ಉತ್ತರ ಪ್ರದೇಶ: ಅಪ್ರಾಪ್ತ ದಲಿತ ಬಾಲಕಿ ಅತ್ಯಾಚಾರ - ಕೊನೆಗೂ ಆರೋಪಿ ಬಿಜೆಪಿ ನಾಯಕನ ಪುತ್ರನ ಬಂಧನ

ಉತ್ತರ ಪ್ರದೇಶ, ಮೆ 2: ಅಪ್ರಾಪ್ತ ವಯಸ್ಸಿನ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ದಲಿತ ವಿದ್ಯಾರ್ಥಿನಿಯೋರ್ವಳನ್ನು ಅತ್ಯಾಚಾರವೆಸಗಿದ ಪ್ರಕರಣದ ಆರೋಪಿ ಹಿರಿಯ ಬಿಜೆಪಿ ನಾಯಕ ಡಾಲೂ ಸಿಂಗ್ ಎಂಬವರ ಪುತ್ರ ಯೋಗೇಶ್ ಯಾನೆ ಗೋಗಿಯಾ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳನ್ನು ಪೊಲೀಸರು ಮೊದಲೇ ಬಂಧಿಸಿದ್ದರು. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಈ ಪ್ರಕರಣ ಕೋಲಾಹಲ ಸೃಷ್ಟಿಸಿದ ನಂತರ ಪೊಲೀಸರು ಎಚ್ಚೆತ್ತು ಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ವಿಧಾನಸಭೆಯಲ್ಲಿ ಈ ಪ್ರಕರಣ ಚರ್ಚೆ ನಡೆದ ಬಳಿಕೆ ತನಿಖೆ ಉಸ್ತುವಾರಿಯಿರುವ ಡಿಎಸ್ಪಿ ತಾನ್ಯ ಸಿಂಗ್ ಮತ್ತು ಪೊಲೀಸ್ ಅಧೀಕ್ಷಕ ಮನೀಷ್ ಚೌಧರಿ ತನಿಖೆಯನ್ನು ತೀವ್ರಗೊಳಿಸಿದ್ದರು. ಪೊಲೀಸರು ಶನಿವಾರ ಯೋಗೇಶ್ ಯಾನೆ ಗೋಗಿಯಾನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪೊಲೀಸ್ ರಿಮಾಂಡ್ಗೆ ಕಳುಹಿಸಲಾಗಿದೆ.
ಮಾರ್ಚ್ 25ರಂದು ನಾರನೈಲ್ ಮಹಿಳಾ ಠಾಣೆಗೆ ಅಪ್ರಾಪ್ತ ವಿದ್ಯಾರ್ಥಿನಿ ದೂರು ನೀಡಿದ್ದು ಮಾರ್ಚ್ ಎಂಟರಂದು ರಾತ್ರೆ ತನ್ನ ಮನೆಯಿಂದ ಹೊರಬಂದಾಗ ಗ್ರಾಮದವರಾದ ಅಮಿತ್ ಎಂಬವರ ಪುತ್ರ ರಾಮವತಾರ್ ಮತ್ತು ತ್ರಿಲೋಕ್ ಎಂಬವರ ಪುತ್ರ ಶ್ಯೋಯರಾಂ ಅವಳನ್ನು ಬಲವಂತದಿಂದ ಬೈಕ್ನಲ್ಲಿ ಕೂರಿಸಿಕೊಂಡು ಗುಡಿಸಲೊಂದರಲ್ಲಿ ಅತ್ಯಾಚಾರ ಎಸಗಿದ್ದಾರೆಎಂದು ದೂರಿತ್ತಿದ್ದಳು. ಗುಡಿಸಲಿನಲ್ಲಿ ಅಮಿತ್ ಅವಳನ್ನು ಅತ್ಯಾಚಾರ ಮಾಡಿದ್ದು ಗಗನದೀಪ್ ಮತ್ತು ಯೋಗೇಶ್ ಯಾನೆ ಗೋಗಿಯಾ ವೀಡಿಯೋ ಮಾಡಿದ್ದರು. ಆನಂತರ ಬ್ಲಾಕ್ಮೈಲ್ ಮಾಡಿ ಅವಳನ್ನು ಬಳಸತೊಡಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಳು. ಈ ಪ್ರಕರಣದ ಮೂವರು ಆರೋಪಿಗಳನ್ನು ಮೊದಲೇ ಬಂಧಿಸಲಾಗಿತ್ತು. ಬಿಜೆಪಿ ನಾಯಕನ ಪುತ್ರನನ್ನು ಬಂಧಿಸಲಾಗಿರಲಿಲ್ಲ. ಇದೀಗ ಅವನನ್ನು ಪೊಲೀಸರು ವಿಧಾನಸಭೆಯಲ್ಲಿ ಕೋಲಾಹಲವಾದ್ದರಿಂದ ಬಂಧಿಸಲು ಮನಸು ಮಾಡಿದರು ಎಂದು ವರದಿಯಾಗಿದೆ.







