ಗ್ಯಾಸ್ ಸಿಲಿಂಡರ್ ಸ್ಫೋಟ: ಮನೆ ಭಸ್ಮ
ಉಳ್ಳಾಲ, ಎ.26: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಯೊಂದು ಸಂಪೂರ್ಣವಾಗಿ ಭಸ್ಮಗೊಂಡಿರುವ ಘಟನೆ ಕಿನ್ಯಾ ಗ್ರಾಮದ ಸಾಂತ್ಯಗುತ್ತು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕಿನ್ಯಾ ಸಾಂತ್ಯಗುತ್ತು ನಿವಾಸಿ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಗಣೇಶ್ ಮತ್ತು ಕುಟುಂಬಸ್ಥರು ಕಿನ್ಯಾ ಬೆಳರಿಂಗೆಯಲ್ಲಿ ನಡೆಯುತ್ತಿದ್ದ ಕುಟುಂಬದ ನೇಮೋತ್ಸವಕ್ಕೆ ತೆರಳಿದ್ದರು. ಈ ವೇಳೆ ಘಟನೆ ಸಂಭವಿಸಿದೆ.
ತಡರಾತ್ರಿ ವೇಳೆ ಸ್ಫೋಟದ ಸದ್ದು ಸ್ಥಳೀಯ ಮನೆಯವರಿಗೆ ಕೇಳಿಬಂದಿತ್ತು. ಕೂಡಲೇ ಸ್ಥಳೀಯರು ಗಣೇಶ್ರಿಗೆ ಕರೆ ಮಾಡಿ ತಿಳಿಸಿದ್ದರು. ಗಣೇಶ್ ಮನೆಗೆ ಬಂದಾಗ ಮನೆ ಸಂಪೂರ್ಣ ಬೆಂಕಿಯಿಂದ ಆವರಿಸಿತ್ತು. ಸ್ಥಳೀಯರೆಲ್ಲರೂ ಸೇರಿ ನೀರು ಹಾಯಿಸುವಷ್ಟರಲ್ಲಿ ಮನೆ ಮತ್ತು ಮನೆಯಲಿದ್ದ ಚಿನ್ನಾಭರಣ, ನಗದು, ದಾಸ್ತಾನಿರಿಸಿದ್ದ ಅಡಿಕೆ, ಇಲೆಕ್ಟ್ರಾನಿಕ್ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಸಿಲಿಂಡರ್ ಸ್ಫೋಟದಿಂದಾಗಿ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಘಟನೆಯಿಂದ ಸುಮಾರು 20 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತಾದರೂ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲದಿದ್ದರಿಂದ ಅವರು ಅಲ್ಲಿಗೆ ತಲುಪಲು ಅಸಾಧ್ಯವಾಯಿತು. ಸ್ಥಳಕ್ಕೆ ಕಂದಾಯ ಅಧಿಕಾರಿ, ಪಂಚಾಯತ್ ಸದಸ್ಯರು ಭೇಟಿ ನೀಡಿದ್ದಾರೆ.