ಮಂಗಳೂರು ವಿವಿ ಕ್ಯಾಂಪಸ್ ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸ್ನಾತಕೋತ್ತರ ಪದವಿ ಫಲಿತಾಂಶ ಗೊಂದಲ
ಕೊಣಾಜೆ, ಮೇ 6: ಪದವಿ ಪರೀಕ್ಷೆ ಫಲಿತಾಂಶ ಗೊಂದಲದ ಬಗ್ಗೆ ಈ ಹಿಂದೆ ಪದವಿ ವಿದ್ಯಾರ್ಥಿಗಳು ವಿವಿಯ ವ್ಯವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರೀಕ್ಷಾ ಫಲಿತಾಂಶದಲ್ಲೂ ವಿಳಂಬ ಹಾಗೂ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿದ್ದು , ಶೀಘ್ರವೇ ಗೊಂದಲವನ್ನು ಪರಿಹರಿಸುವಂತೆ ಆಗ್ರಹಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ರಾಜಕಾರಣಿಗಳ ಹಾಗೆ ಆಶ್ವಾಸನೆಗಳನ್ನು ವಿವಿ ಅಧಿಕಾರಿಗಳೇ ಕೊಡಬೇಡಿ, ಶಿಕ್ಷಿತರಂತೆ ವರ್ತಿಸಿ ಫಲಿತಾಂಶದಲ್ಲಿ ಎದುರಾಗಿರುವ ಗೊಂದಲವನ್ನು ನಿವಾರಿಸಿ ಕೂಡಲೇ ನ್ಯಾಯ ದೊರಕಿಸಿ ಕೊಡಿ. ಫಲಿತಾಂಶದ ಗೊಂದಲ ಕುರಿತು ಕುಲಸಚಿವರಲ್ಲಿ ಪ್ರಶ್ನಿಸಿದರೆ ಪೇಪರ್ಗಳೆಲ್ಲಾ ಮಿಕ್ಸ್ ಆಗಿದೆ ಅನ್ನುವ ಉತ್ತರ ಕೊಡುತ್ತಾರೆ. ಸದ್ಯ ಹಲವರಿಗೆ ಬಂದಿರುವ ಫಲಿತಾಂಶ ಅವರದ್ದೇ ಅನ್ನುವುದು ಖಚಿತವಿಲ್ಲ. ಇದು ಪ್ರೊಫಸರ್ಗಳ ಅಥವಾ ಮಂಗಳೂರು ವಿ.ವಿ. ವಿರುದ್ಧದ ಪ್ರತಿಭಟನೆಯಲ್ಲ. ಇದು ಆಡಳಿತ ಸೌಧದ ಅಧಿಕಾರಿಗಳ ವಿರುದ್ಧದ ಪ್ರತಿಭಟನೆ . ನಾಲ್ಕನೆ ಸೆಮಿಸ್ಟರಿನ ಅವಧಿ ಕಳೆದಿದ್ದು, ಈವರೆಗೆ ಪರೀಕ್ಷಾ ವೇಳಾಪಟ್ಟಿಯೂ ಬಂದಿಲ್ಲ. ಹೀಗಾದಲ್ಲಿ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ ಇಟ್ಟಂತೆ ಆಗುವುದು ಎಂದು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಅಲವತ್ತುಕೊಂಡರು. ಕೆಲವು ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದರೂ ಹಲವಾರು ವಿದ್ಯಾರ್ಥಿಗಳಿಗೆ ಫಲಿತಾಂಶವೇ ಬಂದಿಲ್ಲ. ಫಲಿತಾಂಶ ಲಭಿಸಿದ ವಿದ್ಯಾರ್ಥಿಗಳೂ ಹಲವಾರು ಗೊಂದಲವನ್ನು ಎದುರಿಸುವಂತಾಗಿದೆ . ಪಡೆದ ಅಂಕಪಟ್ಟಿಯಲ್ಲಿ ವೈಪರಿತ್ಯದ ಜೊತೆಗೆ ಆಯ್ಕೆಯ ವಿಷಯ ಬಿಟ್ಟು ಬೇರೆ ವಿಷಯದ ಅಂಕ ಬಂದಿದೆ. ಅಲ್ಲದೆ ಎರಡು ತಿಂಗಳು ವಿಳಂಬವಾಗಿ ಬಂದ ಫಲಿತಾಂಶವೂ ಗೊಂದಲಮಯವಾಗಿದೆ ಮಾತ್ರವಲ್ಲದೆ ನಾಲ್ಕನೆ ಸೆಮಿಸ್ಟರ್ ಅವಧಿಯೂ ಮುಗಿಯುತ್ತಾ ಬಂದಿದೆ. ಮುಂದಿನ ಉದ್ಯೋಗದ ಆಯ್ಕೆಗೂ ಇದರಿಂದ ತೊಂದರೆ ಆಗಿದ್ದು ಈ ಬಗ್ಗೆ ವಿವಿಯು ಶೀಘ್ರ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಪರೀಕ್ಷಾಂಗ ಕುಲಸಚಿವ ಎ.ಎಂ ಖಾನ್ ಪ್ರತಿಭಟನಾ ಸ್ಥಳಕ್ಕೆ ಬಂದು ಮಾತನಾಡಿ, ‘ಫಲಿತಾಂಶದಲ್ಲಿನ ಗೊಂದಲವನ್ನು ಮೇ 16 ರ ಒಳಗೆ ಬಗೆಹರಿಸಲಾಗುವುದು. ಏಕಾಏಕಿ ಪ್ರತಿಭಟನೆ ನಡೆಸಿ ಆಡಳಿತ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ’ ಎಂದರು.
ಈ ಸಂದರ್ಭ ಫಲಿತಾಂಶ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಮುಂದಿಟ್ಟಾಗ ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ ಆಡಳಿತ ವ್ಯವಸ್ಥೆಯಡಿ ಚರ್ಚಿಸುವ ಎಂದು ಪರೀಕ್ಷಾಂಗ ಕುಲಸಚಿವರು ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಂದಿಸದೆ ಸ್ಥಳದಿಂದ ತೆರಳಿದರು.
ಅಲ್ಲದೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು.
ಉತ್ತರದಿಂದ ತೃಪ್ತರಾಗದ ವಿದ್ಯಾರ್ಥಿಗಳು ಮತ್ತೆ ಆಡಳಿತಸೌಧದ ಮುಂದೆ ಧರಣಿ ಕುಳಿತು ಪ್ರತಿಭಟನೆಯನ್ನು ಮುಂದುವರಿಸಿದರು.