ಜಿಲ್ಲಾಧಿಕಾರಿ ದಿಢೀರ್ ಭೇಟಿ: ಬರ, ಕುಡಿಯುವ ನೀರು ನಿರ್ವಹಣೆ ಕುರಿತು ಪರಿಶೀಲನೆ

ಮುಂಡಗೋಡ: ಉತ್ತರಕನ್ನಡ ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್ ಇಂದು ಮುಂಡಗೋಡಕ್ಕೆ ದಿಢೀರ್ ಭೇಟಿ ನೀಡಿದರಲ್ಲದೇ, ಅಧಿಕಾರಿಗಳ ಸಭೆ ನಡೆಸಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಸೂಚನೆ ಹಾಗೂ ಮಾರ್ಗದರ್ಶನ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ.ಪಂ. ಮುಖ್ಯಾಧಿಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.ಇಂ. ಅಭಿಯಂತರರು, ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿನ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಸಮರ್ಪಕವಾಗಿ ಪರಿಸ್ಥಿತಿ ನಿರ್ವಹಿಸುವ ಕುರಿತು ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಹಾಗೂ ತಹಶೀಲ್ದಾರ ಅಶೋಕ ಗುರಾಣಿ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನಕ್ಕೆ ಭೇಟಿ ವಾಪಸ್ ಹಿಂತಿರುಗುವ ಸಂದರ್ಭದಲ್ಲಿ ಚಿಗಳ್ಳಿ ಗ್ರಾಮದ ಮಿನಿ ವಾಟರ್ ಟ್ಯಾಂಕ್ನಿಂದ ನೀರು ಫೋಲಾಗುತ್ತಿರುವುದನ್ನು ಗಮನಿಸಿ, ಬರದ ಹಿನ್ನೆಲೆಯಲ್ಲಿ ನೀರು ಎಲ್ಲಿಯೂ ಪೋಲಾಗದಂತೆ ತಡೆಗಟ್ಟಲು ಸಂಬಂಧಿಸಿದವರಿಗೆ ಸೂಚಿಸಿದರು.
ಸನವಳ್ಳಿ ಜಲಾಶಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಸ್ಥಾವರ ಹಾಗೂ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಪ.ಪಂ. ಸಿಬ್ಬಂದಿಗಳಿಂದ ಮಾಹಿತಿ ಪಡೆದು ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಸಲಹೆ ಸೂಚನೆ ನೀಡಿದರು.
ಕಳೆದ ಮೂವತ್ತು ವರ್ಷಗಳಲ್ಲಿ ಈ ರೀತಿಯ ಅನಾವೃಷ್ಟಿಯಾಗಿರಲಿಲ್ಲ. ಈ ಬಾರಿ ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ ಈಗಲೇ ಜಲಾಶಯದ ಹೂಳೆತ್ತಲು ಒಳ್ಳೆಯ ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಸಾರ್ವಜನಿಕರ ಬೇಡಿಕೆಗೆ, ಜಿಲ್ಲಾಧಿಕಾರಿಗಳು ಈ ಕೆಲಸಕ್ಕೆ ಸುತ್ತಲಿನ ಗ್ರಾಮಸ್ಥರು ಸಹಕಾರ ನೀಡಬೇಕು. ಎರಡು ಜೆಸಿಬಿ ಬಳಸಿ ಹೂಳೆತ್ತಲಾಗುವುದು. ಆದರೆ ಹೂಳೆತ್ತಿದ ಮಣ್ಣನ್ನು ರೈತರು ತಮ್ಮ ತಮ್ಮ ಹೊಲಗಳಿಗೆ ಸಾಗಿಸಿಕೊಳ್ಳಬೇಕೆಂದು ತಿಳಿಸಿದರು. ತಮ್ಮದೇ ಊರಿನಲ್ಲಿ ಜಲಾಶಯವಿದ್ದರೂ, ಸನವಳ್ಳಿ ಗ್ರಾಮಕ್ಕೆ ಈ ನೀರು ಪೂರೈಕೆಯಾಗದೇ ಇರುವುದನ್ನು ಮನಗಂಡು, ಮುಂದಿನ ದಿನಗಳಲ್ಲಿ ಸನವಳ್ಳಿ ಮತ್ತು ಸನವಳ್ಳಿ ಪ್ಲಾಟ್ಗೆ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದರು.
ನೀರಿನ ಸದುಪಯೋಗವಾಗದೇ ಇಟ್ಟಿಗೆ ಭಟ್ಟಿಗೆ ಬಳಕೆಯಾಗುತ್ತಿರುವ ಕುರಿತು ಪತ್ರಕರ್ತರು ಗಮನ ಸೆಳೆದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನೀರಿನ ಸದುಪಯೋಗ ಮಾಡಿಕೊಳ್ಳಬೇಕು. ಅನಧಿಕೃತ ಬಳಕೆ ಮುಂದುವರೆದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಶೀಲ್ದಾರ ಮತ್ತು ಎಸಿಯವರಿಗೆ ತಾಕೀತು ಮಾಡಿದರು.
ಮುಂಡಗೋಡ ಪಟ್ಟಣಕ್ಕೆ ವರದಾ ನದಿಯಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಎಸ್ಟಿಮೇಟ್ ಪ್ರಕಾರ ಕಾಮಗಾರಿ ಸ್ಥಳದಲ್ಲಿ ಅಗೆದ ಮಣ್ಣನ್ನು 200 ಮೀ. ದೂರಕ್ಕೆ ಸಾಗಿಸಬೇಕು. ಆದರೆ ಇಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಮಣ್ಣು ಸುರುವಲಾಗಿದೆ. ಇದರಿಂದ ಕಾಮಗಾರಿಯ ಪ್ರಗತಿಗೆ ತೊಂದರೆಯಾಗುತ್ತದೆ. ನಿಯಮಾನುಸಾರ ಕೆಲಸ ನಿರ್ವಹಿಸಿ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ನಂತರ ಮಿನಿವಿಧಾನಸೌಧಕ್ಕೆ ಭೇಟಿ ನೀಡಿ, ಸಭಾಭವನ, ಕೋರ್ಟ್ ಹಾಲ್, ಪಡಸಾಲೆಯ ಪೀಠೋಪಕರಣ ಕಾಮಗಾರಿ ಪೂರ್ಣಗೊಂಡಿರುವುದನ್ನು ವೀಕ್ಷಿಸಿದರು. ಮಿನಿವಿಧಾನಸೌಧದ ಸುತ್ತಮುತ್ತಲೂ ಖುಲ್ಲಾ ಜಾಗವಿದ್ದು, ಈ ಸ್ಥಳದಲ್ಲಿ ಉದ್ಯಾನ ನಿರ್ಮಿಸುವಂತೆ ಸಲಹೆ ನೀಡಿದರು. ಮಿನಿ ವಿಧಾನಸೌಧದ ಮುಖ್ಯ ದ್ವಾರದ ಬಳಿ 10 ನಿಮಿಷಕ್ಕೂ ಹೆಚ್ಚು ಕಾಲ ನಿಂತು ಜಿಲ್ಲಾಧಿಕಾರಿಗಳು ತಹಶೀಲ್ದಾರ ಕಚೇರಿಗೆ ಬರುವ ಸಾರ್ವಜನಿಕರ ಬಳಿ ಚರ್ಚೆ ನಡೆಸಿದರಲ್ಲದೇ, ಅವರ ಕುಂದು ಕೊರತೆಯನ್ನು ಆಲಿಸಿದರು.
ನಂತರ ಬಾಚಣಕಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲಿಂದ ಟಿಬೇಟನ್ ಕಾಲನಿಗೆ ಕೂಡ ಭೇಟಿ ನೀಡಿ ಕೇಂದ್ರಸ್ಥಾನಕ್ಕೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮುಂಡಗೋಡ ತಹಶೀಲ್ದಾರರು ಹಾಗೂ ಉಪವಿಭಾಗಾಧಿಕಾರಿ ಜಿಲ್ಲಾಧಿಕಾರಿಗಳೊಂದಿಗೆ ಇದ್ದರು.







