ಉಳ್ಳಾಲ ಕೊಲೆಯತ್ನ ಪ್ರಕರಣ: ಓರ್ವನ ಬಂಧನ
ಮಂಗಳೂರು, ಎ.27: ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ಪಿಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗಿನ ವೇಳೆ ಮೀನಿನ ವ್ಯಾಪಾರಕ್ಕೆ ತೆರಳುತ್ತಿದ್ದ ಇಬ್ರಾಹೀಂ ನಶ್ಮಾನ್ ಎಂಬವರ ಮೇಲಿನ ಕೊಲೆಯತ್ನ ಪ್ರಕರಣದ ಆರೋಪಿಗಳ ಪೈಕಿ ಕುಂಪಲ ನಿವಾಸಿ ಶಿವರಾಜ್ ಯಾನೆ ಶಿವ (18) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆರೋಪಿ ಶಿವರಾಜ್ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದು, ಈತನನನು ಸಿಸಿಬಿ ಪೊಲೀಸರು ತಲಪಾಡಿ ಬಳಿ ಇಂದು ಮುಂಜಾನೆ ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ಕೈದು ಮಂದಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.
ಎ. 26ರಂದು ಬೆಳಗ್ಗೆ ತೊಕ್ಕೊಟ್ಟು ಒಳಪೇಟೆ ಬಳಿ ಸಫ್ವಾನ್, ನಿಝಾಮ್ ಹಾಗೂ ಸಲೀಂ ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣ ಸೇರಿ ಎರಡೂ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಎಸಿಪಿ ಕಲ್ಯಾಣ್ ಶೆಟ್ಟಿ, ಕೊಣಾಜೆ ಮತ್ತು ಪಣಂಬೂರು ಠಾಣೆ ಹಾಗೂ ಸಿಸಿಬಿ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ 10 ಜನ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯೂ ನಡೆಯುತ್ತಿದೆ. ಎ. 26ರಂದು ಸಂಜೆ ಕಲ್ಲಾಪುವಿನಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 7 ದಿನಗಳವರೆಗೆ ನಿಷೇಧಾಜ್ಞೆ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಪ್ರಿಲ್ 26ರ ಸಂಜೆ 6 ಗಂಟೆಯಿಂದ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿಗೊಳಿಸಲಾಗಿದ್ದು, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ- ಸಭೆ ನಡೆಸುವುದು, ಶಸ್ತ್ರಾಸ್ತ್ರಗಳನ್ನು ಒಯ್ಯುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಪ್ರತಿಕೃತಿಗಳ ಪ್ರದರ್ಶನ, ಬಹಿರಂಗ ಘೋಷಣೆ, ಸಂಜ್ಞೆ ಮಾಡುವುದು, ಸಂಗೀತ ನುಡಿಸುಉದು, ಸಂಕೇತಗಳ ಭಿತ್ತಿ ಪತ್ರ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ ಹಾಗೂ ಸಾಮಾಜಿಕ ಭದ್ರತೆಗೆ ಬಾಧಕವಾಗುವ ಯಾವುದೇ ರೀತಿಯ ಕೃತ್ಯಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದರು.
ಬಿಗಿ ಬಂದೋಬಸ್ತ್
ಉಳ್ಳಾಲ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕರ್ತವ್ಯಕ್ಕೆ 10 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 5 ಪೊಲೀಸ್ ಉಪಾಧೀಕ್ಷಕರು, 8 ಪೊಲೀಸ್ ನಿರೀಕ್ಷಕರು, 6 ಪೊಲೀಸ್ ಉಪ ನಿರೀಕ್ಷಕರು, 10 ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಹಾಗೂ 260 ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 600 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದರು.
ಉಳ್ಳಾಲದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ರೇಂಜ್ ಲೆವೆಲ್ನಲ್ಲಿ ಯೋಜನೆ ಸಿದ್ಧುಪಡಿಸಿ ಟೆಂಡರ್ ಕೂಡಾ ಕರೆಯಲಾಗಿದೆ ಎಂದು ಹೇಳಿದ ಅವರು, ಉಳ್ಳಾಲ ಸ್ಟೇಷನ್ನಲ್ಲಿ ಇನ್ಸ್ಪೆಕ್ಟರ್ ಮಾತ್ರವಲ್ಲದೆ ನಗರದ ವಿವಿಧ ಕಡೆಗಳಲ್ಲಿ ಇರುವ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಗೃಹ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಉಳ್ಳಾಲ ಠಾಣೆಯಲ್ಲಿ ಪಣಂಬೂರು ಇನ್ಸ್ಪೆಕ್ಟರ್ರವರನ್ನು ಇನ್ಚಾರ್ಜ್ ಆಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಡಿಸಿಪಿಗಳಾದ ಡಾ. ಸಂಜೀವ ಎಂ. ಪಾಟೀಲ ಾಗೂ ಶಾಂತರಾಜು ಉಪಸ್ಥಿತರಿದ್ದರು.
ಬಾಕ್ಸ್ ಮಾಡಬಹುದು.....
ಅಮಾಯಕರ ಮೇಲೆ ಹಲ್ಲೆ ಮಾಡುವವರಿಗೆ ಬಿಸಿ ಮುಟ್ಟಿಸಬೇಕಿದೆ!
ಎಪ್ರಿಲ್ 12ರದು ಉಳ್ಳಾಲದ ಮೊಗವೀರಪಟ್ಣದಲ್ಲಿ ಹಲ್ಲೆಗೊಳಗಾದ ಮೀನುಗಾರ ರಾಜು ಕೋಟ್ಯಾನ್ ಸೇರಿದಂತೆ, ಎಪ್ರಿಲ್ 25 ಮತ್ತು 26ರಂದು ಹಲ್ಲೆಗೊಳಗಾಗಿರುವ ಇಬ್ರಾಹೀಂ ನಶ್ವಾನ್, ಸಫಾನ್, ಸಲೀಂ ಹಾಗೂ ನಿಝಾಮ್ ಕೂಡಾ ಅಮಾಯಕರಾಗಿದ್ದಾರೆ. ತಮ್ಮ ಪಾಡಿಗೆ ತಮ್ಮ ಕರ್ತವ್ಯಕ್ಕೆ ತೆರಳುತ್ತಿದ್ದವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಬೇಕಾಗಿದೆ. ಹಲ್ಲೆ ನಡೆಸಿರುವ ಆರೋಪಿಗಳು ಹಾಗೂ ಅವರ ಹಿಂದೆ ಇರುವವರಿಗೂ ಬಿಸಿ ಮುಟ್ಟಿಸಲೇ ಬೇಕಾಗಿದೆ. ಇಲ್ಲವಾದಲ್ಲಿ ಮುಂದೆ ಈ ದುಷ್ಕರ್ಮಿಗಳ ಗುರಿ ನಾನು ಅಥವಾ ನೀವೂ ಆಗಿರಬಹುದು ಎಂದು ಆಯುಕ್ತ ಚಂದ್ರಶೇಖರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮತೀಯವಾದ ಒಂದು ಸಮಸ್ಯೆಯಾಗಿ ಪರಿಣಮಿಸಿದ್ದು, ಹಲ್ಲೆ ಪ್ರಕರಣಗಳಲ್ಲಿ ಮಾದಕ ದ್ರವ್ಯ ಜಾಲದ ಕೈವಾಡದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಹಲ್ಲೆಗೆ ಕಾರಣದ ಬಗ್ಗೆಯೂ ವಿಚಾರಣೆಯ ವೇಳೆ ಬಹಿರಂಗವಾಗಲಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.





