ಆಳ್ವಾಸ್ನಲ್ಲಿ 1,925 ಪದವೀಧರರಿಗೆ ಪದವಿ ಪ್ರದಾನ
ಮೂಡುಬಿದಿರೆ, ಎ.30: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಪ್ರವರ್ತಿತ ವಿವಿಧ ಕಾಲೇಜುಗಳ 1,925 ಮಂದಿ ಪದವೀಧರರಿಗೆ ಪದವಿ ಪ್ರದಾನ ಸಮಾರಂಭವು ಶನಿವಾರ ಸಂಜೆ ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ನಡೆಯಿತು.
ಮಣಿಪಾಲ ವಿವಿಯ ವಿಶ್ರಾಂತ ವೈಸ್ ಚಾನ್ಸೆಲರ್ ಡಾ.ಬಿ.ಎಂ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದರು.
ಈ ವೇಳೆ ಪದವೀಧರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವ್ಯಕ್ತಿಯನ್ನು ನಿಜವಾದ ಅರ್ಥದಲ್ಲಿ ನಾಗರಿಕನನ್ನಾಗಿಸುವುದೇ ಶಿಕ್ಷಣದ ಮೂಲ ಉದ್ದೇಶ. ಆರೋಗ್ಯಕರ ಮನಸ್ಸು ಮತ್ತು ನೀತಿಯುತ ನಡವಳಿಕೆ ಶಿಕ್ಷಣದಿಂದ ರೂಪುಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ನಾಡಿಗೆ ಮಹತ್ವಪೂರ್ಣ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿವಿಯ ವೈಸ್ ಚಾನ್ಸೆಲರ್ ಡಾ.ಕೆ.ಎಸ್. ರವೀಂದ್ರನಾಥ್, ಪದವಿ ಗಳಿಸುವುದೆಂದರೆ ಸಾಕಷ್ಟು ಸವಾಲುಗಳಿಗೆ ಮತ್ತು ಅವಕಾಶಗಳಿಗೆ ತೆರೆದುಕೊಂಡಂತೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ ಆಗಬೇಕು. ಯಾವುದೇ ರಂಗವನ್ನು ಪ್ರವೇಶಿಸಿದರೂ ಮಾನವೀಯತೆ, ವಿನಯಶೀಲತೆ, ಬದ್ಧತೆ, ಶ್ರದ್ಧೆ ಉಳಿಸಿಕೊಳ್ಳಿ ಎಂದ ಅವರು ವಿಶೇಷವಾಗಿ ಆರೋಗ್ಯ ವಿಭಾಗದವರು ಸೇವೆಯನ್ನು ಪರಮ ಧ್ಯೇಯವನ್ನಾಗಿ ಸ್ವೀಕರಿಸಿ ತಮ್ಮ ವೃತ್ತಿರಂಗವನ್ನು ಬೆಳಗಬೇಕು ಎಂದು ಕರೆ ನೀಡಿದರು.
ಟ್ರಸ್ಟಿಗಳಾದ ವಿವೇಕ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ನ ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.
ಡಾ. ಅಪೂರ್ವ, ಶ್ರೇಯಸ್ ಭಟ್, ಶಮೀರಾ ಬೆಳುವಾಯಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸ್ವಾಗತಿಸಿದರು. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ವಂದಿಸಿದರು. ನವ್ಯಾ ಜೈನ್ ಕಾರ್ಯಕ್ರಮ ನಿರೂಪಿಸಿದರು.