ಕಾಟಾಜೆಯ 22 ಕುಟುಂಬಗಳ ಜಮೀನಿಗೆ ಹಕ್ಕುಪತ್ರ ನೀಡಲು ಡಿಸಿ ಸೂಚನೆ

ಬೆಳ್ತಂಗಡಿ, ಎ.28: ನೆರಿಯ ಗ್ರಾಮದ ಕಾಟಾಜೆ ಪರಿಸರದಲ್ಲಿ ವಾಸಿಸುತ್ತಿರುವ 22 ಕುಟುಂಬಗಳ ಜಮೀನಿಗೆ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಭೂಮಾಲಕರಿಂದ ದೌರ್ಜನ್ಯಕ್ಕೆ ಒಳಗಾದ ಸುಂದರ ಮಲೆಕುಡಿಯಗೆ ಅಂಗವಿಕಲವೇತನ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಬೆಳ್ತಂಗಡಿ ತಹಶೀಲ್ದಾರ್ರಿಗೆ ಸೂಚಿಸಿದರು.
ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಗಳನ್ನು ಆಲಿಸಿ ಅವರು ಮಾತನಾಡಿದರು.
ಸುಂದರ ಮಲೆಕುಡಿಯ ಅವರು ತಮ್ಮ ಜಮೀನಿಗೆ ಹಕ್ಕುಪತ್ರ ನೀಡುವಂತೆ ಮನವಿ ಸಲ್ಲಿಸಿದಾಗ ಕಡತಗಳನ್ನು ತರಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಮ- ಸಕ್ರಮ ಕಡತಗಳನ್ನು ಕೂಡಲೇ ಸಮಿತಿಯ ಮುಂದಿಡುವಂತೆ ಸೂಚಿಸಿದರು. ಈ ಜಮೀನು ಪೊರಂಬೋಕು ಎಂದು ಪಹಣಿ ಪತ್ರದಲ್ಲಿ ನಮೂದಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳು ತಿಳಿಸಿದರು.
ಜಂಟಿ ಸರ್ವೇ ನಡೆಸಿದಾಗ ಇದು ಅರಣ್ಯ ಇಲಾಖೆಯ ಜಮೀನಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸುಂದರ ಮಲೆಕುಡಿಯ ಮತ್ತು ಇತರರು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕಡತಗಳನ್ನು ಕೂಡಲೇ ಸಮಿತಿಯ ಮುಂದೆ ಇಡುವಂತೆ ಸೂಚನೆ ನೀಡಲಾಯಿತು. ತನ್ನ ಎರಡೂ ಕೈಗಳನ್ನು ಕಳೆದುಕೊಂಡಿರುವ ಸುಂದರ ಮಲೆಕುಡಿಯ ದುಡಿದು ಬದುಕುವುದು ಕಷ್ಟವಾಗಿದ್ದು, ಅವರಿಗೆ ಅಂಗವಿಕಲವೇತನ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಿವೃತ್ತ ಸೈನಿಕ ಚಂದಪ್ಪರಿಗೆ ಮಂಜೂರಾ ಗಿರುವ ಜಮೀನನ್ನು ಅವರಿಗೆ ಹಸ್ತಾಂತರಿ ಸದ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಲವು ವರ್ಷಗಳಿಂದ ಅವರು ಜಮೀನಿಗಾಗಿ ಅಲೆಯುತ್ತಿದ್ದಾರೆ. ನ್ಯಾಯಾಲಯದ ಆದೇಶವೂ ಅವರ ಪರವಾಗಿದೆ. ಎರಡು ತಿಂಗಳ ಹಿಂದೆ ಈ ಬಗ್ಗೆ ಸೂಚನೆ ನೀಡಿದ್ದರೂ ಇನ್ನೂ ಯಾಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ತಹಶೀಲ್ದಾರ್, ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದಾಗ, ಯಾವುದೋ ಆದೇಶಗಳನ್ನು ಹಿಡಿದು ದಿಕ್ಕು ತಪ್ಪಿಸುವುದು ಬೇಡ. ಹೈಕೋರ್ಟ್ ಆದೇಶದಂತೆ ಅವರಿಗೆ ಮಂಜೂರಾಗಿರುವ ಜಮೀನನ್ನು ಅವರಿಗೆ ಹಸ್ತಾಂತರಿಸಿ ಎಂದು ಡಿಸಿ ಸೂಚಿಸಿದರು. ತಮ್ಮನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಮುಂದಾಗುತ್ತಿದೆ. ಹಲ ವಾರು ಎಕ್ರೆ ಸರಕಾರಿ ಜಮೀನು ಅಕ್ರಮ ವಾಗಿದ್ದರೂ ಅದನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಕುವೆಟ್ಟು ಗ್ರಾಮದ ಪಣಕಜೆ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಗುಡಿಸಲುಗಳನ್ನು ಕಟ್ಟಿ ಕುಳಿತವರು ಜಿಲ್ಲಾಧಿಕಾರಿಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ತಹಶೀ ಲ್ದಾರರಲ್ಲಿ ಪ್ರಶ್ನಿಸಿದ ಅವರು, ತೆರವುಗೊಳಿ ಸುವುದಾದರೆ ಎಲ್ಲರನ್ನೂ ತೆರವುಗೊಳಿಸಿ. ಮೊದಲು ದೊಡ್ಡ ಅಕ್ರಮಗಳತ್ತ ಗಮನ ಹರಿಸಿ ಎಂದು ಸೂಚಿಸಿದರು.
ಕನ್ಯಾಡಿ ಗ್ರಾಮದಲ್ಲಿ ಒಂದೇ ಜಮೀ ನಿಗೆ ಇಬ್ಬರಿಗೆ ಹಕ್ಕುಪತ್ರ ನೀಡಲಾಗಿರುವ ಕುತೂಹಲಕಾರಿ ವಿಚಾರವೊಂದನ್ನು ಜಿಲ್ಲಾಧಿಕಾರಿಯವರ ಮುಂದೆ ತರಲಾ ಯಿತು. ಕಾಂತಪ್ಪನಾಯ್ಕ ಎಂಬವರಿಗೆ 1976ರಲ್ಲಿ 3.13 ಎಕ್ರೆ ಜಮೀನು ಮಂಜೂರಾಗಿತ್ತು. ಇದೀಗ ಇದೇ ಜಮೀನು ಇನ್ನೊಬ್ಬರಿಗೆ ಮಂಜೂರು ಮಾಡಲಾಗಿದೆ ಎನ್ನುವ ವಿಚಾರವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಕೂಡಲೆ ಪರಿಶೀಲನೆ ನಡೆಸಿ ಜಮೀನು ಅಳತೆ ಮಾಡಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು. ಬಿದ್ರೆ ಚರ್ಚ್ಗೆ 2014ರಲ್ಲಿ ಜಮೀನು ಮಂಜೂರಾಗಿ, ಹಕ್ಕುಪತ್ರವೂ ಸಿಕ್ಕಿದೆ. ಆದರೆ ಈಗ ಕಚೇರಿಯಲ್ಲಿ ಕಡತವೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಜಿಲ್ಲಾಧಿ ಕಾರಿಯವರ ಗಮನಕ್ಕೆ ತರಲಾಯಿತು. ತಹಶೀಲ್ದಾರ್ ಪ್ರಸನ್ನಮೂರ್ತಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.







