ಉಮ್ಮನ್ ಚಾಂಡಿ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ: ಸಚಿವ ಕುಂಞಾಲಿಕುಟ್ಟಿ
ಕೇರಳ ವಿಧಾನಸಬಾ ಚುನಾವಣೆ
ಮಂಜೇಶ್ವರ, ಮೇ 1: ಕೇರಳ ವಿಧಾನಸಬಾ ಚುನಾವಣೆಯಲ್ಲಿ ಉಮ್ಮನ್ ಚಾಂಡಿ ನೇತೃತ್ವದ ಐಕ್ಯರಂಗ ಸರಕಾರ ಅಧಿಕಾರಕ್ಕೇರಲಿದ್ದು, ಎರಡನೇ ಬಾರಿಗೆ ಅವರು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಲಿದ್ದಾರೆ ಎಂದು ಮುಸ್ಲಿಂ ಲೀಗ್ ಪಕ್ಷದ ವರಿಷ್ಠ, ಸಚಿವ ಕುಂಞಾಲಿಕುಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪ್ಪಳ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದ ಐಕ್ಯರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತೀ ಬಾರಿ ಕೇರಳದಲ್ಲಿ ಅಧಿಕಾರದಲ್ಲಿರುವ ಪಕ್ಷ ಸೋತು ಮತ್ತೊಂದು ಪಕ್ಷ ಅಧಿಕಾರಕ್ಕೇರುತ್ತದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಸತತ ಎರಡನೆ ಬಾರಿಗೆ ಐಕ್ಯರಂಗ ಸರಕಾರ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಹೇಳಿದರು. ನಮ್ಮ ಅಧಿಕಾರಾವಧಿಯಲ್ಲಿ ಎಲ್ಲ ಸ್ತರಗಳಲ್ಲಿ ರಾಜ್ಯವು ಸಮಗ್ರ ಅಭಿವೃದ್ಧಿಯನ್ನು ಕಂಡಿದೆ. ಕೇರಳೀಯರು ತಮ್ಮ ಸರಕಾರ ನೀಡಿದ ಪ್ರಗತಿಪರ ಆಡಳಿತವನ್ನು ಅಲ್ಲೆಗೆಳೆಯುವಂತಿಲ್ಲ ಎಂದರು.
ಶಿಕ್ಷಣ, ಉನ್ನತ ವಿದ್ಯಾಭ್ಯಾಸ, ತಾಂತ್ರಿಕ ಮುನ್ನಡೆ, ಹೊಸ ಯೋಜನೆಗಳು ನಮ್ಮ ಅಭಿವೃದ್ಧಿ ಪರ ನಡೆಗೆ ಸಾಕ್ಷಿ ಎಂದರು. ಮಂಜೇಶ್ವರ ಕ್ಷೇತ್ರ ಸಹಜವಾಗಿ ಜಾತ್ಯತೀತ, ಸೌಹಾರ್ದತೆಯ ಪ್ರದೇಶವಾಗಿದೆ. ಇಲ್ಲಿ ಕೋಮುವಾದಿ ಶಕ್ತಿಗಳಿಗೆ ಆಸ್ಪದವಿಲ್ಲ. ಜೊತೆಗೆ ಜಾತ್ಯಾತೀತ ಮತಗಳನ್ನು ಸೆಳೆಯುವ ಎಡರಂಗದ ಪ್ರಯತ್ನ ಇಲ್ಲಿ ಸಫಲತೆಯನ್ನು ಕಾಣದು ಎಂದರು. ಇಂದು ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನಿರ್ನಾಮವಾಗುವ ಹಂತಕ್ಕೆ ತಲುಪಿದೆ. ತನ್ನ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಕೈ ಹಿಡಿದಿದೆ. ಕೇರಳದಲ್ಲೂ ಅಂತಹ ಪರಿಸ್ಥಿತಿಯನ್ನು ನೋಡುವ ದಿನಗಳು ದೂರವಿಲ್ಲ ಎಂದರು.
ಕಳೆದ ಐದು ವರ್ಷದ ಐಕ್ಯರಂಗದ ಅಭಿವೃದ್ದಿಪರ ನಡೆಯಿಂದ ಕೇರಳ ಸಮೃದ್ಧವಾಗಿದೆ. ಇಂತಹ ಐಕ್ಯರಂಗಕ್ಕೆ ಎಲ್ಲರ ಬೆಂಬಲವಿರಲಿ ಎಂದರು.
ಸಭೆಯಲ್ಲಿ ಐಕ್ಯರಂಗದ ಜಿಲ್ಲಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೇಶವ ಪ್ರಸಾದ್ ನಾಣಿತ್ತಿಲು, ಹಾಲಿ ಶಾಸಕ ಪಿ.ಬಿ ಅಬ್ದುರ್ರಝಾಕ್ ಹಾಗೂ ಐಕ್ಯರಂಗ ಘಟಕ ಪಕ್ಷಗಳ ಹಿರಿಯ ಮುಖಂಡರು ಭಾಗವಹಿಸಿದ್ದರು.