ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ: ಸಿಎಂ
ರಾಜಾಜಿನಗರ 10ನೆ ಅಡ್ಡರಸ್ತೆಯಲ್ಲಿರುವ ಮೇಲ್ಸೇತುವೆ ಉದ್ಘಾಟನೆ

ಬೆಂಗಳೂರು, ಎ.30: ಸಾರ್ವಜನಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪ್ರಮಾಣವನ್ನು ಪರಿಷ್ಕರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ವಸತಿ ಕಟ್ಟಡಕ್ಕೆ ಶೇ.20 ಹಾಗೂ ವಾಣಿಜ್ಯ ಕಟ್ಟಡಕ್ಕೆ ಶೇ.25ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯನ್ನು ವಸೂಲು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ರಾಜಾಜಿನಗರ ಮೊದಲನೇ ಬ್ಲಾಕ್ನ 10ನೆ ಅಡ್ಡರಸ್ತೆಯಲ್ಲಿರುವ ಮೇಲ್ಸೇತುವೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ತೆರಿಗೆ ಹೆಚ್ಚಳದಿಂದಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥರೆಡ್ಡಿ ನನ್ನ ಗಮನ ಸೆಳೆದಿದ್ದಾರೆ ಎಂದರು.
ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ತಡೆಗಟ್ಟಲು ವಸತಿ ಕಟ್ಟಡಗಳಿಗೆ ಶೇ.20ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.25ರಷ್ಟು ತೆರಿಗೆ ನಿಗದಿ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,900 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. ಆದರೆ, ಬಿಬಿಎಂಪಿ ಬಜೆಟ್ 8 ಸಾವಿರ ಕೋಟಿ ರೂ.ಗಳದ್ದಾಗಿದೆ ಎಂದು ಅವರು ಹೇಳಿದರು.
7,100 ಕೋಟಿ ರೂ.ಗಳ ಕೊರತೆಯಿದ್ದು, ಇದನ್ನು ಸರಿದೂಗಿಸಲು ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡುವುದು ಅನಿವಾರ್ಯ. ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾದರೆ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಬೇಕು. 220 ಚ.ಕಿ.ಮೀ. ವಿಸ್ತೀರ್ಣವಿದ್ದ ಬೆಂಗಳೂರಿಗೆ 7 ನಗರಸಭೆಗಳು, 110 ಹಳ್ಳಿಗಳನ್ನು ಅವೈಜ್ಞಾನಿಕವಾಗಿ ಸೇರ್ಪಡೆ ಮಾಡಿದ್ದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಳವಾಯಿತು ಎಂದು ಅವರು ತಿಳಿಸಿದರು.
ನಗರದಲ್ಲಿ ಪ್ರತಿದಿನ ಸುಮಾರು 3,500 ರಿಂದ 4 ಸಾವಿರ ಮೆಟ್ರಿಕ್ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಆದ್ಯತೆ ನೀಡಲಾಗಿರಲಿಲ್ಲ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕಸವನ್ನು ಸಂಗ್ರಹ ಮಾಡಲು ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ, ನಾವು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಬೆಂಗಳೂರಿಗೆ ಸುಮಾರು 100 ಕಿ.ಮೀ. ದೂರದಿಂದ 17 ಟಿಎಂಸಿ ನೀರನ್ನು ತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 30 ಟಿಎಂಸಿ ನೀರಿನ ಅಗತ್ಯ ಬರಬಹುದು ಎಂದು ಅವರು ತಿಳಿಸಿದರು.
ಶಂಕುಸ್ಥಾಪನೆ: ಇದೇ ಸಂದರ್ಭದಲ್ಲಿ ರಾಜಾಜಿನಗರದ ದ.ರಾ.ಬೇಂದ್ರೆ ರಸ್ತೆ(ಪಶ್ಚಿಮ ಕಾರ್ಡ್ ರಸ್ತೆ), ಮಂಜುನಾಥನಗರ ಮುಖ್ಯರಸ್ತೆ, ಶಿವನಗರ 1ನೆ ಮತ್ತು 8ನೆ ಮುಖ್ಯರಸ್ತೆ ಹಾಗೂ ಬಸವೇಶ್ವರ ನಗರ ಮುಖ್ಯರಸ್ತೆಗಳ ಕೂಡು ಸ್ಥಳಗಳಲ್ಲಿ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ಗುಂಡೂರಾವ್, ಶಾಸಕರಾದ ಎಸ್.ಸುರೇಶ್ಕುಮಾರ್, ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮೇಯರ್ ಮಂಜುನಾಥರೆಡ್ಡಿ, ಉಪಮೇಯರ್ ಹೇಮಲತಾ, ಮತ್ತಿತರರು ಉಪಸ್ಥಿತರಿದ್ದರು.







