ಸಂಸದ ಗೋವಿಂದ್ಗೆ ದಾವೂದ್ ನಂಟು:
ಉ.ಪ್ರ. ರಾಜ್ಯಪಾಲ ರಾಮ್ ನಾಯ್ಕ ಆರೋಪ
ಲಕ್ನೌ, ಮೇ 3: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಬಿಲ್ಡರ್ ಹಿತೇನ್ ಠಾಕೂರ್ ನೆರವು ಪಡೆದು ನಟ ಗೋವಿಂದ ತನ್ನನ್ನು 2004ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಲ್ಲಿ ಸೋಲಿಸಿದ್ದರೆಂದು ಪ್ರಸಕ್ತ ಉತ್ತರ ಪ್ರದೇಶ ರಾಜ್ಯಪಾಲರಾಗಿರುವ ರಾಮ್ ನಾಯ್ಕಾಆರೊಪಿಸಿದ್ದಾರೆ. ಆದರೆ ಈ ಆರೋಪವನ್ನು ನಟ ತಿರಸ್ಕರಿಸಿದ್ದಾರೆ.
ಮರಾಠಿಯಲ್ಲಿ ಬರೆದಿರುವ ತಮ್ಮ ಆತ್ಮಚರಿತ್ರೆ ಚೈರೇವೇಟಿ (ಮುಂದಕ್ಕೆ ಚಲಿಸುತ್ತಿರಿ) ಮುಂಬೈನಲ್ಲಿ ಇತ್ತೀಚೆಗೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು ಮೇಲಿನಂತೆ ಆರೋಪಿಸಿದ್ದಾರೆ.
1999-2004ರ ನಡುವೆ ಮೂರು ಬಾರಿ ಸಂಸದರಾಗಿದ್ದ ರಾಮ್ ನಾಯ್ಕ ಮುಂಬೈ ನಗರದ ಅಭಿವೃದ್ಧಿಗೆ ತಾನು ಸಾಕಷ್ಟು ಕೊಡುಗೆ ನೀಡಿರುವ ಹೊರತಾಗಿ ತನ್ನ 11,000 ಅಂತರದ ಪರಾಜಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲವೆಂದು ಬರೆದಿದ್ದಾರೆ. ‘ಕಹಿ ಸತ್ಯ’ಗಳ ಬಗ್ಗೆ ಬರೆಯುತ್ತಾ ದಾವೂದ್ ಹಾಗೂ ಠಾಕೂರ್ ಜತೆ ಸ್ನೇಹದಿಂದಿದ್ದ ನಟ ಅವರನ್ನು ಮತದಾರರನ್ನು ಬೆದರಿಸಲು ಬಳಸಿಕೊಂಡಿದ್ದಾನೆಂದು ಹೇಳಿದ್ದಾರೆ.
ಆದರೆ ಗೋವಿಂದ ಆರೋಪವನ್ನು ನಿರಾಕರಿಸಿ ತನ್ನನ್ನು ಗೆಲ್ಲಿಸಿದ್ದು ಜನತೆ ಎಂದು ಹೇಳಿದ್ದಾರೆ. ‘‘ಆ ಸಮಯ ನನಗೆ ಯಾರದೇ ಸಹಾಯ ಬೇಕಿರಲಿಲ್ಲ. ರಾಮ್ ನಾಯ್ಕಾ ಈ ಆರೋಪ ಮಾಡಿದ್ದಾರೆಂದರೆ ನನ್ನ ಕ್ಷೇತ್ರದ ಜನತೆ ಭೂಗತ ಪಾತಕಿಗಳಿಗೆ ತಮ್ಮನ್ನು ಮಾರಿ ಬಿಟ್ಟರೆಂದು ಅರ್ಥವೇ? ಇಂತಹ ಮಾತುಗಳಿಂದ ಯಾರನ್ನೂ ಅವಮಾನಿಸಬೇಡಿ,’’ಎಂದು ಗೋವಿಂದ ಹೇಳಿದರು.
‘‘ನಾನು ಮತ್ತೆ ಚಿತ್ರರಂಗಕ್ಕೆ ಹೆಜ್ಜೆಯಿಟ್ಟಿರುವ ಇಂತಹ ಸಮಯದಲ್ಲಿ ನನ್ನ ಹೆಸರನ್ನು ಹಾಳು ಮಾಡದಂತೆ ಹಾಗೂ ನನ್ನ ಕೆಲಸಗಳಿಗೆ ತಡೆಯಾಗದಂತೆ ನಾನು ನಾಯ್ಕಿ ಅವರನ್ನು ವಿನಂತಿಸುತ್ತೇನೆ,’’ಎಂದು ಗೋವಿಂದ ಹೇಳಿದರು.
‘‘ಚುನಾವಣಾ ಪ್ರಚಾರದ ಸಂದರ್ಭ ಟಿವಿ ಚಾನೆಲ್ಲೊಂದು ಕೂಡ ಗೋವಿಂದರ ಚಿತ್ರಗಳನ್ನೇ ತೋರಿಸಿ ಅವರಿಗೆ ಸಹಾಯ ಮಾಡಿತು,’’ಎಂದು ನಾಯ್ಕ ಆರೋಪಿಸಿದ್ದಾರೆ.
ತಮ್ಮ ಆತ್ಮಚರಿತ್ರೆಯನ್ನು ಹಿಂದಿ, ಇಂಗ್ಲಿಷ್, ಉರ್ದು ಹಾಗೂ ಗುಜರಾತಿ ಭಾಷೆಗಳಿಗೆ ಭಾಷಾಂತರಗೊಳಿಸುವ ಇರಾದೆ ನಾಯ್ಕಿಗಿದೆ.





