ಹತ್ಯೆ ಪ್ರಕರಣದ ಆರೋಪಿ ಶಂಕಿತ ನಕ್ಸಲ್ ಸೆರೆ
ಉಡುಪಿ, ಮೇ 2: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾನದಿ ಎಂಬಲ್ಲಿ ಎಂಟು ವರ್ಷದ ಹಿಂದೆ ಭೋಜ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಎಂಬವರನ್ನು ಹತ್ಯೆಗೈದ ಪ್ರಕರಣದ ಆರೋಪಿ ಶಂಕಿತ ನಕ್ಸಲ್ ಸಂಜೀವ ಕುಮಾರ್ (27) ಎಂಬಾತನನ್ನು ಕಾರ್ಕಳ ಎಎಸ್ಪಿ ಸುಮನಾ ನೇತೃತ್ವದ ಪೊಲೀಸರ ತಂಡ ತುಮಕೂರು ಜಿಲ್ಲೆಯ ಪಾವಗಡದಲ್ಲಿ ರವಿವಾರ ಬಂಧಿಸಿದೆ.
ಆರೋಪಿಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಪೊಲೀಸ್ ಮಾಹಿತಿದಾರನೆಂಬ ಶಂಕೆಯ ಮೇಲೆ 10 ಮಂದಿಯ ಶಂಕಿತ ನಕ್ಸಲ್ ತಂಡವು ಭೋಜ ಶೆಟ್ಟಿ ಮತ್ತು ಸುರೇಶ್ ಶೆಟ್ಟಿಯನ್ನು ಹತ್ಯೆಗೈದಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಂಜೀವ ಕುಮಾರ್ ಪ್ರಕರಣದ ಆರೋಪಿಯಾಗಿದ್ದು, ಘಟನೆಯ ಬಗ್ಗೆ ತಲೆಮರೆಸಿಕೊಂಡಿದ್ದ. ತುಮಕೂರಿನಲ್ಲಿ ಈತನಿರುವ ಬಗ್ಗೆ ಮಾಹಿತಿ ಪಡೆದ ಅಲ್ಲಿಗೆ ತೆರಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ಆಂಧ್ರಪ್ರದೇಶದಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಈತ ಅಲ್ಲಿನ ಪೊಲೀಸರಿಗೆ ಶರಣಾಗಿದ್ದ. ಬಳಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಈತ ದೋಷಮುಕ್ತನಾಗಿದ್ದ.