ಕುಡಿಯುವ ನೀರು ವಿತರಣೆಯಲ್ಲಿ ಉದಾಸೀನ ತೋರಿದರೆ ಕಠಿಣ ಕ್ರಮ: ಸಚಿವ ರೈ ಎಚ್ಚರಿಕೆ
ಪುತ್ತೂರಿನಲ್ಲಿ ನೀರಿನ ಸಮಸ್ಯೆ ಸ್ಥಿತಿಗತಿ ಬಗ್ಗೆ ಪ್ರಗತಿ ಪರಿಶೀಲನಾ ಸಭೆ
ಪುತ್ತೂರು, ಮೇ 3: ಎಷ್ಟು ಬೊರ್ವೆಲ್ ತೆಗೆಸಿದ್ದೇವೆ ಎನ್ನುವುದಕ್ಕಿಂತ ಎಷ್ಟು ನೀರು ಕೊಟ್ಟಿದ್ದೇವೆ ಎನ್ನುವುದು ಮುಖ್ಯವಾಗಿದೆ. ಕುಡಿಯುವ ನೀರು ವಿತರಣೆಯಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನತೆ ತೋರಿಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಎಚ್ಚರಿಸಿದ್ದಾರೆ.
ಮಂಗಳವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಸ್ಥಿತಿಗತಿಯ ಬಗ್ಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು ವಿತರಣೆಗೆ ಹಣದ ಕೊರತೆಯಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಭೌಗೋಳಿಕವಾಗಿ ಅಂತರ್ಜಲ ಮಟ್ಟ ಕುಸಿದಿದೆ. ಕಾಡು ಮರಮಟ್ಟುಗಳಿರುವ ಕಾರಣ ಸುಳ್ಯ ಮತ್ತು ಪುತ್ತೂರು ಭಾಗಗಳಲ್ಲಿ ನೀರಿನ ಒರತೆ ಕಡಿಮೆಯಾಗಿಲ್ಲ. ಹಾಗೆಂದು ಅಗತ್ಯ ಅರಿತು ನೀರು ಬಳಕೆ ಮಾಡಬೇಕು. ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಮತ್ತು ಕೃಷಿಗೆ ಬಳಸುವ ನೀರನ್ನು ನಿಯಂತ್ರಿಸಬೇಕು ಎಂದರು.
ನೀರಿನ ಸಮಸ್ಯೆಗಳಿಗೆ ಕ್ಷೇತ್ರದ ವ್ಯತ್ಯಾಸಗಳಿಲ್ಲ, ಎಲ್ಲಿಗೆ ನೀರಿನ ಅವಶ್ಯಕತೆಯಿದೆಯೋ ಅಲ್ಲಿಗೆ ನೀರು ಒದಗಿಸುವ ಕೆಲಸವನ್ನು ಪಂಚಾಯತ್ ಪಿಡಿಒಗಳು ಮಾಡಬೇಕು ಎಂದ ಸಚಿವರು ನೀರು ವಿತರಣೆಗಾಗಿ ಪಿಡಿಒಗಳು ತಮ್ಮ ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ನೀರು ಸಮಸ್ಯೆಗಳ ಕುರಿತು ಗ್ರಾಪಂವಾರು ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಪಂಚಾಯತ್ ನೀರಿನ ಮೂಲವನ್ನು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕು. ಹಣದ ಕೊರತೆಯ ಸಬೂಬು ಹೇಳಿ ನೀರಿನ ಸಮಸ್ಯೆಯನ್ನು ಸೃಷ್ಟಿಸಬೇಡಿ ಎಂದು ಪಿಡಿಒಗಳಿಗೆ ಸಲಹೆ ನೀಡಿದರು. ವಿದ್ಯುತ್ ಸಮಸ್ಯೆ ಮತ್ತು ವೋಲ್ಟೇಜ್ ಸಮಸ್ಯೆಗಳನ್ನು ಪರಿಹರಿಸಲು ಮೆಸ್ಕಾಂ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಪಿಡಿಒಗಳು ಮತ್ತು ಮೆಸ್ಕಾಂ ಇಂಜಿನಿಯರ್ಗಳ ನಡುವೆ ಸಮನ್ವಯತೆಯ ಕೊರತೆ ಆದಾಗ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ಕುಡಿಯುವ ನೀರಿನ ಕುರಿತು ಎಲ್ಲಾ ಪಂಚಾಯತ್ಗಳಲ್ಲಿ ಖಾತ್ರಿ ನೀಡಬೇಕು ಎಂದು ಹೇಳಿದರು.
ನೀರಿನ ಸಮಸ್ಯೆಗಳ ಬಗ್ಗೆ ತಾಂತ್ರಿಕ ಸಮಸ್ಯೆಗಳನ್ನು ಹೇಳದೆ, ಜನರ ದೂರಿಗೆ ಕಾಯದೆ, ಅಧಿಕಾರಿಗಳೇ ಜನರ ಬಳಿಗೆ ತೆರಳಿ ಸಮಸ್ಯೆಯನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ಪಿಡಿಒ ಮತ್ತು ಇಂಜಿನಿಯರ್ಗಳು ಟೀಂ ಆಗಿ ಕೆಲಸ ಮಾಡಬೇಕು. ಎಲ್ಲಾ ಅಧಿಕಾರಿಗಳೂ ಕೇಂದ್ರಸ್ಥಾನದಲ್ಲಿ ಇರಬೇಕು. ರಜೆ ಬೇಕಾದಲ್ಲಿ ಪೂರ್ವ ಮಾಹಿತಿ ಪಡೆದುಕೊಳ್ಳಬೇಕು. ತುರ್ತು ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಕುಡಿಯುವ ನೀರು ಕೃಷಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ ಸೂಚಿಸಿದರು.
ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಬಾಬು, ಜಿಲ್ಲಾ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಉಪವಿಭಾಗಾಧಿಕಾರಿ ಪ್ರಮೀಳಾ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಉಪಸ್ಥಿತರಿದ್ದರು.