ನೀರಿನ ಸಮಸ್ಯೆಯಿಂದ ಆತಂಕ ಪಡುವ ಅಗತ್ಯವಿಲ್ಲ: ಶಾಸಕ ಶಿವರಾಮ ಹೆಬ್ಬಾರ್

ಮುಂಡಗೋಡ, ಎ.21: ಕುಡಿಯುವ ನೀರಿನ ಕಾಮಗಾರಿ ಪ್ರಾರಂಭಿಸುವಲ್ಲಿ ವಿಳಂಬ ಮಾಡಿದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆಯಲ್ಲಿ, ಕಾಮಗಾರಿ ಪೂರೈಸಿದವರಿಗೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಹಣ ಪಾವತಿಸದಿದ್ದರೆ ಯಾರು ನಿಮ್ಮ ಕೆಲಸಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದ ಶಾಸಕರು, ತಕ್ಷಣ ಬಾಕಿ ಉಳಿಸಿಕೊಂಡವರ ಹಣ ಪಾವತಿಸಿ ಎಂದು ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆಯಿಂದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೂ ಅದನ್ನು ಸಮರ್ಪಕವಾಗಿ ಪರಿಹರಿಸುವಷ್ಟು ಹಣವನ್ನು ಮೀಸಲಿಡಲಾಗಿದೆ ಎಂದರು.
ಪಟ್ಟಣದಲ್ಲಿ ಈ ಹಿಂದಿನಂತೆ 2 ದಿನಕ್ಕೊಂದು ಬಾರಿ ಕುಡಿಯುವ ನೀರು ಪೂರೈಸುವುದನ್ನು ಮುಂದುವರಿಸುವಂತೆ ಮುಖ್ಯಾಧಿಕಾರಿ ಸಂಗನ ಬಸಯ್ಯಗೆ ಸೂಚಿಸಿದರು. ಅಗತ್ಯವಿದ್ದಷ್ಟು ಟ್ಯಾಂಕರ್ಗಳನ್ನು ಬಳಸಿಕೊಂಡು ನೀರು ಪೂರೈಸಿ ಹಣ ಎಷ್ಟು ಬೇಕಾದರೂ ನೀಡಲು ಸರಕಾರ ಸಿದ್ಧವಿದೆ ಎಂದ ಅವರು, ಸರಕಾರಿ ಇಲಾಖೆಗೆ ಸಂಬಂಧಪಟ್ಟ ಎಲ್ಲ ಬೋರ್ವೆಲ್ಗಳನ್ನು ಸಾರ್ವಜನಿಕರಿಗೆ ನೀರು ಪೂರೈಸಲು ಬಳಸಿಕೊಳ್ಳುವಂತೆ ತಹಶೀಲ್ದಾರ್ ಅಶೋಕ ಗುರಾಣಿಗೆ ಸೂಚಿಸಿದರು. ಉಪವಿಭಾಗಾಧಿಕಾರಿಗಳೊಂದಿಗೂ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ತಹಶೀಲ್ದಾರ್ ಅಶೋಕ ಗುರಾಣಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಬೈರವಾಡಗಿ, ಪಪಂ ಅಧ್ಯಕ್ಷ ರಫೀಕ್ ಇನಾಮದಾರ, ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ತಾಪಂ ಸದಸ್ಯರು ಉಪಸ್ಥಿತರಿದ್ದರು







