ಕುಡಿಯುವ ನೀರು ಕಾಮಗಾರಿ ಪೂರ್ಣಗೊಳಿಸದವರ ವಿರುದ್ಧ ಶಿಸ್ತು ಕ್ರಮ: ಎನ್. ಜಯರಾಮ್
ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ

ಕಾರವಾರ, ಎ.27: ನೈಸರ್ಗಿಕ ವಿಕೋಪದಡಿಯಲ್ಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಎಪ್ರಿಲ್ ಅಂತ್ಯದ ಒಳಗಾಗಿ ಪೂರ್ಣಗೊಳಿಸದ ಇಂಜಿನಿಯರ್ಗಳ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಎನ್. ಜಯರಾಮ್ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಡಿಯುವ ನೀರಿನ ವಿವಿಧ ಕಾಮಗಾರಿಗಳ ಹಾಗೂ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನೈಸರ್ಗಿಕ ವಿಕೋಪ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1,341 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇದುವರೆಗೆ ಕೇವಲ 852 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಇದರಲ್ಲಿ 196 ಬೋರ್ವೆಲ್ ಸಂಬಂಧಪಟ್ಟ ಕಾಮಗಾರಿಗಳು ಬಾಕಿಯಿವೆ. ತುರ್ತಾಗಿ 45 ದಿನಗಳ ಒಳಗಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದ್ದು, ವಿಳಂಬ ಮಾಡಿದರೆ ಸಂಬಂಧಪಟ್ಟ ಇಂಜಿನಿಯರರನ್ನು ಹೊಣೆಗಾರ ಮಾಡಿ ಕ್ರಮ ಜರಗಿಸುವಂತೆ ಅವರು ಹೇಳಿದರು.
ಶೋಕಾಸ್ ನೊಟೀಸ್: ಉದ್ಯೋಗ ಖಾತ್ರಿ ಯೋಜನೆಯಡಿ ಮುಂಡಗೋಡು ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ಸಮರ್ಪಕವಾಗಿ ಉದ್ಯೋಗ ಕಲ್ಪಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಫಲರಾಗಿದ್ದು, ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಬೇಕು. ತಾಲೂಕು ಮಟ್ಟದಲ್ಲಿ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳು ವಾರದಲ್ಲಿ ಕನಿಷ್ಠ 3ದಿನಗಳ ಕಾಲ ಆಯಾ ತಾಲೂಕುಗಳಲ್ಲಿ ವಾಸ್ತವ್ಯವಿದ್ದು, ಬರಪರಿಹಾರ ಕಾಮಗಾರಿಗಳನ್ನು ಪರಿಶೀಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ನಲ್ಲಿ ಕನಿಷ್ಠ ಎರಡು ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಟ್ಯಾಂಕರ್ ಪಾರದರ್ಶಕತೆ ಇರಲಿ: ಟ್ಯಾಂಕರ್ ನೀರು ಪೂರೈಕೆ ಮಾಡುವ ಸಂದಭರ್ದಲ್ಲಿ ಪಾರದರ್ಶಕತೆಯನ್ನು ಪಾಲಿಸಬೇಕು. ಟ್ಯಾಂಕರ್ ನೀರು ಸರಬರಾಜು ಮಾಡಿರುವ ಬಗ್ಗೆ ಗ್ರಾಮಸ್ಥರಿಂದ ಸಹಿ ಪಡೆದುಕೊಳ್ಳಬೇಕು. ಟ್ಯಾಂಕರ್ ನೀರಿಗೆ ಬೇಡಿಕೆಯಿರುವ ಗ್ರಾಮಗಳಲ್ಲಿ ಖಾಸಗಿ ನೀರಿನ ಮೂಲಗಳು ಲಭ್ಯವಿದೆಯೇ ಎಂದು ಪರಿಶೀಲಿಸಬೇಕು. ಲಭ್ಯವಿದ್ದರೆ ಅದಕ್ಕೆ ಸೂಕ್ತ ದರ ನಿಗದಿಪಡಿಸಿ ಬಳಸಿಕೊಳ್ಳಬಹುದಾಗಿದೆ ಎಂದರು.
ಹೆಲ್ಪ್ಲೈನ್ ಪರಿಶೀಲನೆ:
ಕುಡಿಯುವ ನೀರಿನ ಕುರಿತು ಅಹವಾಲು ಸ್ವೀಕರಿಸಲು ಆರಂಭಿಸಲಾಗಿರುವ ಸಹಾಯವಾಣಿಯ ಕಾರ್ಯವೈಖರಿಯನ್ನು ಸ್ವತಃ ಪ್ರಾದೇಶಿಕ ಆಯುಕ್ತರು ಕರೆ ಮಾಡಿ ಪರಿಶೀಲಿಸಿದ ಪ್ರಸಂಗ ನಡೆಯಿತು. ಭಟ್ಕಳ ತಹಶೀಲ್ದಾರ್ ಕಚೇರಿ ಸಹಾಯವಾಣಿಗೆ ಕರೆ ಮಾಡಿದಾಗ, ಸಂಬಂಧಪಟ್ಟ ಪಿಡಿಒಗೆ ಕರೆ ಮಾಡುವಂತೆ ಆ ಕಡೆಯಿಂದ ಉತ್ತರ ಬಂತು. ಸಹಾಯವಾಣಿ 24ಗಂಟೆ ಕಾಲ ಕಾರ್ಯನಿರ್ವಹಿಸಬೇಕು. ಕನಿಷ್ಠ ಕರೆ ಮಾಡಿದವರ ಸಂಪರ್ಕ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಕೇಳಿ ರಿಜಿಸ್ಟರ್ನಲ್ಲಿ ದಾಖಲಿಸಿ, ಸಂಬಂಧಪಟ್ಟ ಪಿಡಿಒಗೆ ಅವರೇ ಕರೆ ಮಾಡಿ ತಿಳಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಪ್ರಾಣೇಶ್ ರಾವ್, ರಾಯ್ಕರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







