ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಕೊರತೆ
ಮಂಗಳೂರು, ಎ.24: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಕೊರತೆಯಿರುವುದರಿಂದ ಇಂದು ತುಂಬೆ ವೆಂಟೆಡ್ ಡ್ಯಾಮ್ನ ಆಚೆಗಿನ ನದಿಪಾತ್ರದಲ್ಲಿ ಅಲ್ಲಲ್ಲಿ ಶೇಖರಗೊಂಡಿರುವ ನೀರನ್ನು ಹರಿಸುವ ಪ್ರಕ್ರೀಯೆ ನಡೆಸಲಾಯಿತು.
ಶನಿವಾರದಂದು ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಮಟ್ಟವನ್ನು ಮನಪಾ ಮೇಯರ್ ಹರಿನಾಥ್ ಅವರು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ತುಂಬೆ ವೆಂಟೆಡ್ ಡ್ಯಾಮ್ಗೆ ಅಲ್ಲಲ್ಲಿ ಶೇಖರಗೊಂಡಿರುವ ನೀರನ್ನು ಹರಿಸುವ ನಿರ್ಧಾರವನ್ನ ತೆಗೆದುಕೊಂಡ ಹಿನ್ನೆಲೆಯಲ್ಲಿ ಇಂದು ಈ ಕಾರ್ಯಚರಣೆಯನ್ನು ಮಾಡಲಾಯಿತು.
ಇಂದು 30 ಮಂದಿ ಕಾರ್ಮಿಕರು ಅಲ್ಲಲ್ಲಿ ಶೇಖರಗೊಂಡಿರುವ ನೀರನ್ನು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದ್ದಾರೆ. ತುಂಬೆ ವೆಂಟೆಡ್ ಡ್ಯಾಮ್ನಿಂದ ಏಎಂಆರ್ ವೆಂಟೆಡ್ ಡ್ಯಾಮ್ವರೆಗೆ ಇರುವ ನದಿಪಾತ್ರದಲ್ಲಿ ರೈತರು ಕೆಲವೆಡೆ ತಮ್ಮ ಕೃಷಿಕಾರ್ಯಕ್ಕೆ ಕಲ್ಲುಗಳನ್ನು ಕಟ್ಟಿ, ಗೋಣಿಚೀಲಗಳನ್ನು ಹಾಕಿ ನೀರನ್ನು ಶೇಖರಿಸಿದ್ದರು. ಇವತ್ತು ನಡೆದ ಕಾರ್ಯಚರಣೆಯಲ್ಲಿ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನ ಸುತ್ತಮುತ್ತಲಲ್ಲಿ 6 ಕಡೆ ಈ ರೀತಿಯಲ್ಲಿ ನೀರನ್ನು ಸಂಗ್ರಹಿಸಿಟ್ಟಿರುವುದನ್ನು ತೆರವುಗೊಳಿಸಲಾಯಿತು.
ಮನಪಾ ಇಇ ನಿಂಗೇಗೌಡ, ಎಇಇ ನರೇಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು ಮನಪಾ ಮೇಯರ್ ಹರಿನಾಥ್ ಪರಿಶೀಲನೆ ನಡೆಸಿದರು.
ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಎರಡು ದಿನಕ್ಕೊಮ್ಮೆ ನೀರು ಕೊಡುವಾಗ 3 ಇಂಚಿನಷ್ಟು ನೀರಿನ ಮಟ್ಟ ಕಡಿಮೆಯಾಗುತ್ತಿದೆ.ಇದೀಗ ಅಲ್ಲಲ್ಲಿ ಶೇಖರಗೊಂಡಿರುವ ನೀರನ್ನು ತುಂಬೆ ವೆಂಟೆಡ್ ಡ್ಯಾಮ್ಗೆ ಹರಿಸಿದರೆ ಸ್ವಲ್ಪವಾದರೂ ನೀರು ಸಿಗಬಹುದೆಂಬ ಭರವಸೆಯಿಂದ ಈ ಕಾರ್ಯ ನಡೆಸಲಾಗುತ್ತಿದೆ. ಸೋಮವಾರವು ಈ ಕಾರ್ಯಚರಣೆ ಮುಂದುವರಿಯಲಿದೆ- ಹರಿನಾಥ್, ಮನಪಾ ಮೇಯರ್