ಸುಳ್ಯ: ಸಚಿವರಿಗೆ ಸ್ವಾಗತ ಕೋರಿ ಅಳವಡಿಸಿದ್ದ ಬ್ಯಾನರ್ ತೆರವು
ಸುಳ್ಯ, ಎ.30: ಕಾಲೇಜು ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶುಭ ಕೋರಿ ಕಾಂಗ್ರೆಸ್ ನಾಯಕರು ಜಟ್ಟಿಪಳ್ಳದಿಂದ ಕೊಡಿಯಾಲಬೈಲು ತನಕ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್ಗಳನ್ನು ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ನಪಂ ಆಡಳಿತ ತೆರವುಗೊಳಿಸಿದೆ.
ದ.ಕ. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲಾಧಿಕಾರಿ ಪ್ಲಾಸ್ಟಿಕ್ ನಿಷೇಧಗೊಳಿಸುವಂತೆ ಆದೇಶ ಹೊರಡಿಸಿದ್ದು, ಸುಳ್ಯ ನಗರದಲ್ಲಿ ಅಳವಡಿಸಲಾಗಿದ್ದ ಹಲವು ಬ್ಯಾನರ್ಗಳನ್ನು ನಪಂ ವತಿಯಿಂದ 2 ದಿನಗಳ ಹಿಂದೆಯೇ ತೆರವುಗೊಳಿಸಲಾಗಿತ್ತು. ಸುಳ್ಯ ನಗರದ ಎಲ್ಲ ಅಂಗಡಿಗಳಿಗೆ ತೆರಳಿದ ನಪಂ ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸೂಚನೆ ನೀಡಿದ್ದರು. ಜೊತೆಗೆ ಫ್ಲೆಕ್ಸ್ಗಳನ್ನು ತಯಾರು ಮಾಡುವ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಯಾವುದೇ ಪ್ಲಾಸ್ಟಿಕ್ ಫ್ಲೆಕ್ಸ್ಗಳನ್ನು ಮುದ್ರಿಸಬಾರದು ಎಂದು ತಿಳಿಸಲಾಗಿತ್ತು.
ಶನಿವಾರ ಸುಳ್ಯ ಕೊಡಿಯಾಲಬೈಲಿನ ಪದವಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಗೆ ಸಚಿವ ರಮಾನಾಥ ರೈ ಆಗಮಿಸಿದ್ದು, ಸಚಿವರಿಗೆ ಶುಭಕೋರಿ ಕಾಂಗ್ರೆಸ್ ನಾಯಕರು ಜಟ್ಟಿಪಳ್ಳದಿಂದ ಕೊಡಿಯಾಲಬೈಲು ತನಕ ರಸ್ತೆಯ ಎರಡೂ ಬದಿಗಳಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಿದ್ದರು. ಪ್ಲಾಸ್ಟಿಕ್ ಮುದ್ರಿತ ಫ್ಲೆಕ್ಸ್ಗಳನ್ನು ಅಳವಡಿಸಿರುವ ಮಾಹಿತಿ ಪಡೆದ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕೂಡಲೇ ನಪಂ ಸಿಬ್ಬಂದಿಯನ್ನು ಕೊಡಿಯಾಲಬೈಲಿಗೆ ಕಳುಹಿಸಿ ರಸ್ತೆಯ ಬದಿಯಲ್ಲಿದ್ದ ಫ್ಲೆಕ್ಸ್ಗಳನ್ನು ತೆರವುಗೊಳಿಸಿದರು.