ಮಂಗಳೂರು ನಗರಕ್ಕೆ ಇನ್ನು 3 ದಿನಗಳಿಗೊಮ್ಮೆ ನೀರು
15 ದಿನಗಳಿಗಾಗುವಷ್ಟು ಮಾತ್ರ ನೀರು ಲಭ್ಯ, ಪಿಕ್ಅಪ್ ವಾಹನಗಳಲ್ಲಿ ಸಿಂಟೆಕ್ಸ್ನಲ್ಲಿ ನೀರು ಪೂರೈಕೆ
ಮಂಗಳೂರು, ಮೇ 5: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 5.6 ಅಡಿಗೆ ಇಳಿಕೆಯಾಗಿದೆ. ಅಣೆಕಟ್ಟಿನ ಬಳಿ ಇರುವ ಬಾವಿಯ ಹೂಳೆತ್ತುವ ಮೂಲಕ ಅಣೆಕಟ್ಟು ಬರಿದಾಗುವವರೆಗೆ ನೀರು ಪಂಪ್ ಮಾಡಲು ಸಾಧ್ಯವಾಗಲಿದ್ದು, ಇದರಿಂದ ಮೂರು ದಿನಗಳಿಗೊಮ್ಮೆಯಂತೆ ಈ ತಿಂಗಳ ಅಂತ್ಯದವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದು ಎಂದು ಮನಪಾ ಆಯುಕ್ತ ಡಾ. ಗೋಪಾಲಕೃಷ್ಣ ತಿಳಿಸಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ನಡೆದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ದಿಶಾ ಪಾವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ನೀರನ್ನು ಬಿಡಲಾಗಿದ್ದರೂ ಅದಿನ್ನೂ ಉಪ್ಪಿನಂಗಡಿಗೂ ತಲುಪಿಲ್ಲ. ಎಂಆರ್ಪಿಎಲ್ ಅಣೆಕಟ್ಟಿನಿಂದ ಎಎಂಆರ್ ಡ್ಯಾಂ ಮೂಲಕ ತುಂಬೆ ಅಣೆಕಟ್ಟಿಗೆ ಎರಡರಿಂದ ಮೂರು ಇಂಚುಗಳಷ್ಟು ನೀರು ಹರಿವು ಆಗಿದೆ. ಹಾಗಾಗಿ ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ ಲಭ್ಯ ಇರುವ ನೀರನ್ನು 3 ಸಲವಷ್ಟೆ ಪಂಪ್ ಮಾಡಿ ಮೇಲಕ್ಕೆತ್ತಬಹುದು. 4 ಅಡಿಗೆ ನೀರು ಇಳಿಕೆಯಾದಲ್ಲಿ ಪಂಪಿಂಗ್ ಕಷ್ಟಸಾಧ್ಯವಾಗಲಿದೆ. ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಅಣೆಕಟ್ಟಿಗೆ ಭೇಟಿ ನೀಡಿ ತುಂಬೆ ಅಣೆಕಟ್ಟಿನಲ್ಲಿರುವ ಬಾವಿಯನ್ನು ಪರಿಶೀಲಿಸಿ ಹೂಳೆತ್ತಲು ಸೂಚಿಸಿದ್ದಾರೆ.
ಹಾಗೆ ಮಾಡಿದ್ದಲ್ಲಿ ನೀರು ಬರಿದಾಗುವವರೆಗೂ ಪಂಪಿಂಗ್ ಮಾಡುವ ಸಾಧ್ಯತೆ ಬಗ್ಗೆಯೂ ಚರ್ಚಿಸಲಾಗಿದ್ದು, ಹಾಗಾದಲ್ಲಿ 3 ದಿನಗಳಿಗೊಮ್ಮೆ ನಗರಕ್ಕೆ ಮುಂದಿನ 20ರಿಂದ 21 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ, ಎತ್ತರದ ಪ್ರದೇಶಗಳಿಗೆ ನೀರು ಪೂರೈಸಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಪಿಕ್ಅಪ್ ವಾಹನಗಳಲ್ಲಿ ಸಿಂಟೆಕ್ಸ್ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ವಿವರಿಸಿದರು. ಈ ನಡುವೆ ನಗರದಲ್ಲಿ ನೀರು ಲಭ್ಯವಿರುವ 174 ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಗುರುತಿಸಲಾದ 90 ತೆರೆದ ಬಾವಿಗಳಲ್ಲಿ 22 ಸರಕಾರಿ ಹಾಗೂ 14 ಖಾಸಗಿ ಬಾವಿಗಳ ನೀರು ಕುಡಿಯಲು ಯೋಗ್ಯವಾಗಿವೆ. 41 ಬಾವಿಗಳ ನೀರಿನ ಮಾದರಿಯನ್ನು ಪರಿಶೀಲಿಸಲಾಗಿದೆ. 12 ಬಾವಿಗಳನ್ನು ಸ್ವಚ್ಛಗೊಳಿಸಿ ನೀರು ಪೂರೈಕೆ ಮಾಡಬಹುದಾಗಿದೆ. ಅದಕ್ಕಾಗಿ ಈಗಾಗಲೇ 22 ಟ್ಯಾಂಕರ್ಗಳನ್ನು ಸಿದ್ಧವಿರಿಸಲಾಗಿದೆ ಎಂದರು.
ಪಿಕ್ಅಪ್ಗಳ ಮೂಲಕ ಸಿಂಟೆಕ್ಸ್ಗಳಲ್ಲಿ ನೀರು ಪೂರೈಕೆ: ಮೇಯರ್
ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಖಾಸಗಿಯವರಿಂದ 25 ಪಿಕ್ಅಪ್ ವಾಹನಗಳನ್ನು ಉಚಿತವಾಗಿ ಪಡೆಯಲಾಗಿದ್ದು, 30 ಸಿಂಟೆಕ್ಸ್ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಈ ವ್ಯವಸ್ಥೆ ಕಾರ್ಯಾಚರಿಸಲಿದೆ ಎಂದು ಮೇಯರ್ ಹರಿನಾಥ್ ಸಭೆಯಲ್ಲಿ ತಿಳಿಸಿದರು.
3 ದಿನಗಳಿಗೊಮ್ಮೆ ನೀರು ಪೂರೈಕೆ: ಮೇಯರ್ ಸ್ಪಷ್ಟನೆ
ಸಭೆಯಲ್ಲಿ ಪ್ರಸ್ತುತ 2 ದಿನಗಳಿಗೊಮ್ಮೆ ನಗರದಲ್ಲಿ ನೀರು ಪೂರೈಕೆಯಾಗುತ್ತಿದೆ ಎಂದು ಸಚಿವರಾದಿಯಾಗಿ ಅಧಿಕಾರಿಗಳ ಮಾತಿಗೆ ಪತ್ರಕರ್ತರು, ಈಗಾಗಲೇ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ತಪ್ಪು ಮಾಹಿತಿ ನೀಡಬೇಡಿ ಎಂದು ಆಕ್ಷೇಪಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ನಗರದಲ್ಲಿ ಪ್ರಸ್ತುತ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿರುವುದು ಎಂದು ಸ್ಪಷ್ಟಪಡಿಸಿದರು. ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಮೂರು ದಿನಗಳಿಗೊಮ್ಮೆ ಪೂರೈಕೆ ಮಾಡುವುದು ಅನಿವಾರ್ಯವಾಗಿದೆ. ನಡುವೆ ಮಳೆ ಬಂದಲ್ಲಿ ಎರಡು ದಿನಗಳಿಗೊಮ್ಮೆ ಪೂರೈಕೆ ಮಾಡುವ ಬಗ್ಗೆ ತೀರ್ಮಾನಿಸಬಹುದು ಎಂದು ಆಯುಕ್ತ ಡಾ. ಗೋಪಾಲಕೃಷ್ಣ ಸಭೆಯಲ್ಲಿ ತಿಳಿಸಿದರು.