ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುವಲ್ಲಿ ವಿಫಲರಾಗಿದ್ದೇವೆ: ಶಕುಂತಳಾ ಶೆಟ್ಟಿ
ಪುತ್ತೂರು, ಮೇ 6: ರಾಜ್ಯದಲ್ಲಿ ದಕ್ಷತೆಯಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನತೆಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸರಕಾರದ ಸಾಧನೆಗಳನ್ನು ನಾವು ಪ್ರಚಾರ ಮಾಡುವ ಕೆಲಸಕ್ಕೆ ಹೋಗದ ಕಾರಣ ಜನತೆಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ . ಇದರಿಂದಾಗಿ ಸರ್ಕಾರದ ಸಾಧನೆ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಪಂನ ನೂತನ ಸಭಾಂಗಣ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಬಡವರಿಗಾಗಿ ಅನ್ನಬಾಗ್ಯ, ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಲು ಕ್ಷೀರಭಾಗ್ಯ, 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗಾಗಿ ಮನಸ್ವಿನಿ ಯೋಜನೆ, ಎಂಡೋ ಪೀಡಿತರಿಗಾಗಿ ಎಂಡೋ ಪಾಲನಾ ಕೇಂದ್ರ ನಿರ್ಮಾಣ ಹಾಗೂ ಎಂಡೋ ಪೀಡಿತರಿಗೆ 3 ಸಾವಿರ ರೂ. ಮಾಸಾಶನ ಮೊದಲಾದ ಹತ್ತು ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದ ರಸ್ತೆಗಳು ಹಿಂದಿಗಿಂತ ಅಭಿವೃದ್ದಿಗೊಂಡಿದ್ದು, ರಸ್ತೆ ನಿರ್ಮಾಣದಲ್ಲಿ ಮಾದರಿಯಾಗಿದೆ. ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಹಾಗೂ ರಸ್ತೆಗಳ ಡಾಮರೀಕರಣ ಸೇರಿದಂತೆ ನೆಟ್ಟಣಿಗೆ ಮುಡ್ನೂರು ಗ್ರಾಮವೊಂದಕ್ಕೆ ಸುಮಾರು 3.5ಕೋ.ರೂ. ಅನುದಾನ ಬಂದಿದೆ ಎಂದು ಅವರು ಹೇಳಿದರು.
ತುಳುನಾಡಿನ ವೀರ ಪುರುಷರೆಂಬ ಐತಿಹಾಸಿಕ ಹಿನ್ನೆಲೆಯಿರುವ ಕೋಟಿ ಚೆನ್ನಯರ ಜನ್ಮ ಸ್ಥಳವಾದ ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ 5ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಈ ಕ್ಷೇತ್ರಕ್ಕೆ ಈಶ್ವರಮಂಗಲದಿಂದ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕೆಂದು ಪ್ರಸ್ತಾಪಗಳು ಬಂದಿದೆ. ಈ ನಿಟ್ಟಿನಲ್ಲಿ ಈಶ್ವರಮಂಗಲದ ಪಂಚಮುಖಿ ಕ್ಷೇತ್ರ ಹಾಗೂ ಪಡುಮಲೆ ಈ ಎರಡೂ ಕ್ಷೇತ್ರಗಳನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಸಂಪರ್ಕ ರಸ್ತೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಾಸಕಿ ಶಕುಂತಳಾ ಶೆಟ್ಟಿ ಈ ಸಂದರ್ಭ ಭರವಸೆ ನೀಡಿದರು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಕರ್ನೂರು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಪಂ ಸದಸ್ಯೆ ಪೌಝಿಯಾ ಇಬ್ರಾಹೀಂ , ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಅತಿಥಿಗಳಾಗಿ ಮಾತನಾಡಿದರು. ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಕಿರಿಯ ಇಂಜಿನಿಯರ್ ಜನಾರ್ದನ ಉಪಸ್ಥಿತರಿದ್ದರು.
ಇದೇ ಸಂದರ್ದಲ್ಲಿ 94 ಸಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ ನೆಟ್ಟಣಿಗೆ ಮುಡ್ನೂರು ಗ್ರಾಮದ 31 ಮಂದಿ ಫಲಾನುವಿಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಿದರು. ಕಂದಾಯ ಇಲಾಖೆಯಿಂದ ನೀಡುವ ರಾಷ್ಟ್ರೀಯ ಕುಟುಂಬ ಸಹಾಯಧನದ 20ಸಾವಿರ ರೂ.ಗಳ ಚೆಕ್ನ್ನು ಮೂರು ಮಂದಿ ಫಲಾನುಭವಿಗಳಿಗೆ ಶಾಸಕರು ವಿತರಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನೀಲ್ ಸ್ವಾಗತಿಸಿದರು. ಪಂಚಾಯತ್ ಲೆಕ್ಕ ಸಹಾಯಕ ಚಂದ್ರಶೇಖರ್ ವಂದಿಸಿದರು. ಗ್ರಾಪಂ ಮಾಜಿ ಸದಸ್ಯ ರಾಮ ಮೇನಾಲ ಕಾರ್ಯಕ್ರಮ ನಿರೂಪಿಸಿದರು.