ಮುಡಿಪು: ಅಪ್ನಾದೇಶ್ ಸ್ವಯಂ ಸೇವಕರ ಸಮಾವೇಶ ಉದ್ಘಾಟನೆ

ಕೊಣಾಜೆ: ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ಅಪ್ನಾದೇಶ್ ಬಳಗ ದ.ಕ ಜಿಲ್ಲೆ, ಚಿತ್ತಾರ ಬಳಗ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಶಿಕ್ಷಣ ಟ್ರಸ್ಟ್ , ಸುಗ್ರಾಮ ಸಂಘ, ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ಮುಡಿಪು ಜನಶಿಕ್ಷಣ ಟ್ರಸ್ಟ್ ಆವರಣದಲ್ಲಿ ಬುಧವಾರ ಜರಗಿದ ಅಪ್ನಾದೇಶ್ ಸ್ವಯಂ ಸೇವಕರ ಸಮಾವೇಶವನ್ನು ಅಪ್ನಾದೇಶ್ ಇದರ ಸಂಸ್ಥಾಪಕ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಸೋಲಾರ್ ದೀಪಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಳ್ಳೆಯ ವಿಚಾರಗಳು, ಒಳ್ಳೆಯ ಸಂಘಟನೆಗಳು ಬಹಳಷ್ಟು ಇವೆ. ಆದರೆ ಅದನ್ನು ಹೊರತುಪಡಿಸಿ ನಕಾರಾತ್ಮಕ ವಿಚಾರಗಳು ಮಾತ್ರ ಇಂದು ಪ್ರಚಾರವನ್ನು ಪಡೆಯುತ್ತಿದೆ. ಮೌಲ್ಯಗಳ ವ್ಯವಸ್ಥೆ ಪ್ರಚಾರ ಪಡೆದುಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಪ್ರತಿಯೊಂದು ಪಂಚಾಯಿತಿಗಳು ವಿಶೇಷತೆಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಅಲ್ಲಿ ನಡೆಯುವ ಧನಾತ್ಮಕ ವಿಚಾರಗಳು ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆಯುವುದರ ಮೂಲಕ ಎಲ್ಲರಿಗೂ ಉದಾಹರಣೆಯಂತಾಗಿರಬೇಕು. ಅಪ್ನಾದೇಶ್ ವತಿಯಿಂದ ಗ್ರಾಮೀಣ ಮಟ್ಟದಲ್ಲಿ ನಡೆಸಿದ ವಿಶಿಷ್ಟ ಸಾಧಕರ ಪರಿಚಯದ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಪ್ರಾಯೋಜಕತ್ವದ ಸಿದ್ಧತೆಯಲ್ಲಿದ್ದೇವೆ ಎಂದ ಅವರು ಹೇಳಿದರು.
ಈ ಸಂದರ್ಭ ಮಂಚಿ ಕೊಳ್ನಾಡು ಶಾಲಾ ವಿದ್ಯಾರ್ಥಿಗಳಿಂದ ‘ ನೀಲಿ ಕುದುರೆ ’ ರಂಗ ನಾಟಕ ಪ್ರದರ್ಶನ ನಡೆಯಿತು. ಸಾಧಕರಿಗೆ ಗೌರವ ಹಾಗೂ ಸ್ವಚ್ಛ-ಸ್ವಾವಲಂಬಿ ಮಾದರಿ ಗ್ರಾಮ ನಿರ್ಮಾಣದ ಸಂವಾದ-ಸಂಕಲ್ಪ ಕಾರ್ಯಕ್ರಮಗಳು ನಡೆಯಿತು. ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಗಣೇಶ್ .ಬಿ, ವಿಕಾಸ್ ಕಾಲೇಜಿನ ಆಡಳಿತಾಧಿಕಾರಿ ಅನಂತ ಪ್ರಭು, ಮಾಜಿ ಒಂಬೋಡ್ಸ್ಮೆನ್ ಶೀನ ಶೆಟ್ಟಿ, ಚಿತ್ತಾರ ಬಳಗದ ಸಂಚಾಲಕ ಹಾಗೂ ಪತ್ರಿಕಾ ಛಾಯಗ್ರಾಹಕ ಸತೀಶ್ ಇರಾ, ಸೆಲ್ಕೋ ಫೌಂಡೇಶನ್ನಿನ ಹಿರಿಯ ಪ್ರಬಂಧಕ ಕೃಷ್ಣರಾಜ್, ಚಿತ್ತಾರ ಬಳಗದ ವೆಂಕಟೇಶ್ ಮುಡಿಪು, ಅಪ್ನಾ ದೇಶ್ ಪತ್ರಿಕೆ ಸಂಪಾದಕ ಜಾಹೀದ್ ಜವಳಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ತಾರ ಬಳಗದ ಚಂದ್ರಶೇಖರ್ ಪಾತೂರು ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟಿನ ನಿದೇರ್ಶಕ ಕೃಷ್ಣ ಮೂಲ್ಯ ನಿರ್ವಹಿಸಿ ವಂದಿಸಿದರು.





