ಗುಜರಾತ್ ವಿರುದ್ಧ ಪಂದ್ಯಕ್ಕೆ ಲಭ್ಯ: ಯುವಿ ವಿಶ್ವಾಸ
ಮುಂಬೈ, ಎ.21: ‘‘ಪ್ರಸ್ತುತ ನಾನು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮೇ 6 ರಂದು ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ತಂಡಕ್ಕೆ ವಾಪಸಾಗುವ ವಿಶ್ವಾಸದಲ್ಲಿದ್ದೇನೆ’’ ಎಂದು ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಗುರುವಾರ ಇಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಟ್ವೆಂಟಿ-20 ವಿಶ್ವಕಪ್ನ ವೇಳೆ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಮಂಡಿನೋವಿಗೆ ತುತ್ತಾಗಿದ್ದ ಯುವರಾಜ್ ಸಿಂಗ್ 9ನೆ ಆವೃತ್ತಿಯ ಐಪಿಎಲ್ನಲ್ಲಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ.
‘‘ನಾನು ಮೇ 6 ರಂದು ನಡೆಯಲಿರುವ ಪಂದ್ಯವನ್ನು ಎದುರು ನೋಡುತ್ತಿರುವೆ. ಆ ಪಂದ್ಯದಲ್ಲಿ ಆಡುವ ಬಗ್ಗೆ ಸಂಪೂರ್ಣ ವಿಶ್ವಾಸವಿಲ್ಲ. ಆದರೆ, ಆರನೆ ತಾರೀಖಿನ ಪಂದ್ಯಕ್ಕೆ ಮರಳುವುದು ನನ್ನ ಗುರಿಯಾಗಿದೆ’’ಎಂದು ಯುವಿ ಹೇಳಿದ್ದಾರೆ.
‘‘ಹೈದರಾಬಾದ್ ತಂಡ ಈ ತನಕ ಮೂರು ಪಂದ್ಯಗಳನ್ನು ಆಡಿದೆ. 1ರಲ್ಲಿ ಜಯ ಹಾಗೂ ಎರಡರಲ್ಲಿ ಸೋತಿದೆ. 7 ಪಂದ್ಯಗಳ ಬಳಿಕ ತಂಡದ ಪ್ರದರ್ಶನ ಹೇಗಿದೆ ಎಂದು ಅಂದಾಜಿಸಬಹುದು. ಆಶೀಷ್ ನೆಹ್ರಾ ಗಾಯಗೊಂಡಿರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮಬೀರಿದೆ’’ ಎಂದು 34ರ ಹರೆಯದ ಯುವಿ ಹೇಳಿದ್ದಾರೆ.







