ಮುಡಿಪು : ಧರ್ಮದ ರಕ್ಷಣೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು - ಶ್ರೀ ಶಶಿಕಾಂತ ಸ್ವಾಮಿ ಅಭಿಮತ
ಕೊಣಾಜೆ: ಧರ್ಮದ ರಕ್ಷಣೆಯೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಪೋಷಕರು ತಮ್ಮ ಮಕ್ಕಳಿಗೆ ಕಲಿಸಿಕೊಡುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣದ ಸಂಕಲ್ಪತೊಡಬೇಕು ಎಂದು ಬಾಳೆಕೋಡಿ ಕನ್ಯಾನ ಶ್ರೀ ಕಾಶೀ ಕಾಳಭೈರವೇಶ್ವರ ಕ್ಷೇತ್ರದ ಸದ್ಗುರು ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಮುಡಿಪು ಧರ್ಮ ಜಾಗೃತಿ ವೇದಿಕೆ ವತಿಯಿಂದ ಭಾನುವಾರ ಶ್ರೀ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಹಾವಿನಲ್ಲಿ ಎಷ್ಟೇ ವಿಷವಿರಬಹುದು, ಆದರೆ ಅದು ವಾಸಿಸುವ ಹುತ್ತ ನಿರ್ಮಿಸುವುದು ಸಣ್ಣ ಗೆದ್ದಲುಗಳಾಗಿವೆ. ಅದೇ ರೀತಿ ಸಂಘಟನೆಗಳನ್ನು ಮುಖಂಡರು ಹುಟ್ಟುಹಾಕಿದರೂ ಉಳಿಸಿ, ಬೆಳೆಸುವ ಕೆಲಸ ಕಾರ್ಯಕರ್ತರದ್ದಾಗಿದೆ.
ಇಂದಿನ ಆಧುನಿಕತೆಯ ಪರಿವರ್ತನೆಯಿಂದಾಗಿ ಹಿಂದಿನ ಮದುವೆ ಶಾಸ್ತ್ರವೂ ಪರಿವರ್ತನೆಗೊಂಡಿದೆ. ಇಂತಹ ಸಂದರ್ಭದಲ್ಲಿ ಧರ್ಮ ಜಾಗೃತಿ ವೇದಿಕೆಯಿಂದ ಧಾರ್ಮಿಕತೆ ಅಡಿಯಲ್ಲಿ ನಡೆದಿರುವ ಸರಳ ಮದುವೆ ಮಾದರಿಯಾಗಿದೆ ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಆರ್ಎಸ್ಎಸ್ ಕಾರ್ಯವಾಹ ದಾಮೋದರ ನೆತ್ತರೆಕೆರೆ ಮಾತನಾಡಿ, ನಮ್ಮ ಸಂಸ್ಕೃತಿಯ ರಕ್ಷಣೆ, ಧರ್ಮ ಜಾಗೃತಿಯನ್ನು ಯುವ ಸಮುದಾಯದಲ್ಲಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಹಿಂದು ಸಂಸ್ಕೃತಿ, ಆಚಾರ ವಿಚಾರ ಮನೆಯಲ್ಲೇ ಪರಿವರ್ತನೆಯಾಗಿದೆ. ದೇವಸ್ಥಾನದಲ್ಲಿ ಮದುವೆ ಇಟ್ಟು ಬಳಿಕ ಡಿನ್ನರ್ಗೆ ಅಲ್ಲಿಂದಲೇ ಹೋಗುತ್ತಾರೆ. ಮಕ್ಕಳ ಎದುರೇ ಮಧ್ಯದ ಪಾರ್ಟಿ ಮಾಡಲಾಗುತ್ತದೆ. ಹುಟ್ಟುಹಬ್ಬ ಮೇಣದ ಬತ್ತಿ ನಂದಿಸುವ ಮೂಲಕ ಆಚರಿಸುವುದಾದರೆ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ. ಧರ್ಮ ಉಳಿಸುವ ಹೆಸರಲ್ಲಿ ಯಾರೊಂದಿಗೋ ಹೊಡೆದಾಡುವ ಬದಲು ಮನೆಯಲ್ಲೇ ಮಕ್ಕಳಿಗೆ ಧಾರ್ಮಿಕ ಅರಿವು ಮೂಡಿಸಿ ಜಾಗೃತರನ್ನಾಗಿಸಿ ಎಂದು ಕಿವಿಮಾತು ಹೇಳಿದರು. ಶ್ರೀ ಮುಡಿಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ಕೊಡಕ್ಕಲ್ಲು ಮುರಳಿ ಮೋಹನ ಭಟ್, ಸುಮಂಗಲಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ, ಗಟ್ಟಿ ಸಮಾಜದ ನಾಯ್ಗರ ಪ್ರತಿನಿಧಿ ಬಿ.ಪದ್ಮನಾಭ ಗಟ್ಟಿ ಬೆಳ್ಮ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸುನಿತಾ ನಾಯಕ್, ಬೋಳಿಯಾರ್ನ ಸ್ವರ್ಣೋದ್ಯಮಿ ಪ್ರಭಾಕರ ಆಚಾರ್ಯ, ಶ್ರೀ ಕ್ಷೇತ್ರ ಕಣಂತೂರು ತೋಡಕುಕ್ಕಿನ್ನಾರ್ ದೈವಸ್ಥಾನದ ಅಧ್ಯಕ್ಷ ನಾರ್ಯಗುತ್ತು ಮಂಜು ಭಂಡಾರಿ ಯಾನೆ ತಿಮ್ಮಪ್ಪ ಕೊಂಡೆ ಮೊದಲಾದವರು ಉಪಸ್ಥಿತರಿದ್ದರು.
ಧರ್ಮ ಜಾಗೃತಿ ಸಮಿತಿಯ ಗೌ.ಸಲಹೆಗಾರ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿ ಪ್ರಸ್ತಾವಿಸಿದರು. ಮಾರ್ಗದರ್ಶಕ ಸಂತೋಷ್ ಕುಮಾರ್ ರೈ ವಂದಿಸಿದರು. ಸಮಿತಿ ಸದಸ್ಯರಾದ ಹೇಮಚಂದ್ರ ಕೈರಂಗಳ ಹಾಗೂ ಚಂದ್ರಕಾಂತ್ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪ್ರಯುಕ್ತ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶಿವಪೂಜೆ, ಸ್ವಯಂವರ ಪಾರ್ವತಿ ಪೂಜೆ, ಸಾಮೂಹಿಕ ಕುಂಕಮಾರ್ಚನೆ, ಸರಳ ಆದರ್ಶ ವಿವಾಹ, ಯಕ್ಷಗಾನ ಬಯಲಾಟ ಮೊದಲಾದ ಕಾರ್ಯಕ್ರಮಗಳು ನಡೆದವು.