ಅಂಬೇಡ್ಕರ್ಗೆ ಅವಮಾನ : ಖಂಡನೆ
ಸುಳ್ಯ, ಮೇ 3: ಮೇನಾಲದಲ್ಲಿ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಅಂಗವಾಗಿ ಸದ್ಭಾವನಾ ಸಂಗಮ ಕಾರ್ಯಕ್ರಮ ಮೇ 15ರಂದು ನಡೆಯಲಿದ್ದು, ಕಾರ್ಯಕ್ರಮ ನಡೆಯುವ ಮೈದಾನಕ್ಕೆ ಅಂಬೇಡ್ಕರ್ ಹೆಸರನ್ನು ಹಾಕಿದ್ದು, ಇದಕ್ಕೆ ಅಜ್ಜಾವರ ಗ್ರಾಮ ಪಂಚಾಯತ್ ಅನುಮತಿ ನಿರಾಕರಿಸಿರುವುದು ಮತ್ತು ಅಂಬೇಡ್ಕರ್ ಹೆಸರಿಗೆ ಆಕ್ಷೇಪ ಎತ್ತಿರುವುದು ಸಂವಿಧಾನ ಶಿಲ್ಪಿಗೆ ಮಾಡಿದ ಅವಮಾನ ಎಂದು ಸುಳ್ಯ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಘಟಕದ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶೀನಪ್ಪ ಬಯಂಬು, ಅಜ್ಜಾವರ ಗ್ರಾಮದಲಿ ಅತೀ ಹೆಚ್ಚು ಪರಿಶಿಷ್ಟ ಜಾತಿಯವರಿದ್ದು ಎಲ್ಲರೂ ಸದ್ಭಾವನಾ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮ ಪಂಚಾಯತ್ ಇದಕ್ಕೆ ಅನುಮತಿ ನೀಡಿಲ್ಲ. ಅಂಬೇಡ್ಕರ್ ಹೆಸರನ್ನು ಮೈದಾನಕ್ಕೆ ಹಾಕಿರುವುದು ತಪ್ಪೆಂದು ಪಂಚಾಯತ್ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದು ದೇಶ ವಿರೋಧಿ ಮತ್ತು ದಲಿತ ವಿರೋಧಿ ನೀತಿಯಾಗಿದೆ ಎಂದರು. ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯ ಹನೀಫ್ ಎಂಬವರು ಅಂಬೇಡ್ಕರ್ಗೆ ಅವಮಾನ ಮಾಡಿದ್ದಾರೆ ಎಂದೂ ಅವರು ದೂರಿದರು. ಮಂಡಲ ಸಮಿತಿ ಅಧ್ಯಕ್ಷ ಶಂಕರ್ ಪೆರಾಜೆ, ಉಪಾಧ್ಯಕ್ಷ ಚನಿಯ ಕಲ್ತಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.