ಘನತ್ಯಾಜ್ಯ ವಿಲೇವಾರಿಯಲ್ಲಿ ಅವ್ಯವಹಾರ: ಕಾರ್ಪೊರೇಟರ್ ಅಜೀಝ್ ಆರೋಪ
ಮಂಗಳೂರು, ಎ. 28: ಮಂಗಳೂರು ಮಹಾನಗರ ಪಾಲಿಕೆಯ ಘನ ತ್ಯಾಜ್ಯ ವಿಲೇವಾರಿ ಅವ್ಯವಹಾರದಲ್ಲಿ ಗುತ್ತಿಗೆ ಪಡೆದಿರುವ ಆ್ಯಂಟನಿ ಕಂಪೆನಿಯು ಕೋಟ್ಯಂತರ ರೂ ಲೂಟಿ ನಡೆಸಿದ್ದು, ಈ ಅವ್ಯವಾರದಲ್ಲಿ ಅಧಿಕಾರಿಗಳ ಶಾಮೀಲಾಗಿದ್ದಾರೆ ಎಂದು ಕುದ್ರೋಳಿ ವಾರ್ಡ್ನ ಕಾರ್ಪೊರೇಟರ್ ಎಂ.ಅಬ್ದುಲ್ ಅಜೀಝ್ ಕುದ್ರೋಳಿ ಆರೋಪ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು, ಪಾಲಿಕೆಯು ಘನ ತ್ಯಾಜ್ಯ ವಿಲೇವಾರಿಗಾಗಿ ಆ್ಯಂಟನಿ ಕಂಪೆನಿಗೆ ಏಳು ವರ್ಷದ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಸಂಬಂಧಿಸಿ ಕರಾರು ಪತ್ರವನ್ನು ಮಾಡಲಾಗಿದ್ದರೂ, ಕರಾರಿ ಪತ್ರದಲ್ಲಿನ ನಿಯಮಗಳನ್ನು ಕಂಪೆನಿ ಉಲ್ಲಂಘಿಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದರು.
ಕರಾರಿನಂತೆ ಆ್ಯಂಟನಿ ಕಂಪೆನಿಯು ತನ್ನ ಘನ ತ್ಯಾಜ್ಯ ವಿಲೇವಾರಿಗೆ ಹೊಸ ವಾಹನಗಳನ್ನು ಬಳಕೆ ಮಾಡಬೇಕು. ಮತ್ತು ವಾಹನವು ಕಂಪೆನಿಯ ಹೆಸರಿನಲ್ಲಿರಬೇಕು. ಆದರೆ ಉಪ ಗುತ್ತಿಗೆ ನೀಡಿ ಹಳೆಯ ವಾಹನಗಳಲ್ಲಿ ಘನ ತಾಜ್ಯಗಳನ್ನು ವಿಲೇವಾರಿ ಮಾಡುತ್ತಿದೆ. ಕರಾರಿನಲ್ಲಿ ಮಾಡಲಾಗಿರುವ ನಿಯಮದಂತೆ ಹಳೆಯ ವಾಹನಗಳಲ್ಲಿ ವಿಲೇವಾರಿ ಮಾಡಿದರೆ ಕಂಪೆನಿಗೆ ಹಣವನ್ನು ಪಾವತಿಸುವಂತಿಲ್ಲ. ಮತ್ತು ಕಂಪೆನಿಯು ಉಪ ಗುತ್ತಿಗೆಯನ್ನೂ ನೀಡುವಂತಿಲ್ಲ. ಆದರೆ ಇವೆಲ್ಲ ನಿಯಮವನ್ನು ಗಾಳಿಗೆ ತೂರಿ ಕಂಪೆನಿಯು ಘನ ತ್ಯಾಜ್ಯ ವಿಲೇವಾರಿಗಾಗಿ ಉಪ ಗುತ್ತಿಗೆ ನೀಡಿದೆಯಲ್ಲದೆ, ಹಳೆಯ ವಾಹನಗಳನ್ನು ಬಳಸಿ ವಿಲೇವಾರಿ ಮಾಡುತ್ತಿದೆ. ಆದರೂ ಪಾಲಿಕೆಯ ವತಿಯಿಂದ ಆ್ಯಂಟನಿ ಕಂಪೆನಿಗೆ ಕೋಟಿಗೂ ಹೆಚ್ಚಿನ ಹಣ ವಾಪತಿಸಲಾಗುತ್ತಿದೆ. ಈ ಹಣ ಪಾವತಿಯಲ್ಲಿ ಕಾಣದ ಕೈಗಳ ಸಹಿತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅಜೀಝ್ ಕುದ್ರೋಳಿ ಆರೋಪ ಮಾಡಿದರು.
ಆ್ಯಂಟನಿ ಕಂಪೆನಿಯು ತ್ಯಾಜ್ಯ ವಿಲೇವಾರಿಗೆ ಬಳಸಿದ ವಾಹನಗಳಲ್ಲಿ 23 ವಾಹನಗಳು ಉಪ ಗುತ್ತಿಗೆಯಲ್ಲಿ ಪಡೆಯಲಾಗಿದೆ. 17 ವಾಹನಗಳು ಹಳೆಯದ್ದಾಗಿವೆ. 18 ವಾಹನಗಳು ಮಾತ್ರ ಹೊಸ ವಾಹನಗಳಾಗಿವೆ. ಹೊರ ಗುತ್ತಿಗೆ ಮತ್ತು ಹಳೆಯ ವಾಹನಗಳ ಮೇಲೆ ಹಣ ಪಾವತಿಸವಂತಿಲ್ಲ. ಒಟ್ಟಾರೆ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಪಡೆದಿರುವ ಆ್ಯಂಟನಿ ಕಂಪೆನಿಯು ಕೇವಲ ಶೇ. 35 ಮಾತ್ರ ನಿಯಮದಂತೆ ಕೆಲಸ ನಿರ್ವಹಿಸುತ್ತಿದ್ದರೆ, ಶೇ. 65ರಷ್ಟು ಕೆಲಸಗಳು ಉಪ ಗುತ್ತಿಗೆದಾರರಿಂದ ಮಾಡಿಸುತ್ತಿದೆ ಎಂದು ಆರೋಪಿಸಿದರು.
ಘನತ್ಯಾಜ್ಯ ವಿಲೇವಾರಿಯಲ್ಲಿ ಸುಮಾರು ತಿಂಗಳಿಗೆ 99 ಲಕ್ಷದಷ್ಟು ಸಾರ್ವಜನಿಕ ಹಣ ಲೂಟಿಯಾಗುತ್ತಿದೆ. ಈ ಬಗ್ಗೆ ಕಳೆದ ಮನಪಾ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ, ಆಡಳಿತ ಪಕ್ಷದವರ ಮತ್ತು ವಿರೋಧ ಪಕ್ಷದವರ ಗಮನ ಸೆಳೆಯಲಾಗಿದೆ. ಅಲ್ಲದೆ, ಈ ಬಗ್ಗೆ ಆ್ಯಂಟನಿ ಕಂಪೆನಿಗೆ ಬಿಲ್ ಪಾವತಿ ತಡೆಹಿಡಿಯಬೇಕೆಂದು ಮೇಯರ್ ಮತ್ತು ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಈ ವರೆಗೂ ಆ್ಯಂಟನಿ ಕಂಪೆನಿಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ. ಇದೇ ತಿಂಗಳಲ್ಲಿ ಕೆಂಪೆನಿಗೆ 2 ಕೋಟಿ ರೂ.ಗೂ ಹೆಚ್ಚಿನ ಹಣ ಪಾವತಿಸಿರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಅಜೀಝ್ ಕುದ್ರೋಳಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಪೊರೇಟರ್ ರಮಿಝಾ ನಾಸಿರ್, ಪ್ರಧಾನ ಕಾರ್ಯದರ್ಶಿ ರಾಮಗಣೇಶ್, ಕಾರ್ಯದರ್ಶಿ ವಸಂತ ಪೂಜಾರಿ, ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುನೀರ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.