ಕುಡಿಯುವ ನೀರು ಪೂರೈಕೆಗೆ ಉದಾಸೀನ ತೋರಿದರೆ ಕಠಿಣ ಕ್ರಮ: ಸಚಿವ ರೈ
ಬೆಳ್ತಂಗಡಿಯಲ್ಲಿ ನೀರು ಪೂರೈಕೆ ಕುರಿತು ಪರಿಶೀಲನಾ ಸಭೆ
ಬೆಳ್ತಂಗಡಿ, ಮೇ 2: ಕುಡಿಯುವ ನೀರಿನ ಯೋಜನೆಗೆ ಹಣದ ಕೊರತೆಯಿಲ್ಲ. ಸರಕಾರಿ ಬೋರ್ವೆಲ್ಗಳಲ್ಲಿ ನೀರು ಇಲ್ಲವೆಂದಾದರೆ ಖಾಸಗಿ ಬೋರ್ವೆಲ್ಗಳನ್ನು ವಶಕ್ಕೆ ಪಡೆದು ನೀರು ನೀಡುವುದಕ್ಕೆ ಆದ್ಯತೆ ನೀಡಬೇಕು. ನೀರಿನ ಸಮಸ್ಯೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಯಾವುದೇ ರೀತಿಯಲ್ಲಿ ಉದಾಸೀನ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಳ್ತಂಗಡಿ ತಾಪಂ ಸಭಾಂಗಣದಲ್ಲಿ ತಾಲೂಕಿನ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ ಸಚಿವರು, ಸರಕಾರಿ ಬೋರ್ವೆಲ್, ಜಾಕ್ವೆಲ್ ಬಳಿ ಖಾಸಗಿ ವ್ಯಕ್ತಿಗಳು ನೀರು ತೆಗೆಯುತ್ತಿದ್ದರೆ ತಕ್ಷಣ ನಿಲ್ಲಿಸಲು ಸೂಚನೆ ನೀಡಿದರು. ಜನರಿಗೆ ಕುಡಿಯುವ ನೀರು ನೀಡಬೇಕಾದ್ದು ತುರ್ತು ಆದ್ಯತೆ. ಬೋರ್ವೆಲ್ ಇಲ್ಲದಿದ್ದರೆ ಯಾವುದೇ ಮೂಲದಿಂದಾದರೂ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಕರ್ತವ್ಯಲೋಪ ಮಾಡುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ತಾಲೂಕಿನಲ್ಲಿರುವ ಹೆಚ್ಚಿನ ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಹೋಗುತ್ತಿಲ್ಲ. ಹೆಚ್ಚಿನ ಟ್ಯಾಂಕ್ಗಳ ಕಾಮಗಾರಿ ಕಳಪೆಯಾಗಿದೆ. ತಾಲೂಕಿನಲ್ಲಿರುವ ಓವರ್ಹೆಡ್ ಟ್ಯಾಂಕ್ಗಳ ಕಾಮಗಾರಿಗಳ ಬಗ್ಗೆ ತನಿಖೆಯಾಗಬೇಕು. ಕಳಪೆ ಕಾಮಗಾರಿಗಳಿಗೆ ಸಹಾಯಕ ಇಂಜಿನಿಯರ್ಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅಂತಹ ಇಂಜಿನಿಯರ್ಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ರೆಖ್ಯ ಶಾಲೆಯ ಬಳಿ 7 ವರ್ಷದ ಹಿಂದೆ ನಿರ್ಮಾಣವಾದ ಟ್ಯಾಂಕ್ಗೆ ಇಂದಿಗೂ ನೀರು ಹಾಕಲು ಆಗಿಲ್ಲ. ಅದು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಅದರ ಬಗ್ಗೆ ತನಿಖೆ ಮಾಡಿ ಎಂದು ಶಾಸಕರು ಒತ್ತಾಯಿಸಿದರು.
ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಇಂಜಿನಿಯರ್ ತಿಪ್ಪೆಸ್ವಾಮಿ ಸಭೆೆಗೆ ಹಾಜರಾಗದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಅವರಿಗೆ ಇಂದು ರಜೆ ನೀಡಿದವರು ಯಾರು ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಸಭೆಗೆ ಗೈರುಹಾಜರಾದ ಇಂಜಿನಿಯರ್ ತಿಪ್ಪೆಸ್ವಾಮಿಯನ್ನು ಅಮಾನತು ಮಾಡುವಂತೆ ಜಿಪಂ ಕಾರ್ಯ ನಿರ್ವಹಣಾಧಿಕಾರಿಗೆ ಸಚಿವರು ಸೂಚಿಸಿದರು.
ರೆಖ್ಯಾ ಗ್ರಾಮದಲ್ಲಿ 53 ಲಕ್ಷ ರು. ವೆಚ್ಚದಲ್ಲಿ 3 ಟ್ಯಾಂಕಿ ನಿರ್ಮಾಣವಾಗಿದೆ. ಪೈಪ್ಲೈನ್ ಕಾಮಗಾರಿ ಆಗಿದ್ದರೂ ಇನ್ನೂ ಪಂಪ್ ಅಳವಡಿಸಿಲ್ಲ. ಪರಿಶಿಷ್ಟ ಜಾತಿ ಕಾಲನಿಗೆ ನೀರೇ ಇಲ್ಲ ಎಂದು ಜಿಪಂ ಸದಸ್ಯ ಕೊರಗಪ್ಪ ನಾಕ ತಿಳಿಸಿದರು.
ಅಂಡಿಂಜೆ ಗಾಂಧಿನಗರದ 600 ಮನೆೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂದು ಜಿಪಂ ಸದಸ್ಯ ಧರಣೇಂದ್ರ ಕುಮಾರ್ ತಿಳಿಸಿದರು. ಕಣಿಯೂರು, ತಣ್ಣೀರುಪಂತದಲ್ಲಿ ನೀರಿನ ಸಮಸ್ಯೆ ಇದೆ. ಒಂದು ತಿಂಗಳಾದರೂ ಬೋರ್ವೆಲ್ಗೆ ಪಂಪ್ ಅಳವಡಿಸಿಲ್ಲ. ಜನರು ವಾಹನದಲ್ಲಿ ನೀರು ಸಾಗಾಟ ಮಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳತ್ತಿಲ್ಲ ಎಂದು ಜಿಪಂ ಸದಸ್ಯ ಶಾಹುಲ್ ಹಮೀದ್ ತಿಳಿಸಿದರು.
ಮಡಂತ್ಯಾರು ಗ್ರಾಮದ ಕುಕ್ಕಳಬೆಟ್ಟು ಬಳಿ ಬೋರ್ವೆಲ್ ಇದ್ದರೂ ಪಂಪ್ ಅಳವಡಿಸಿಲ್ಲ ಎಂದು ಜಿಪಂ ಸದಸ್ಯೆ ಮಮತಾ ಎಂ.ಶೆಟ್ಟಿ ತಿಳಿಸಿದರು.
ಮೆಸ್ಕಾಂ ಇಲಾಖೆಯಿಂದ ಸಂಪರ್ಕಕ್ಕೆ ಬೇಕಾದ ವಸ್ತುಗಳ ಸರಬರಾಜು ಆಗುತ್ತಿಲ್ಲ. ತಾಲೂಕಿನಲ್ಲಿ ಅನೇಕ ಟಿಸಿ ಕೊರತೆಯಿದೆ. ಮೆಟಿರಿಯಲ್ ಏನು ನಿಮ್ಮ ಮನೆಯಿಂದ ನೀಡುವುದಲ್ಲ. ಸರಕಾರದಿಂದ ನೀಡುವುದು ಎಂದು ಶಾಸಕ ಕೆ. ವಸಂತ ಬಂಗೇರ ಮೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ರನ್ನು ತರಾಟೆಗೆ ತೆಗೆದುಕೊಂಡರು. ಆಗ ಅವರು ಕುಡಿಯುವ ನೀರಿನ ಮಟ್ಟಿಗೆ ಮೆಟಿರಿಯಲ್ ಕೊರತೆಯಿಲ್ಲ ಎಂದು ಸಮಜಾಯಿಶಿ ನೀಡಿದರು.
ಈ ಸಂದರ್ಭ ಶಾಸಕರ ಪರ ವಹಿಸಿ ಮಾತನಾಡಿದ ಸಚಿವರು, ಬೆಳ್ತಂಗಡಿಯ ಕಾರ್ಯಪಾಲಕ ಇಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಮೆಸ್ಕಾಂ ಇಲಾಖೆಯಲ್ಲಿ ಇಂತಹ ಸಮಸ್ಯೆ ಇದೆ. ಬೇರೆಲ್ಲೂ ಇಲ್ಲ. ನೀವು ಸರಿಯಾಗಿ ಕರ್ತವ್ಯ ನಿರ್ವಹಿಸಿ. ಬೆಳ್ತಂಗಡಿ ತಾಲೂಕಿನ ಮೆಸ್ಕಾಂ ಇಲಾಖೆಯ ಸಮಸ್ಯೆಗಳ ಬಗ್ಗೆ ಜಿಪಂ ಸದಸ್ಯರು, ಇಂಜಿನಿಯರ್ಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆೆಯನ್ನು ಕರೆದು ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವರು ಸೂಚಿಸಿದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಬಾಬು ಪಾಣಾಜೆ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬೆಳ್ತಂಗಡಿ ನಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀವಿದ್ಯಾ, ಪುತ್ತೂರು ಸಹಾಯಕ ಕಮೀಷನರ್ ಪ್ರಮೀಳಾ ಎಂ.ಕೆ., ಜಿಪಂ ಉಪಕಾರ್ಯದರ್ಶಿ ಎಂ.ಆರ್. ಉಮೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.