ಕೊರಗ ಕುಟುಂಬಕ್ಕೆ 94ಸಿ ಹಕ್ಕುಪತ್ರ ನೀಡಿ

ಪುತ್ತೂರು, ಎ.24: ಕೆಯ್ಯೂರು ಗ್ರಾಮದಲ್ಲಿರುವ ಅತ್ಯಂತ ಕಡು ಬಡವರಾಗಿರುವ ಎರಡು ಕೊರಗ ಜನಾಂಗದ ಕುಟುಂ ಬಕ್ಕೆ ಇದುವರೆಗೆ 94 ಸಿ ಹಕ್ಕುಪತ್ರ ಸಿಕ್ಕಿಲ್ಲ. ಅವರಲ್ಲಿ ಹಕ್ಕು ಪತ್ರ ಪಡೆಯಲು ಪಾವತಿ ಮಾಡಬೇಕಾದ ಹಣವನ್ನು ಕಟ್ಟಲೂ ಸಾಧ್ಯವಿಲ್ಲ. ಹೀಗಿರುವಾಗ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಕೆಯ್ಯೂರು ಗ್ರಾಮ ಸಭೆಯಲ್ಲಿ ಗ್ರಾಮ ಸ್ಥರು ಒತ್ತಾಯಿಸಿದರು. ಗ್ರಾಪಂ ಅಧ್ಯಕ್ಷ ಬಾಬುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಿವರಾಮ ರೈ ಕಜೆ, ಕೊರಗ ಜನಾಂಗದ ಕುಟುಂಬಗಳು ತೀರಾ ಬಡತನದಲ್ಲಿವೆ. ಅವರ ಸ್ಥಿತಿಯನ್ನು ನೋಡಲು ಸಾಧ್ಯವಿಲ್ಲದ್ದಾಗಿದೆ. ಮನೆ ಇಲ್ಲದೆ ಚಪ್ಪರ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಅವರಿಗೆ ಇದು ವರೆಗೆ 94ಸಿ ಹಕ್ಕುಪತ್ರ ಸಿಕ್ಕಿಲ್ಲ. ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೊಡೆಲ್ ಅಧಿಕಾರಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಸುಧಾಕರ ರೈ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. *ಎನ್ಆರ್ಇಜಿ ಕೂಲಿ ಹಣ ಹೆಚ್ಚಳ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಇದೀಗ ಕೂಲಿ ಮೊತ್ತ 224 ರೂ. ಆಗಿದ್ದು ಪ್ರತಿಯೊಬ್ಬರು ಯೋಜನೆ ಯಡಿಯಲ್ಲಿ ಕೆಲಸ ಮಾಡಬೇಕು ಎಂದು ಯೋಜನೆಯ ಸಹಾಯಕ ನಿರ್ದೇಶಕ ಸುಧಾಕರ ರೈ ತಿಳಿಸಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಹನೀಫ್ ಕೆ.ಎಂ, ವಿಮಲಾ, ಸುಮಿತ್ರಾ, ಹರಿಣಾಕ್ಷಿ, ಲಾವಣ್ಯ, ರಾಧಿಕಾ, ಪದ್ಮಾವತಿ, ಅಮಿತಾ ರೈ, ಗೀತಾ ಉಪಸ್ಥಿತರಿದ್ದರು. ಪಿಡಿಒ ಕೆ.ಎಂ. ಸುಬ್ರಹ್ಮಣ್ಯ ಸ್ವಾಗತಿಸಿ, ವಂದಿಸಿದರು.





