335ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ: ಡಿಸಿ ಘೋಷ್
ಕಾರವಾರ, ಎ. 25: ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿರುವ 89ಗ್ರಾಮ ಪಂಚಾಯತ್ ವ್ಯಾಪ್ತಿಯ 335 ಗ್ರಾಮ/ಮಜಿರೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಹೇಳಿದ್ದಾರೆ.
ಎಪ್ರಿಲ್ 24ರವರೆಗೆ ಜಿಲ್ಲೆಯಲ್ಲಿ 2.21ಲಕ್ಷ ಕುಟುಂಬಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗಿದ್ದು, ಇದಕ್ಕೆ 53ಲಕ್ಷ ರೂ. ವೆಚ್ಚವಾ
ಗಿದೆ. 2013-14ನೆ ಸಾಲಿನಲ್ಲಿ 58ಲಕ್ಷ ರೂ. ವೆಚ್ಚದಲ್ಲಿ 129ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿತ್ತು. 2014-15ರಲ್ಲಿ 52ಲಕ್ಷ ರೂ. ವೆಚ್ಚದಲ್ಲಿ 133 ಜನವಸತಿಗಳಿಗೆ, 2015ರ ಎಪ್ರಿಲ್, ಮೇ ತಿಂಗಳಲ್ಲಿ 20ಲಕ್ಷ ರೂ. ವೆಚ್ಚದಲ್ಲಿ 64 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ ಎಂದು ಮಾಹಿತಿನೀಡಿದರು.ವೆಬ್ಸೈಟ್ನಲ್ಲಿ ಪ್ರಕಟ: www.uttarakannada.nic.in ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಮನೆಗಳಿಗೆ ನೀರು ಪೂರೈಕೆ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯತ್ ಪಿಡಿಒ ಸ್ಥಳದಲ್ಲಿ ಉಪಸ್ಥಿತರಿದ್ದು, ಎಲ್ಲಾ ಮನೆಗಳಿಗೆ ನೀರು ದೊರೆಯುವಂತೆ ನೋಡಿಕೊಳ್ಳಬೇಕು. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ ಸಂಪೂರ್ಣ ವಿವರಗಳನ್ನು ಪ್ರತಿದಿನ ಜಿಲ್ಲಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತಿದೆ. ಇದರಲ್ಲಿ ನೀರು ಪೂರೈಕೆ ಮಾಡಿದ ಗ್ರಾಮಗಳು, ಮಜಿರೆಗಳ ವಿವರ, ಟ್ಯಾಂಕರ್ಗಳ ಸಂಖ್ಯೆ, ಪೂರೈಕೆ ಮಾಡಿದ ನೀರಿನ ಪ್ರಮಾಣ, ಪೂರೈಕೆದಾರರ ವಿವರ, ಟ್ಯಾಂಕರ್ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಲಾಗುತ್ತಿದೆ. ಸಾರ್ವಜನಿಕರು ಇದನ್ನು ಪರಿಶೀಲಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಮಿತವಾಗಿ ಬಳಸಿ: ಟ್ಯಾಂಕರ್ ಮೂಲಕ ಒದಗಿಸಲಾಗುವ ನೀರನ್ನು ಮಿತವಾಗಿ ಬಳಸಬೇಕು. ಇದನ್ನು ಕುಡಿಯಲು ಮುಂತಾದ ಅತ್ಯಾವಶ್ಯಕ ಕಾರ್ಯಗಳಿಗೆ ಮಾತ್ರ ಬಳಸಬೇಕು. ದೊಡ್ಡ ಟ್ಯಾಂಕರ್ ಹೋಗಲು ಕಷ್ಟವಾಗಿರುವ ಸ್ಥಳಗಳಿಗೆ ಸಣ್ಣ ವಾಹನಗಳಲ್ಲಿ ನೀರಿನ ಟ್ಯಾಂಕ್ ಇಟ್ಟು ನೀರು ಪೂರೈಸಲು ಅವಕಾಶ ನೀಡಲಾಗಿದೆ. ಕುಡಿಯುವ ನೀರು ಪೂರೈಕೆ ಹಾಗೂ ಕಾಮಗಾರಿಗಳಿಗೆ ಅನುದಾನ ಲಭ್ಯವಿದ್ದು, ವಿವೇಚನೆಯಿಂದ ಇದರ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಅವರು ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಸಭೆ ನಡೆಸಿ ನೀರು ಪೂರೈಕೆಯನ್ನು ಸಮರ್ಪಕಗೊಳಿಸುವ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಎಲ್ಲಾ ಅಧಿಕಾರಿ, ಸಿಬ್ಬಂದಿ ತಮ್ಮ ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಲು ಸ್ಪಷ್ಟ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.







