ಬ್ಯಾಂಕ್ ಶಾಖೆ, ಎಟಿಎಂಗಳ ಹೊರಗಡೆ ಸಿಸಿ ಕ್ಯಾಮರಾ ಅಳವಡಿಸಿ: ಎಸ್ಪಿ ಡಾ. ಶರಣಪ್ಪ
ನೋಟಿಸ್ ನೀಡಿದ 1 ತಿಂಗಳೊಳಗೆ ಗುಣಮಟ್ಟದ ಕ್ಯಾಮರಾ ಅಳವಡಿಕೆಗೆ ಸೂಚನೆ
ಮಂಗಳೂರು, ಮೇ2: ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್ಗಳಲ್ಲಿನ ಭದ್ರತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಬ್ಯಾಂಕ್ನ ಶಾಖೆಗಳು ಹಾಗೂ ಎಟಿಎಂ ಒಳಗಡೆ ಸಿಸಿ ಕ್ಯಾಮರಾ ಅಳವಡಿಸುವ ಜೊತೆಗೆ ಹೊರಗಡೆಯೂ ಸಿಸಿ ಕ್ಯಾಮರಾವನ್ನು ಅಳವಡಿಸುವಂತೆ ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಶಾಖೆಗಳಿಗೆ ಒಂದು ವಾರದೊಳಗೆ ನೋಟೀಸು ನೀಡುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಸೂಚಿಸಿದ್ದಾರೆ.
ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ನ ಪ್ರಧಾನ ಕಚೇರಿಯಲ್ಲಿಂದು ಬ್ಯಾಂಕ್ಗಳ ಭದ್ರತೆಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಠಾಣೆಯ ಪಿಎಸ್ಸೈಗಳು ಒಂದು ವಾರದೊಳಗೆ ನೋಟಿಸ್ ನೀಡಿದ ಬಳಿಕ ಒಂದು ತಿಂಗಳೊಳಗೆ ಸಂಬಂಧಪಟ್ಟ ಶಾಖೆಗಳು ಸಿಸಿ ಕ್ಯಾಮರಾವನ್ನು ಅಳವಡಿಸಬೇಕು ಎಂದರು. ಮಾತ್ರವಲ್ಲದೆ, ಪಿಎಸ್ಸೈಗಳು ಅಳವಡಿಸಲಾದ ಸಿಸಿ ಕ್ಯಾಮರಾಗಳ ಗುಣಮಟ್ಟವನ್ನೂ ತಪಾಸಣೆ ಮಾಡಬೇಕು ಎಂದು ಅವರು ಸೂಚಿಸಿದರು. ಬ್ಯಾಂಕ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಖೆಗಳಲ್ಲಿ ಹಾಗೂ ಎಟಿಎಂಗಳಲ್ಲಿ ಸಶಸ್ತ್ರ ಕಾವಲುಗಾರರು ಹಾಗೂ ಕಾವಲುಗಾರರನ್ನು ನೇಮಕ ಮಾಡುವ ಬಗ್ಗೆಯೂ ಗಮನ ಹರಿಸಬೇಕು. ಈಗಾಗಲೇ ಬ್ಯಾಂಕ್ ಶಾಖೆ ಹಾಗೂ ಎಟಿಂಗಳಲ್ಲಿ ಅಳವಡಿಸಲಾಗಿರುವ ಬಹುತೇಕ ಕ್ಯಾಮರಾಗಳ ಗುಣಮಟ್ಟ ಉತ್ತಮವಾಗಿಲ್ಲದಿರುವುದು ಕಂಡುಬಂದಿದೆ. ಅಲರಾಂಗಳು ಕೂಡಾ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಭದ್ರತೆಯಿಂದ ಗ್ರಾಹಕರಿಗೆ ತೊಂದರೆಯಾದಾಗ ಯಾವುದೇ ರೀತಿಯಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಅಗ್ನಿ ದುರಂತ ಆದಾಗ ಅಲರಾಂ ನೀಡುವಂತಹ, ಗ್ರಾಹಕರು ಎಟಿಎಂನಲ್ಲಿ ತೊಂದರೆಗೆ ಸಿಲುಕಿದಾಗ ಅಲರಾಂ ನೀಡುವಂತಹ ಅಟೋಮ್ಯಾಟೆಡ್ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಬ್ಯಾಂಕ್ಗಳು ಗ್ರಾಹಕರ ಸುರಕ್ಷತೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಒತ್ತು ನೀಡಬಹುದಾಗಿದೆ ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ನೀಡುವ ಸೂಚನೆ ಬಗ್ಗೆ ನಿರ್ಲಕ್ಷ ಬೇಡ
ಬ್ಯಾಂಕ್ಗಳ ಭದ್ರತೆ ಕುರಿತಂತೆ ಸಭೆಯಲ್ಲಿ ನೀಡಲಾಗುವ ಸೂಚನೆಗಳನ್ನು ಭಾಗವಹಿಸಿದ ಭದ್ರತಾ ಸಿಬ್ಬಂದಿಗಳು ಸಂಬಂಧಪಟ್ಟ ಶಾಖೆಗಳ ಮುಖ್ಯಸ್ಥರಿಗೆ ತಿಳಿಸುವ ಮೂಲಕ ಅವುಗಳನ್ನು ಅಳವಡಿಸುವ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಸ್ಪಿ ಡಾ. ಶರಣಪ್ಪ ಎಚ್ಚರಿಸಿದರು.
ಸೈಬರ್ ಅಪರಾಧಗಳ ಬಗ್ಗೆ ಗ್ರಾಹಕರಿಗೆ ಬ್ಯಾಂಕ್ಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಆನ್ಲೈನ್ ಬ್ಯಾಂಕಿಂಗ್ ಹಾಗೂ ಖರೀದಿ ವೇಳೆ ವನ್ ಟೈಮ್ ಪಾಸ್ವರ್ಡ್ (ಒಟಿಪಿ) ಕಡ್ಡಾಯಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಮಾರ್ಚ್ ತಿಂಗಳಿಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಅನಿರೀಕ್ಷಿತ ಎಂಬಂತೆ ಕರ್ನಾಟಕದಲ್ಲಿ ಒಂದು ಟ್ರಿಲಿಯನ್ ಹಣ ಹೆಚ್ಚುವರಿಯಾಗಿ ಬ್ಯಾಂಕ್ಗಳ ಮೂಲಕ ಹರಿದು ಬಂದಿದ್ದು ಈ ಹೆಚ್ಚುವರಿ ಹಣದ ಹರಿವಿಗೆ ಕಾರಣಗಳನ್ನು ಪರಿಶೀಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಸೇರಿದಂತೆ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ ಎಂದು ಲೀಡ್ ಬ್ಯಾಂಕ್ನ ಮ್ಯಾನೇಜರ್ ರಾಘವ ಯಜಮಾನ್ಯ ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕಾರ್ಪೊರೇಶನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಎಸ್ಸಿಡಿಸಿಸಿ ಸೇರಿದಂತೆ ಇತರ ಬ್ಯಾಂಕ್ಗಳ ಪ್ರತಿನಿಧಿಗಳು ಜಿಲ್ಲೆಯಲ್ಲಿ ತಾವು ಹೊಂದಿರುವ ಶಾಖೆಗಳು, ಎಟಿಎಂಗಳ ಸಂಖ್ಯೆ ಹಾಗೂ ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಭದ್ರತೆ ಸಭೆಗೆ ಖಾಸಗಿ ಬ್ಯಾಂಕ್ಗಳಿಂದ ನಿರ್ಲಕ್ಷ?
ಭದ್ರತಾ ಸಭೆಯಲ್ಲಿ ಖಾಸಗಿ ಬ್ಯಾಂಕ್ಗಳಾದ ಐಸಿಐಸಿಐ, ಅಲಹಾಬಾದ್, ಆ್ಯಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರ, ಧನಲಕ್ಷ್ಮಿ ಬ್ಯಾಂಕ್, ಐಡಿಬಿಐ, ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ತಮಿಳುನಾಡು ಮರ್ಕಂಟೈಲ್ ಬ್ಯಾಂಕ್, ಯೂಕೋ ಬ್ಯಾಂಕ್ಮೊದಲಾದವುಗಳ ಭದ್ರತಾ ಪ್ರತಿನಿಧಿಗಳು ಭಾಗವಹಿಸಿರಲಿಲ್ಲ.
ಸಭೆಯಲ್ಲಿ ಎಸ್ಬಿಐನ ಮಂಗಳೂರು ವಲಯದ ಎಜಿಎಂ ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.