗುಂಪೊಂದು ಹೆಬ್ಬಗೋಡಿ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದೆಯೆಂದು ಗೊತ್ತಾಗಿದೆ.
ಬಸ್ಗಳಿಗೆ ಬೆಂಕಿ: ಅತ್ತ ತುಮಕೂರು ರಸ್ತೆಯಲ್ಲಿನ ನಾಗಸಂದ್ರ, ದಾಸರನಹಳ್ಳಿ, ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ ಸೇರಿದಂತೆ ವಿವಿಧೆಡೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.
ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯನ್ನು ಕಾರ್ಮಿಕರು ಸಂಪೂರ್ಣ ಬಂದ್ ಮಾಡಿದ್ದರಿಂದ ಸಾವಿರಾರು ವಾಹನಗಳು ರಸ್ತೆಯಲ್ಲಿ ಉಳಿಯಬೇಕಾಯಿತು. ಈ ಮಧ್ಯೆ ಕಿಡಿಗೇಡಿಗಳು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿದ್ದ ಸುಮಾರು ಹತ್ತಕ್ಕೂ ಹೆಚ್ಚು ಸಾರಿಗೆ ವಾಹನಗಳಿಗೆ ಬೆಂಕಿಹಚ್ಚಿ ಹಿಂಸಾಚಾರ ಮೆರೆದಿದ್ದಾರೆ.
ತುಮಕೂರು ರಸ್ತೆ ಇಕ್ಕೆಲಗಳಲ್ಲಿ ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿ ಕಟ್ಟಡಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗುಂಪನ್ನು ಚದುರಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಪರದಾಡಬೇಕಾಯಿತು.
ಬನ್ನೇರುಘಟ್ಟ ರಸ್ತೆಯಲ್ಲಿನ ಗೊಟ್ಟಿಗೆರೆ ಸಮೀಪ ರಸ್ತೆ ತಡೆ ನಡೆಸುತ್ತಿದ್ದ ಮಹಿಳಾ ಕಾರ್ಮಿಕರ ಮೇಲೆ ಪೊಲೀಸರು ಮನಸೋ ಇಚ್ಛೆ ಲಾಠಿ ಪ್ರಹಾರ ಮಾಡಿ ದೌರ್ಜನ್ಯ ನಡೆಸಿದ್ದಾರೆ. ಇಲ್ಲಿನ ಗುಡ್ಶೆಡ್ ರಸ್ತೆಯಲ್ಲಿ ನೂರಾರು ಕಾರ್ಮಿಕರು ರಸ್ತೆ ತಡೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಯೋಕಾನ್ಗೆ ಕಲ್ಲು: ಪ್ರತಿಷ್ಠಿತ ಬಯೋಕಾನ್ ಸಂಸ್ಥೆಯ ಮೇಲೆ ಉದ್ರಿಕ್ತ ಕಾರ್ಮಿಕರು ಕಲ್ಲು ತೂರಾಟ ನಡೆಸಿದ್ದಲ್ಲದೆ, ಸಂಸ್ಥೆಗೆ ನುಗ್ಗಲು ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಪ್ರಯಾಣಿಕರ ಪರದಾಟ: ಸಿದ್ಧ ಉಡುಪು ಕಾರ್ಮಿಕರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಪರ್ಕಿಸುವ ಹೊಸೂರು ರಸ್ತೆ, ತುಮಕೂರು ರಸ್ತೆ, ಬನ್ನೇರುಘಟ್ಟ ರಸ್ತೆ ಬೆಳಗ್ಗೆ 10ಗಂಟೆಯಿಂದ ಸಂಜೆಯ ವರೆಗೂ ಬಂದ್ ಆಗಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ನಡು ರಸ್ತೆಯಲ್ಲಿ ಪರದಾಡಬೇಕಾಯಿತು.
ಖಾಸಗಿ ಸುದ್ದಿವಾಹಿನಿಗಳಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರ ಪ್ರತಿಭಟನಾನಿರತ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೆಎಸ್ಸಾರ್ಪಿ, ಸಿಎಆರ್ ತುಕಡಿಯ ಸಿಬ್ಬಂದಿ ಲಘುಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಆ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸಾರಿಗೆ ಸಂಸ್ಥೆಗೆ 3.10 ಕೋಟಿ ರೂ. ನಷ್ಟ: ಕೇಂದ್ರ ಸರಕಾರದ ಹೊಸ ಭವಿಷ್ಯ ನಿಧಿ(ಪಿಎಫ್) ನೀತಿಯನ್ನು ಖಂಡಿಸಿ ನಗರದಲ್ಲಿಂದ ಎಲ್ಲೆಡೆ ಗಾರ್ಮೆಂಟ್ಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆ ಸಂಸ್ಥೆಗಳಿಗೆ 3.10 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.
ಪ್ರತಿಭಟನೆಯ ವೇಳೆ ಕೆಎಸ್ಸಾರ್ಟಿಸಿಯ ಏಳು ಬಸ್ಸುಗಳು ಸುಟ್ಟು ಭಸ್ಮವಾಗಿದ್ದು, ಕಿಡಿಗೇಡಿಗಳು 84 ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಿದ್ದಾರೆ. ಅಲ್ಲದೆ, ಸಾರ್ವಜನಿಕರ ಸಂಚಾರ ಸ್ಥಗಿತ ಗೊಂಡಿದ್ದ ಕಾರಣದಿಂದಾಗಿ 3.10 ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
30 ಪೊಲೀಸರಿಗೆ ಗಾಯ: ಕಲ್ಲು ತೂರಾಟದಿಂದ ಎಸಿಪಿ ನಾರಾಯಣ್ ಹಾಗೂ ಎಸ್ಪಿ ರಮೇಶ್ ಸೇರಿ ಒಟ್ಟು 30 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳ ಪೈಕಿ ಕಾನ್ಸ್ಟೇಬಲ್ಗಳಿಬ್ಬರ ತಲೆಗೆ ತೀವ್ರಗಾಯವಾಗಿದೆ. ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚುಮಂದಿ ಭಾಗಿ
- 116 ಮಂದಿ ಬಂಧನ
- 15 ಪೊಲೀಸ್ ವಾಹನ ಸೇರಿ ಕೆಎಸ್ಸಾರ್ಟಿಸಿ ಬಿಎಂಟಿಸಿ ಒಳಗೊಂಡರೆ 95 ವಾಹನಗಳಿಗೆ ಹಾನಿ
- 15 ಗೃಹ ರಕ್ಷಕರಿಗೆ ಗಂಭೀರ ಗಾಯ
- ನಗರದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳ ನೇಮಕ







