ಮನಪಾ ಕಚೇರಿ ಚರಾಸ್ತಿ ಜಪ್ತಿಗೆ ಮುಂದಾದ ಕೋರ್ಟ್
ಶಿವಮೊಗ್ಗ, ಎ. 26: ಇತ್ತೀಚೆಗಷ್ಟೆ ಚರಾಸ್ತಿ ಜಪ್ತಿಯ ಅವಮರ್ಯಾದೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು, ಮಂಗಳವಾರ ಮತ್ತೆ ಚರಾಸ್ತಿ ಜಪ್ತಿಯ ‘ಅವಮರ್ಯಾದೆ’ಯ ಸನ್ನಿವೇಶಕ್ಕೆ ಸಾಕ್ಷಿಯಾಗುವ ಹಂತಕ್ಕೆ ಬಂದಿತ್ತು. ತನ್ನ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಗೆ ಮತ್ತೊಮ್ಮೆ ಪಾಲಿಕೆ ಆಡಳಿತ ಸಾರ್ವಜನಿಕ ವಲಯದಲ್ಲಿ ಮುಜು ಗರಕ್ಕೀಡಾಗುವಂತಾಯಿತು. ಕೋರ್ಟ್ ಅಮೀನರ ತಂಡ ಬೆಳಗ್ಗೆ ಪಾಲಿಕೆ ಕಚೇರಿಗೆ ಆಗಮಿಸಿ ಆಯುಕ್ತರ ಕೊಠಡಿಯಲ್ಲಿದ್ದ ಚರಾಸ್ತಿ ಜಪ್ತಿಗೆ ಮುಂದಾ ಯಿತು. ವಿಷಯ ತಿಳಿದ ಮೇಯರ್, ಆಯುಕ್ತರು ನ್ಯಾಯಾಲಯದ ಮೊರೆ ಹೋಗಿದ್ದ ಅರ್ಜಿದಾರರು ಹಾಗೂ ಕೋರ್ಟ್ ಅಮೀನರ ತಂಡದೊಂದಿಗೆ ಸುದೀರ್ಘ ಸಮಾ ಲೋಚನೆ ನಡೆಸಿದರು. ಸಂಬಂಧಿಸಿದ ಕಡ
<
ಗಳನ್ನು ಪರಿಶೀಲಿಸಿದರು. ಅಂತಿಮವಾಗಿ ಕಾಲಮಿತಿಯೊಳಗೆ ಅರ್ಜಿದಾರರಿಗೆ ಪಾಲಿಕೆಯವತಿಯಿಂದ ಕಲ್ಪಿಸಬಹುದಾದ ನೆರವು ಕಲ್ಪಿಸುವ ಭರವಸೆ ನೀಡಿದರು. ಆದರೆ, ಈ ಹಿಂದೆ ನೀಡಿದ್ದ ಭರವಸೆಯಂತೆ ನಡೆದುಕೊಳ್ಳದ ಕಾರಣದಿಂದ ಯಾವುದೇ ಕಾರಣಕ್ಕೂ ಈ ಬಾರಿ ಜಪ್ತಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೋರ್ಟ್ ಅಮೀನರು ಪಟ್ಟು ಹಿಡಿದರು ಎನ್ನಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ವಿಳಂಬವಾ ಗುವುದಿಲ್ಲವೆಂಬ ಆಡಳಿತ ಗಾರರ ಭರವಸೆಯ ಹಿನ್ನೆಲೆಯಲ್ಲಿ, ಕೋರ್ಟ್ ಅಮೀನರು ಜಪ್ತಿ ಕಾರ್ಯವನ್ನು ಮತ್ತೆ ಅರ್ಧಕ್ಕೆ ಸ್ಥಗಿತಗೊಳಿಸಿ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಜಪ್ತಿ ಪ್ರಕ್ರಿಯೆಯಿಂದ ಮತ್ತೆ ಪಾಲಿಕೆ ಆಡಳಿತ ತಪ್ಪಿಸಿಕೊಂಡಂತಾಗಿದೆ. ಕೋರ್ಟ್ ಆದೇಶ: ಸಿವಿಲ್ ಪ್ರಕರಣವೊಂದರಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಮಹಾನಗರ ಪಾಲಿಕೆ ಆಡಳಿತದ ಚರಾಸ್ತಿ ಜಪ್ತಿಗೆ ಸ್ಥಳೀಯ ಜೆಎಂಎಫ್ಸಿ ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಳೆದ ಕೆಲ ತಿಂಗಳ ಹಿಂದೆ ಆದೇಶ ಹೊರಡಿಸಿತ್ತು. ಅದರಂತೆ ಮಾರ್ಚ್ 22ರಂದು ಕೋರ್ಟ್ ಅಮೀನರ ತಂಡ ಪಾಲಿಕೆಗೆ ಆಗಮಿಸಿ, ಸ್ಥಿರಾಸ್ತಿ ಜಪ್ತಿಗೆ ಮುಂದಾಗಿದ್ದರು. ಮೇಯರ್ರವರು ಮಧ್ಯಪ್ರವೇಶಿಸಿ ಸಂಬಂಧಿಸಿದ ಅರ್ಜಿದಾರರ ಸಮಸ್ಯೆ ಇತ್ಯರ್ಥಪಡಿಸುವ ಭರವಸೆಯಿತ್ತಿದ್ದರು. ಏನಿದು ಪ್ರಕರಣ?: ವಿಜಯನಗರ ಬಡಾವಣೆಯ ನಿವಾಸಿ ತಮ್ಮಯ್ಯ ಎಂಬವರಿಗೆ ಸೇರಿದ ನಿವೇಶನದಲ್ಲಿ 2011 ರಲ್ಲಿ ಅಂದಿನ ರಸ್ತೆ ನಿರ್ಮಾಣ ಮಾಡಲಾಗಿತ್ತು. ಕುಡಿಯುವ ನೀರಿನ ಪೈಪ್ ಅಳವಡಿಕೆ ಮಾಡಲಾಗಿತ್ತು. ರಸ್ತೆ ನಿರ್ಮಾಣಕ್ಕೆ ನಿವೇಶನದ ಮಾಲಕ ತಮ್ಮಯ್ಯರವರ ಅನುಮತಿ ಕೂಡ ಪಡೆದಿರಲಿಲ್ಲ. ನಗರಸಭೆಯ ಈ ಕ್ರಮದ ವಿರುದ್ಧ ತಮ್ಮಯ್ಯರವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನಗರಸಭೆಯ ವಿರುದ್ಧ ಕೇಸ್ ದಾಖಲಿಸಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಅರ್ಜಿದಾರರಿಗೆ ಸೂಕ್ತ ನ್ಯಾಯ ಕಲ್ಪಿಸುವಂತೆ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ಅರ್ಜಿದಾರರಿಗೆ ನ್ಯಾಯ ಕಲ್ಪಿಸುವ ವ್ಯವಸ್ಥೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು.







