ಪಡುಬಿದ್ರೆಯಲ್ಲಿ ಟ್ರಾಪಿಕ್ ಜಾಮ್: ಎಸ್ಪಿ ಅಣ್ಣಾಮಲೈ ರಿಕ್ಷಾ ಚಾಲಕರಿಗೆ, ಕಟ್ಟಡ ಮಾಲಕರಿಗೆ ಎಚ್ಚರಿಕೆ
ಪಡುಬಿದ್ರೆ, ಎ . 29: ಪಡುಬಿದ್ರೆ ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ವಾಹನ ಸಂಚಾರ ದಟ್ಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದ್ದರಿಂದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಆಗಮಿಸಿ ಸುಗಮ ಸಂಚಾರಕ್ಕೆ ಕೆಲವು ನಿರ್ದೇಶನಗಳುನ್ನು ನೀಡಿದರು.
ಶುಕ್ರವಾರ ಶುಭಕಾರ್ಯಕ್ರಮ ಹೆಚ್ಚಾಗಿರುವುದರಿಂದ ವಾಹನ ಸಂಚಾರವೂ ಹೆಚ್ಚಾಗಿತ್ತು. ಮೊದಲೇ ಪಡುಬಿದ್ರೆ ಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಆರಂಭವಾಗದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲವೊಂದು ಕಟ್ಟಡಗಳ ಮುಂದೆ ಅಸ್ತವ್ಯಸ್ಥವಾಗಿ ವಾಹನ ನಿಲ್ಲಿಸಿದ್ದರಿಂದಲೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಸುದ್ದಿ ತಿಳಿದು ನೇರ ಪಡುಬಿದ್ರೆ ಗೆ ಆಗಮಿಸಿದ ಅಣ್ಣಾಮಲೈ ಅವರು ರಿಕ್ಷಾ ಚಾಲಕರಿಗೆ ರಸ್ತೆ ಪಕ್ಕದಲ್ಲಿ ಅಸ್ತವ್ಯಸ್ತವಾಗಿ ರಿಕ್ಷಾ ಪಾರ್ಕ್ ಮಾಡದಂತೆಯೂ ಕಟ್ಟಡ ಮಾಲೀಕರಿಗೂ ವಾಹನ ಪಾರ್ಕ್ ಮಾಡಲು ಕೆಲವೊಂದು ಸೂಚನೆಗಳನ್ನು ನೀಡಿದರು. ಇದಕ್ಕೆ ವಿರುದ್ಧವಾಗಿ ವರ್ತಿಸಿದರೆ ಸೂಕ್ತ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದರು.
ರಿಕ್ಷಾ ಬಂದ್: ರಿಕ್ಷಾ ಚಾಲಕರಿಗೆ ಎಚ್ಚರಿಕೆ ನೀಡಿದ್ದರಿಂದ ಆಕ್ರೋಶಿತರಾದ ರಿಕ್ಷಾ ಚಾಲಕರು ತಮ್ಮ ರಿಕ್ಷಾವನ್ನು ಬೀದಿಗಿಳಿಸದೆ ತಮ್ಮ ಪ್ರತಿಭಟನೆಯನ್ನು ನಡೆಸಿದರು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.