ಮೇ 5ರಂದು ಕಾಂಗ್ರೆಸ್ ಪ್ರತಿಭಟನೆ
ಗುಜರಾತ್ ಇಬಿಸಿ ಕೋಟಾ
ಅಹ್ಮದಾಬಾದ್, ಎ.30: ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳಿಗೆ (ಇಬಿಸಿ) ಶೇ.10 ಮೀಸಲಾತಿ ನೀಡುವ ಗುಜರಾತ್ ಸರಕಾರದ ನಿರ್ಧಾರವು ಹಿಂದುಳಿದ ವರ್ಗಗಳಿಗೆ ಕೆಟ್ಟ ಪರಿಣಾಮ ಬೀರಬಹುದೆಂದು ವಾದಿಸಿರುವ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ವಿ.ಹನುಮಂತ ರಾವ್, ಈ ಕ್ರಮದ ವಿರುದ್ಧ ಮೇ 5ರಂದು ದಿಲ್ಲಿಯಲ್ಲಿ ಉಪವಾಸ ಮುಷ್ಕರ ಕೈಗೊಳ್ಳುವ ಘೋಷಣೆ ಮಾಡಿದ್ದಾರೆ.
ಹೊಸ ಸಮುದಾಯಕ್ಕೆ ಮೀಸಲಾತಿ ವಿಸ್ತರಿಸುವುದರಿಂದ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕಡಿತವಾಗಬಹುದು. ಕೆಲವು ಮೇಲ್ವರ್ಗಗಳು ಹಿಂಸಾಚಾರಿಗಳಾದುದರಿಂದ ಸರಕಾರಗಳು ಅವುಗಳ ಮೀಸಲಾತಿ ಬೇಡಿಕೆಯನ್ನು ಅಂಗೀಕರಿಸುತ್ತಿವೆ ಎಂದು ಇತರ ಹಿಂದುಳಿದ ಜಾತಿಗಳ ಸಂಸದರ ವೇದಿಕೆಯ ಸಂಚಾಲಕ ರಾವ್ ಆರೋಪಿಸಿದ್ದಾರೆ.
ಹೆಚ್ಚು ಸಂಖ್ಯೆಯಲ್ಲಿರುವ ಹಿಂದುಳಿದ ಸಮುದಾಯಗಳು ಬೀದಿಗಿಳಿದರೆ ಏನಾಗಬಹುದು? ಎಂದು ಪ್ರಶ್ನಿಸಿರುವ ಅವರು, ತನ್ನ ಪ್ರತಿಭಟನೆ ಸಿಪಿಐ, ಸಿಪಿಎಂ ಸಹಿತ ಇತರ ಪಕ್ಷಗಳಿಗೂ ಆಹ್ವಾನ ನೀಡುವೆನೆಂದಿದ್ದಾರೆ.
Next Story





