ಪುತ್ತೂರು ನಗರಸಭೆಗೆ 20 ದಿನಗಳ ಮಟ್ಟಿಗೆ ನೀರಿನ ಸಮಸ್ಯೆಯಿಲ್ಲ: ಜಯಂತಿ ಬಲ್ನಾಡು
ನಗರಸಭಾ ಅಧ್ಯಕ್ಷರಿಂದ ಅಣೆಕಟ್ಟು ಪರಿಶೀಲನೆ
ಪುತ್ತೂರು, ಮೇ 2: ಪುತ್ತೂರು ನಗರಸಭೆಗೆ ನೀರು ಸರಬರಾಜು ಮಾಡಲೆಂದು ಎಡಿಬಿ ಯೋಜನೆಯಡಿ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ನಿರ್ಮಿಸಲಾದ ಕಿರು ಅಣೆಕಟ್ಟಿನಲ್ಲಿ 190 ಮಿಲಿಯನ್ ಕ್ಯುಬಿಕ್ ಮೀಟರ್ ನೀರಿನ ಸಂಗ್ರಹವಿದೆ. ಈಗಿನ ಅಂದಾಜಿನ ಪ್ರಕಾರ ಇನ್ನೂ 20 ದಿನಗಳ ಮಟ್ಟಿಗೆ ನೀರಿನ ಸಮಸ್ಯೆ ಆಗಲಾರದು. ಹಾಗೊಂದು ವೇಳೆ ನೀರು ಕಡಿಮೆಯಾದಲ್ಲಿ ಅಣೆಕಟ್ಟಿನ ಕೆಳಭಾಗದಿಂದ ನೀರು ಪಂಪ್ ಮಾಡಲಾಗುವುದು ಎಂದು ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ತಿಳಿಸಿದ್ದಾರೆ.
ಅವರು ಸೋಮವಾರ ಸಂಜೆ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರೊಂದಿಗೆ ಅಣೆಕಟ್ಟು ಸ್ಥಳಕ್ಕೆ ತೆರಳಿ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುತ್ತೂರು ನಗರಸಭೆಯ ನೀರಿನ ಆವಶ್ಯಕತೆಯನ್ನು ಪೂರೈಸುವ ಉಪ್ಪಿನಂಗಡಿ ನೆಕ್ಕಿಲಾಡಿಯ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಮಸ್ಯೆ ಉಂಟಾದಲ್ಲಿ ಅಣೆಕಟ್ಟಿನಿಂದ ಸೋರಿಕೆಯಾಗಿ ಹೋಗುತ್ತಿರುವ ನೀರನ್ನು ಮರು ಪೂರಣ ಮಾಡಲಾಗುವುದು ಎಂದು ಹೇಳಿದ ಅಧ್ಯಕ್ಷರು, ಪ್ರಸ್ತುತ ಅಣೆಕಟ್ಟಿನ ತಳಭಾಗದಲ್ಲಿ ಲೀಕೇಜ್ ಇರುವ ಕಾರಣ ದಿನಂಪ್ರತಿ ಸುಮಾರು 20 ಇಂಚಿನಷ್ಟು ನೀರು ಸೋರಿಕೆ ಆಗುತ್ತಿದೆ. ತುರ್ತು ಸಂದರ್ಭದಲ್ಲಿ ಆ ನೀರನ್ನು ಅಣೆಕಟ್ಟಿಗೆ ಪಂಪ್ ಮಾಡಿ ಶುದ್ಧೀಕರಿಸಿ ಸರಬರಾಜು ಮಾಡಲಾಗುವುದು. ಪುತ್ತೂರು ನಗರಕ್ಕೆ ನೀರಿನ ಸಮಸ್ಯೆ ಆಗದು ಎಂಬ ವಿಶ್ವಾಸವಿದೆ ಎಂದರು.
2007ರಲ್ಲಿ ಎಡಿಬಿ ಯೋಜನೆಯಲ್ಲಿ ಕುಡ್ಸೆಂಪ್ ಮೂಲಕ ಕೆಯುಐಡಿಎಫ್ಸಿ (ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ)ವು ನಿರ್ಮಿಸಿದ ಅಣೆಕಟ್ಟು ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿದೆ. ಇದರ ತಳಭಾಗದಲ್ಲಿ ಒಡಕು ಮೂಡಿದ್ದು ನೀರು ಸೋರಿಕೆಯಾಗುತ್ತಿದೆ. ಕೆಯುಐಡಿಎಫ್ಸಿಯವರು ಅಣೆಕಟ್ಟನ್ನು ಅಧಿಕೃತವಾಗಿ ನಗರಸಭೆಗೆ ಹಸ್ತಾಂತರ ಮಾಡಿಲ್ಲ. ಕೇವಲ ಡೀಮ್ಡ್ ಹಸ್ತಾಂತರ ಪೂರೈಸಿದ್ದಾರೆ. ಶೆಡ್ನ ಬೀಗದ ಕೀಯನ್ನು ಪಾರ್ಸೆಲ್ ಮಾಡಿ ನಿರ್ಗಮಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಅಣೆಕಟ್ಟನ್ನು ನಗರಸಭೆ ನಿರ್ವಹಿಸುತ್ತಿದೆ. ಆರಂಭದಲ್ಲೇ ಲೀಕೇಜ್ ಪತ್ತೆಯಾಗಿತ್ತು. ಕೆಯುಐಡಿಎಫ್ಸಿಗೆ ಪುರಸಭೆ ವತಿಯಿಂದ ಇದನ್ನು ತಿಳಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ನಗರಸಭೆ ಅಧಿವೇಶನದಲ್ಲಿಟ್ಟು ಚರ್ಚಿಸಲಾಗುವುದು. ಬಳಿಕ ಸರಕಾರಕ್ಕೆ ಪತ್ರ ಬರೆಯಲಾಗುವುದು. ಸರಕಾರವೂ ಕ್ರಮ ಕೈಗೊಳ್ಳದೇ ಹೋದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಆಲೋಚಿಸಲಾಗುವುದು ಎಂದು ತಿಳಿಸಿದರು.
ನಗರಸಭೆಯ ಹಿರಿಯ ಸದಸ್ಯ ಎಚ್.ಮುಹಮ್ಮದ್ ಅಲಿ ಮಾತನಾಡಿ, ಪುತ್ತೂರು ನಗರಸಭೆಯಲ್ಲಿ 3 ವಿಧಾನದ ಮೂಲಕ ನೀರು ಪೂರೈಸಲಾಗುತ್ತಿದೆ. ಒಂದು ಹಳೆಯ ಪೈಪ್ಲೈನ್ ವಿಧಾನವಾದರೆ, ಇನ್ನೊಂದು ಎಡಿಬಿ ಯೋಜನೆಯ 39 ಕೋಟಿ ರೂ. ವೆಚ್ಚದ ನೀರು ಸರಬರಾಜು ಯೋಜನೆ. 3ನೆಯದಾಗಿ 142 ಬೋರ್ವೆಲ್ಗಳಿಂದ ನೀರೆತ್ತಿ ಪೂರೈಸಲಾಗುತ್ತಿದೆ. ಎಡಿಬಿ ಯೋಜನೆಯಲ್ಲಿ ಅರ್ಧದಷ್ಟು ಹಣ ನಗರಸಭೆಗೆ ಸಾಲದ ರೂಪದಲ್ಲಿದ್ದು, ಅದನ್ನು ನಗರಸಭೆ ಪಾವತಿಸಬೇಕಾಗಿದೆ. ಆದರೆ ಕಂತು ಕಟ್ಟದೇ ಬಾಕಿ ಇದೆ. ಈ ಯೋಜನೆಯಲ್ಲಿ ್ನ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ನಗರಸಭೆ ಪಾವತಿಸಿದ 40 ಲಕ್ಷ ರೂ.ನಲ್ಲಿ ಎಕ್ಸ್ಪ್ರೆಸ್ ಫೀಡರ್ನ ವಿದ್ಯುತ್ ಲೈನ್ ಅಳವಡಿಸಲಾಗಿದ್ದರೂ ಅದರಿಂದ ಬೇರೆ ಲೈನ್ ಎಳೆಯಲಾಗಿದೆ. ಈ ಬಗ್ಗೆ ಮೆಸ್ಕಾಂಗೆ ಹೇಳಿದರೂ ಕ್ರಮ ಕೈಗೊಂಡಿಲ್ಲ. ಈಗ 2ನೆ ಹಂತದ ಎಡಿಬಿ ಯೋಜನೆಗೆ ಸಮೀಕ್ಷೆ ನಡೆಸಲಾಗಿದ್ದು, ಪ್ರಾಥಮಿಕ ವರದಿ ತಯಾರಿಸಲಾಗಿದೆ. ಇನ್ನು ಡಿಪಿಆರ್ ತಯಾರಿಸಿ ಕೌನ್ಸಿಲ್ನಲ್ಲಿ ಇಟ್ಟು ಮತ್ತೆ ಸರಕಾರಕ್ಕೆ ಸಲ್ಲಿಕೆಯಾಗಬೇಕಿದೆ. ಮೊದಲ ಯೋಜನೆಯ ಎಡವಟ್ಟುಗಳೇ ಇನ್ನೂ ಪರಿಹಾರ ಆಗದಿರುವಾಗ ಎರಡನೆ ಹಂತ ಆರಂಭಿಸಿದರೆ ಕಷ್ಟ. ಹೀಗಾಗಿ ಈ ಎಲ್ಲ ವಿಚಾರಗಳನ್ನು ನಗರಸಭೆ ಕೌನ್ಸಿಲ್ ಮೀಟಿಂಗ್ನಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭ ಇಂಜಿನಿಯರ್ ತುಳಸಿದಾಸ್, ನೀರು ಸರಬರಾಜು ಉಸ್ತುವಾರಿ ವಸಂತ್, ಕೌನ್ಸಿಲರ್ಗಳಾದ ಶಕ್ತಿ ಸಿನ್ಹಾ, ಅನ್ವರ್ ಖಾಸಿಂ, ಮುಕೇಶ್ ಕೆಮ್ಮಿಂಜೆ, ಜಯಲಕ್ಷ್ಮೀ ಸುರೇಶ್, ಶೈಲಾ ಪೈ ಮತ್ತಿತರರು ಉಪಸ್ಥಿತರಿದ್ದರು.