ಕಾನೂನುಬಾಹಿರ ಮೀನುಗಾರಿಕೆ: ಒಕ್ಕೂಟದಿಂದ ಧರಣಿ

ಕಾರವಾರ, ಎ.25: ಕ್ರಮಬದ್ಧವಲ್ಲದ ಮೀನುಗಾರಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟ ಸೋಮವಾರ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ನಗರದ ಕಡಲ ತೀರದ ಮಕ್ಕಳ ಉದ್ಯಾನವನದಲ್ಲಿ ಸೇರಿದ ಜಿಲ್ಲೆಯ ವಿವಿಧ ಮೀನುಗಾರಿಕಾ ಸಂಘಟನೆಯ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದವು. ಬಳಿಕ ತಾವು ತಂದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಶೀಘ್ರವೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಲೈಟ್ ಫಿಶಿಂಗ್ ನಡೆಯುತ್ತಿದ್ದು, ಮೀನುಗಾರರ ಬದುಕಿಗೆ ಕಂಟಕಪ್ರಾಯವಾಗಿರುವ ಈ ಅವೈಜ್ಞ್ಞಾನಿಕ ಮೀನುಗಾರಿಕೆ ಪದ್ಧತಿ ತಕ್ಷಣ ನಿಷೇಧಿಸದಿದ್ದರೆ, ಮುಂದಿನ ದಿನಗಳಲ್ಲಿ ಸರಕಾರ ಸಾಂಪ್ರದಾಯಿಕ ಮೀನುಗಾರರಿಂದ ಉಗ್ರವಾದ ಹೋರಾಟ ಎದುರಿಸ ಬೇಕಾಗುವುದು ಎಂದು ಸಾಂಪ್ರದಾಯಿಕ ಮೀನುಗಾರರ ಸಂಘಟನೆಯ ಮುಖಂಡ ಸದಾನಂದ ಹರಿಕಂತ್ರ ಎಚ್ಚರಿಕೆ ನೀಡಿದರು. ಜಿಲ್ಲೆಯ ಕರಾವಳಿಯುದ್ದಕ್ಕೂ ಲಕ್ಷಕ್ಕೂ ಹೆಚ್ಚಿನ ಮೀನುಗಾರರು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಮೀನುಗಾರಿಕೆ ಎಂಬುದು ವಿಶಿಷ್ಟ ಕಲೆ, ಮೀನಿನ ಸಂಪತ್ತು ದೇಶದ ಸಂಪತ್ತಾಗಿದೆ. ನೈಸರ್ಗಿಕ ನಿಯಮಾನುಸಾರ ಮೀನುಗಾರಿಕೆ ನಡೆಸಬೇಕು. ನಿಸರ್ಗದ ನಿಯಮಾನುಸಾರ ಅದನ್ನೇ ನಂಬಿ ಸಾಂಪ್ರದಾಯಿಕ ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಪ್ರಕೃತಿ ನಿಯಮಾನುಸಾರ ಮೀನುಗಾರಿಕೆ ನಡೆಸಿದ್ದರಿಂದ ಇಲ್ಲಿಯವರೆಗೆ ಮೀನುಗಾರಿಕೆ ಉದ್ಯೋಗ ಉಳಿದುಕೊಂಡು ಬಂದಿದೆ. ಈ ಬಗ್ಗೆ ಮೀನುಗಾರರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮೀನುಗಾರಿಕೆ ಬಗ್ಗೆ ಅವಲೋಕಿಸಿದರೆ, ಮೀನುಗಾರಿಕೆ ಉದ್ಯೋಗದ ಮೇಲೆ ಕರಿ ಛಾಯೆ ಆವರಿಸಿದ್ದು, ಭಯ, ಭೀತಿಯ ವಾತಾವರಣ ಉಂಟಾಗಿದೆ. ಅವೈಜ್ಞ್ಞಾನಿಕ ರೀತಿಯ ಯಾಂತ್ರೀಕೃತ ಮೀನುಗಾರಿಕೆಯ ದುರ್ಬಳಕೆಯಿಂದ ಅದೆಷ್ಟೋ ಮೀನಿನ ಸಂತತಿ ನಾಶಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈ ಅಕ್ರಮ, ಕಾನೂನು ಬಾಹಿರ ಪದ್ಧತಿಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸಹಾಯಕ ಆಯುಕ್ತ ಪ್ರಶಾಂತ್ಕುಮಾರ್ ಬಿ. ಎಸ್. ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ನಂತರ ಮೀನುಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಈ ಅವೈಜ್ಞಾನಿಕ ಪದ್ಧತಿಯನ್ನು ನಿಷೇಧಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಾಂಪ್ರದಾಯಿಕ ಮೀನುಗಾರ ಮುಖಂಡರ ಸಭೆ ಕರೆದು, ಚರ್ಚಿಸಿ ಸರಕಾರಕ್ಕೆ ವರದಿ ಕಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂ
ರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಮೀನುಗಾರರ ಪ್ರಮುಖರಾದ ಮಹದೇವ್ ಕುಮಟೇಕರ, ದೇವರಾಯ್ ಸೈಲ್, ಸುರೇಶ್ ಹರಿಕಂತ್ರ, ನಾಗಪ್ಪ ಹರಿಕಂತ್ರ, ರಾಮಕೃಷ್ಣ ತಾಂಡೇಲ್, ಸುದೇಶ ಸಾರಂಗ್, ರಾಜೇಂದ್ರ ನಾವಗೇ, ಪ್ರಶಾಂತ ಮೆಹ್ತಾ, ಸಂತೋಷ್ ಹರಿಕಂತ್ರ, ವಿಠ್ಠಲ್ ಹರಿಕಂತ್ರ, ಕೃಷ್ಣ ಹರಿಕಂತ್ರ, ರೋಹಿದಾಸ ಬಾನಾವಳಿ, ವಿಷ್ಣು ಕೊಚ್ರೇಕರ, ಆನಂದು ಸೈಲ್, ಶ್ರೀಪಾದ್ ಖೊಬ್ರೇಕರ ಮುಂತಾದವರು ಸೇರಿದಂತೆ ಜಿಲ್ಲೆಯಾದ್ಯಂತ ಐದುನೂರಕ್ಕೂ ಹೆಚ್ಚು ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







