ಮಂಜೇಶ್ವರ: 70 ಪವನ್ ಚಿನ್ನಾಭರಣ, ನಗದು ಕಳ್ಳತನ
ಮಂಜೇಶ್ವರ, ಎ.22: ಹೊಸಂಗಡಿ ಸಮೀಪದ ಕಡಂಬಾರು ಬೆಜ್ಜ ಎಂಬಲ್ಲಿ ಮನೆಯೊಂದರ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು 70 ಪವನ್ ಚಿನ್ನಾಭರಣ ಹಾಗೂ 5,000 ರೂ. ದೋಚಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಬೆಜ್ಜ ರಸ್ತೆಯ ಪಳ್ಳ ನಿವಾಸಿ ಸಂಜೀವಿ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆ ಮಂದಿ ಪಕ್ಕದಲ್ಲೇ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ನಗ-ನಗದು ದೋಚಿ ಪರಾರಿಯಾಗಿದ್ದಾರೆ.
ಘಟನೆಯ ವಿವರ: ಸಂಜೀವಿ ಶೆಟ್ಟಿ ಮತ್ತು ಮನೆಮಂದಿ ಮನೆಗೆ ಬೀಗ ಹಾಕಿ ಸಂಜೆ 7:30ರ ವೇಳೆಗೆ ಮನೆಗೆ ಸಮೀಪದ ಚೌಕಾರು ಎಂಬಲ್ಲಿ ನಡೆಯುತ್ತಿದ್ದ ಮಂತ್ರವಾದಿ ಗುಳಿಗ ದೈವದ ವರ್ಷಾವಧಿ ಉತ್ಸವಕ್ಕೆಂದು ಮನೆಯಿಂದ ತೆರಳಿದ್ದರು. ಸಂಜೀವಿ ಅವರ ಪುತ್ರಿ ಮೀನಾಕ್ಷಿ ಗುಜರಾತ್ನ ಬರೋಡಾ ನಿವಾಸಿಯಾಗಿದ್ದು, ಮದುವೆ ಸಮಾರಂಭಕ್ಕೆಂದು ಗುಜರಾತ್ನಿಂದ 70 ಪವನ್ ಚಿನ್ನಾರಣ ತಂದಿದ್ದರು. ಈ ಚಿನ್ನವನ್ನು ಮನೆಯ ಅಡುಗೆ ಕೋಣೆಯಲ್ಲಿ ಬುಟ್ಟಿಯೊಂದರಲ್ಲಿ ಮುಚ್ಚಿಡಲಾಗಿತ್ತು. ಇದೇ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ರಾತ್ರಿ 2 ಗಂಟೆಯ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯ ಅಡುಗೆ ಕೋಣೆಯ ಕಿಟಕಿ ಮುರಿದ ಸ್ಥಿತಿಯಲ್ಲಿ ಮತ್ತು ಬಾಗಿಲು ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕಳ್ಳತನ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದ್ದು, ಮಾಹಿತಿ ಕಲೆ ಹಾಕಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.