ಪಾಲಿಕೆಯ ನಿರ್ಲಕ್ಷ: ತುಕ್ಕು ಹಿಡಿಯುತ್ತಿರುವ ವಾಹನಗಳು
ಮಣ್ಣು ಪಾಲಾಗುತ್ತಿದೆ ನಾಗರಿಕರ ಅಮೂಲ್ಯ ತೆರಿಗೆ ಹಣ
_0.jpg)
ಶಿವಮೊಗ್ಗ, ಮೇ 3: ‘ಮೇಲೆಲ್ಲ ಥಳುಕು, ಒಳಗೆಲ್ಲ ಹುಳುಕು.’ ಎಂಬ ಗಾದೆ ಮಾತು ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಮೇಲ್ನೋಟಕ್ಕೆ ಪಾಲಿಕೆ ಕಟ್ಟಡದ ಹೊರನೋಟ ನಾಗರಿಕರ ಮನಸೂರೆಗೊಳ್ಳುತ್ತದೆ. ಆದರೆ ಒಳಭಾಗಕ್ಕೆ ಕಾಲಿಟ್ಟರೆ ಹತ್ತು ಹಲವು ಹುಳುಕುಗಳ ಸರಮಾಲೆಯ ಸತ್ಯದರ್ಶನವಾಗುತ್ತದೆ.
ಇದಕ್ಕೆ ತಾಜಾ ನಿದರ್ಶನವೆಂಬಂತೆ, ಪಾಲಿಕೆಯ ಆವರಣದಲ್ಲಿ ಕೋಟ್ಯಂತರ ರೂ. ವೌಲ್ಯದ ಘನತ್ಯಾಜ್ಯ ನಿರ್ವಹಣೆಯ ವಾಹನಗಳು ದುರಸ್ತಿಯಿಂದ ಮೂಲೆ ಸೇರಿವೆ. ಕಳೆದ ಹಲವು ತಿಂಗಳುಗಳಿಂದ ಈ ವಾಹನಗಳು ನಿಂತಲ್ಲಿಯೇ ನಿಂತಿದ್ದು, ಅಕ್ಷರಶಃ ತುಕ್ಕು ಹಿಡಿಯುತ್ತಿವೆ. ನಿರುಪಯುಕ್ತವಾಗಿ ಪರಿಣಮಿಸಿವೆ. ಮೂಲೆ ಸೇರಿರುವ ವಾಹನಗಳ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದರಿಂದ ನಾಗರಿಕರ ಅಮೂಲ್ಯ ತೆರಿಗೆ ಹಣ ಮಣ್ಣು ಪಾಲಾಗುವಂತಾಗಿದೆ. ಇದು ಪಾಲಿಕೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ. *ಧೂಳು ಹಿಡಿಯುತ್ತಿದೆ: ಪಾಲಿಕೆಯ ಉನ್ನತ ಮೂಲಗಳು ನೀಡುವ ಮಾಹಿತಿಯ ಪ್ರಕಾರ ಸುಮಾರು ಏಳಕ್ಕೂ ಅಧಿಕ ವಾಹನಗಳು ರಿಪೇರಿಗಾಗಿ ಮೂಲೆ ಸೇರಿವೆ. ಇದರಲ್ಲಿ ಸುಮಾರು 30 ಲಕ್ಷ ರೂ. ವ್ಯಯಿಸಿ ಖರೀದಿಸಲಾದ ‘ಬಾಬ್ಕಟ್’ ವಾಹನ ಕೂಡ ಸೇರಿದೆ. ನಗರದ ರಸ್ತೆಗಳಲ್ಲಿರುವ ಮಣ್ಣು ಹಾಗೂ ಕನ್ಸರ್ವೆನ್ಸಿಗಳ ಸ್ವಚ್ಛತೆಗೆಂದು ಈ ಹಿಂದಿನ ನಗರಸಭೆ ಅವಧಿಯಲ್ಲಿ ಲಕ್ಷಾಂತರ ರೂ. ವ್ಯಯಿಸಿ ‘ಬಾಬ್ಕಟ್’ ವಾಹನ ಖರೀದಿಸಲಾಗಿತ್ತು. ನೂರು ಪೌರ ಕಾರ್ಮಿಕರು ಒಂದು ದಿನ ಮಾಡುವ ಕೆಲಸವನ್ನು ಈ ವಾಹನ ಕೆಲವೇ ಗಂಟೆಗಳಲ್ಲಿ ಮಾಡುವ ಸಾಮರ್ಥ್ಯ ಹೊಂದಿತ್ತು. ಆದರೆ ಕಳೆದ ಐದಾರು ತಿಂಗಳಿನಿಂದ ಈ ವಾಹನ ದುರಸ್ತಿಯಾಗಿದ್ದು, ಧೂಳು ಹಿಡಿಯುತ್ತಿದೆ. ಅದರಂತೆ ತಲಾ 1 ಡಂಪರ್ ಪ್ಲಸರ್, ಸಕ್ಕಿಂಗ್, ಯುಜಿಡಿ ವಾಹನ, 3 ಟಾಟಾ ಏಸ್, 4 ಟ್ರ್ಯಾಕ್ಟರ್ಗಳು ರಿಪೇರಿಯಲ್ಲಿವೆ. ಕೆಲ ತಿಂಗಳುಗಳಿಂದ ಘನತ್ಯಾಜ್ಯ ವಿಲೇವಾರಿಗೆ ಈ ವಾಹನಗಳ ಬಳಕೆ ಮಾಡುತ್ತಿಲ್ಲವಾಗಿದೆ. ಈ ಎಲ್ಲ ವಾಹನಗಳ ಒಟ್ಟು ವೌಲ್ಯ ಕೋಟಿ ರೂ. ದಾಟುತ್ತದೆ ಎಂದು ಪಾಲಿಕೆಯ ಮೂಲಗಳು ಹೇಳುತ್ತವೆ. *ದುಂದುವೆಚ್ಚ: ‘ನಗರದ ವಿವಿಧೆಡೆ ಘನತ್ಯಾಜ್ಯ ವಿಲೇವಾರಿ, ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲವೆಂಬ ಆರೋಪ ಸರ್ವೇಸಾಮಾನ್ಯವಾಗಿದೆ. ಆದರೆ ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತೆಗೆಂದು ನಾಗರಿಕರ ತೆರಿಗೆ ಹಣದಲ್ಲಿ ಖರೀದಿಸಿದ ಕೋಟ್ಯಂತರ ರೂ. ವೌಲ್ಯದ ವಾಹನಗಳು ಪಾಲಿಕೆ ಆಡಳಿತದ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಯಿಂದ ತುಕ್ಕು ಹಿಡಿಯುವಂತಾಗಿರುವುದು ಶೋಚನೀಯ ಸಂಗತಿ ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನಾದರೂ ಮೇಯರ್ ಹಾಗೂ ಆಯುಕ್ತರು ಇತ್ತ ಗಮನಹರಿಸಬೇಕಾಗಿದೆ. ದುರಸ್ತಿಯಿಂದ ಮೂಲೆ ಸೇರಿರುವ ವಾಹನಗಳ ರಿಪೇರಿಗೆ ಕ್ರಮಕೈಗೊಳ್ಳಬೇಕಾಗಿದೆ. ಇನ್ನು ಮುಂದಾದರೂ ಪಾಲಿಕೆಯ ವಾಹನಗಳ ಸಮರ್ಪಕ ಮೇಲುಸ್ತುವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದು ಜನರು ಆಗ್ರಹಿಸಿದ್ದಾರೆ.
ಪಾಲಿಕೆ ಅವ್ಯವಸ್ಥೆಗಳ ಆಗರ
ನಾಗರಿಕರ ಅಮೂಲ್ಯ ತೆರಿಗೆ ಹಣ ವ್ಯಯಿಸಿ ಖರೀದಿಸಿರುವ ವಾಹನಗಳು ಮೂಲೋದ್ದೇಶಕ್ಕೆ ಬಳಕೆಯಾಗದೆ ಧೂಳು ಹಿಡಿಯುತ್ತಾ ನಿಂತಿರುವುದು ನಿಜಕ್ಕೂ ವಿಷಾದನೀಯ. ಪಾಲಿಕೆ ಕಚೇರಿ ಆವರಣದಲ್ಲಿಯೇ ಹತ್ತು ಹಲವು ಸಮಸ್ಯೆಯಿದೆ. ಮೇಯರ್ ಹಾಗೂ ಆಯುಕ್ತರು ಈ ಸಮಸ್ಯೆಗಳ ಪರಿಹಾರಕ್ಕೆ ಮೊದಲು ಕ್ರಮಕೈಗೊ ಳ್ಳಬೇಕು. ನಾಗರಿಕರ ಹಣ ಮಣ್ಣು ಪಾಲಾಗದಂತೆ ಎಚ್ಚರವಹಿಸಬೇಕು. ಇಲ್ಲದಿ ದ್ದರೆ ಪಾಲಿಕೆ ಆಡಳಿತಕ್ಕೆ ನಾಗರಿಕರು ತಕ್ಕ ಪಾಠ ಕಲಿಸುವುದು ನಿಶ್ಚಿತವಾಗಿದೆ.
<ಎಚ್.ದರ್ಶನ್, ಯುವ ಮುಖಂಡ







