ಎ.28ರಿಂದ 30ರವರೆಗೆ ಕಾಪುವಿನಲ್ಲಿ 39ನೆ ರಾ. ಸೀನಿಯರ್ ಥ್ರೋಬಾಲ್ ಚಾಂಪಿಯನ್ಶಿಪ್
ಕಾಪು, ಎ.26: ಪುರುಷರ ಮತ್ತು ಮಹಿಳೆಯರ 39ನೆ ರಾಷ್ಟ್ರೀಯ ಸೀನಿಯರ್ ಥ್ರೋಬಾಲ್ ಚಾಂಪಿಯನ್ಶಿಪ್ ಎ.28ರಿಂದ 30ರವರೆಗೆ ಮೂರು ದಿನಗಳ ಕಾಲ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ.
ಕಾಪುವಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಟೂರ್ನಿಯ ಸಂಘಟಕರಲ್ಲಿ ಒಬ್ಬರಾದ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಆಚಾರ್ಯ ತಿಳಿಸಿದರು. ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಕಾಪುವಿನಂಥ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ತ್ರೋಬಾಲ್ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲ ಸಲವಾಗಿದೆ ಎಂದವರು ಹೇಳಿದರು.
ಕರ್ನಾಟಕ ಅಮೆಚೂರು ತ್ರೋಬಾಲ್ ಸಂಸ್ಥೆ, ಉಡುಪಿ ಜಿಲ್ಲಾ ಥ್ರೋಬಾಲ್ ಸಂಸ್ಥೆ ಹಾಗೂ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಈ ಟೂರ್ನಿ ನಡೆಯಲಿದೆ. ಇದರಲ್ಲಿ ದೇಶದ 27 ರಾಜ್ಯಗಳ ಪುರುಷ ಮತ್ತು ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. 750 ಆಟಗಾರರು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
ಎ.28ರಂದು ಬೆಳಗ್ಗೆ 9ಕ್ಕೆ ಕಾಪು ಪಟ್ಟಣದಿಂದ ತಂಡಗಳ ಆಟಗಾರರು ಪಥಸಂಚಲನ ಹಾಗೂ ಮೆರವಣಿಗೆ ಮೂಲಕ ವಿದ್ಯಾನಿಕೇತನ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. 9:30ಕ್ಕೆ ಆರಂಭಗೊಳ್ಳುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕ್ರೀಡಾಸಚಿವ ಅಭಯಚಂದ್ರ ಜೈನ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಉದ್ಯಮಿ ಹಾಗೂ ವಿದ್ಯಾನಿಕೇತನ ಸಮೂಹ ಸಂಸ್ಥೆಯ ಗೌರವಾಧ್ಯಕ್ಷ ಪಿ.ರಾಮದಾಸ್ ಮಡ್ಮಣ್ಣಾಯ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾರತ ತ್ರೋಬಾಲ್ ಫೆಡರೇಶನ್ನ ಮುಖ್ಯ ಕಾರ್ಯದರ್ಶಿ ಟಿ.ರಾಮಣ್ಣ, ರಾಜ್ಯ ಸಂಸ್ಥೆಯ ಅಧ್ಯಕ್ಷ ಗುರುರಾಜ್, ಗೌರವ ಕಾರ್ಯದರ್ಶಿ ಕೆ.ಎನ್.ಗೋವಿಂದರಾಜ್ ಹಾಗೂ ಕಾಪು ಉದ್ಯಮಿ ಹರಿಜೀವನ್ ಶೆಟ್ಟಿ ಉಪಸ್ಥಿತರಿರುವರು.
ಪಂದ್ಯಗಳು ಲೀಗ್ ಕಮ್ ಸೂಪರ್ ಲೀಗ್ ಆಧಾರದಲ್ಲಿ ನಡೆಯಲಿವೆ. ಕೆಲವು ಪಂದ್ಯಗಳು ಹೊನಲು ಬೆಳಕಿನಲ್ಲೂ ನಡೆಯಲಿವೆ. ಟೂರ್ನಿಯ ಎರಡೂ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳಿಗೆ ಟ್ರೋಫಿಗಳನ್ನು ನೀಡಲಾಗುವುದು.
ಟೂರ್ನಿಯ ಸಮಾರೋಪ ಸಮಾರಂಭ ಎ.30ರಂದು ಸಂಜೆ 4ಕ್ಕೆ ನಡೆಯಲಿದೆ. ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಕಳೆದ ಬಾರಿ ಹರ್ಯಾಣಕ್ಕೆ ಸಮಗ್ರ ಪ್ರಶಸ್ತಿ
ಕಳೆದ ವರ್ಷ ಮಹಾರಾಷಟ್ಟೆದ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಹರ್ಯಾಣ ತಂಡಗಳು ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಪ್ರಶಸ್ತಿ ಜಯಿಸಿದ್ದವು.
ಪುರುಷರ ವಿಭಾಗದಲ್ಲಿ ಕರ್ನಾಟಕ, ಛತ್ತೀಸ್ಗಢ, ಮಹಾರಾಷ್ಟ್ರ, ಮಧ್ಯಪ್ರದೇಶ ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ, ತಮಿಳುನಾಡು, ಛತ್ತೀಸ್ಗಢ, ದಿಲ್ಲಿ ತಂಡಗಳು ಬಲಿಷ್ಠವಾಗಿದ್ದು ಇಲ್ಲಿ ಪ್ರಶಸ್ತಿ ಜಯಿಸುವ ಫೆವರೀಟ್ಗಳಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಯೋಜಕ ಹರಿಜೀವನ್ ಶೆಟ್ಟಿ, ಗೋವಿಂದರಾಜು ಕೆ.ಎನ್., ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಪ್ರೊ.ಪಿ.ಕೃಷ್ಣ ರಾವ್, ವಿದ್ಯಾಧರ್ ಪುರಾಣಿಕ್, ಸ್ಮಿತಾ ಮೋರ್, ವಿ.ಕೆ.ಉದ್ಯಾವರ ಹಾಗೂ ಸಂತೋಷ್ ಉಪಸ್ಥಿತರಿದ್ದರು.