ರಸ್ತೆ ಅಪಘಾತ:ಕೇಂದ್ರ ಸಚಿವ ಬಾಬುಲ್ ಸುಪ್ರಿಯೊಗೆ ಗಾಯ
ಹೊಸದಿಲ್ಲಿ,ಮೇ 6: ಕೇಂದ್ರ ಸಹಾಯಕ ನಗರಾಭಿವೃದ್ಧಿ ಸಚಿವ ಬಾಬುಲ್ ಸುಪ್ರಿಯೊ ಅವರು ಶುಕ್ರವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಪ್ರಿಯೊ ತನ್ನ ಮಗಳನ್ನು ಕರೆತರಲು ಬೈಕಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದು,ಅವರ ಚಾಲಕ ಆಡಿ ಕಾರಿನಲ್ಲಿ ಹಿಂಬಾಲಿಸುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದ ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುಪ್ರಿಯೊ(ಅಸನ್ಸೋಲ್) 2014ರಲ್ಲಿ ಪ.ಬಂಗಾಳದಿಂದ ಆಯ್ಕೆಯಾಗಿದ್ದ ಇಬ್ಬರು ಬಿಜೆಪಿ ಸಂಸದರ ಪೈಕಿ ಓರ್ವರಾಗಿದ್ದಾರೆ.
.................
ಮೋದಿ ವಿರುದ್ಧ ಫೇಸ್ಬುಕ್ನಲ್ಲಿ ಟೀಕೆ: ಯುವಕನ ಸೆರೆ
ಭೋಪಾಲ,ಮೇ 6: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಫೇಸ್ಬುಕ್ ಟೀಕೆ ಬಲು ದುಬಾರಿಯೆಂಬುದು ಬಿಜೆಪಿ ಆಡಳಿತದ ಮಧ್ಯಪ್ರದೇಶದ ಯುವಕನೊಬ್ಬನಿಗೆ ಸಾಬೀತಾಗಿದೆ. ಆತನೀಗ ಕಾರಾಗೃಹದಲ್ಲಿದ್ದಾನೆ.
ರವಿ ಚೌರಾಸಿಯಾ ಎಂದು ಗುರುತಿಸಲಾಗಿರುವ ಈ ಯುವಕನನ್ನು, ಪ್ರಧಾನಿಯ ಬಗ್ಗೆ ಆಕ್ಷೇಪಾರ್ಹ ಟೀಕೆಗಳಿಗಾಗಿ ಬಂಧಿಸಲಾಗಿದೆ. ಈ ಬಗ್ಗೆ ‘ನಮೋಗ್ರೂಪ್’ ಪೊಲೀಸರಿಗೆ ದೂರು ನೀಡಿತ್ತು.
ನೀಮುಚ್ನ ಬಘಾನಾ ನಿವಾಸಿ ಚೌರಾಸಿಯಾನ ವಿರುದ್ಧ ಐಪಿಸಿಯ ಸೆ.506, 507 ಹಾಗೂ ಐಟಿ ಕಾಯ್ದೆಗಳನ್ವಯ ಮೊಕದ್ದಮೆ ಹೂಡಲಾಗಿದಯೆಂದು ವೆಬ್ಸೈಟ್ ನ್ಯೂಸ್ 18 ವರದಿ ಮಾಡಿದೆ.
ಕಾರಾಗೃಹಕ್ಕೆ ಕಳುಹಿಸುವ ಮೊದಲು ಚೌರಾಸಿಯಾನನ್ನು ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ಹಾಜರುಪಡಿಸಾಗಿತ್ತು.
ತಾವು ಹನುಮ ಜಯಂತಿಯ ದಿನ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಬರೆದಿದ್ದೆವು. ಅದನ್ನು ಆರೋಪಿಯು ಕ್ರಮೇಣ ‘ಅಶ್ಲೀಲ’ ಟೀಕೆಯೊಂದಿಗೆ ಶೇರ್ ಮಾಡಿದ್ದನೆಂದು ನಮೋಗ್ರೂಪ್ ದೂರಿನಲ್ಲಿ ಆರೋಪಿಸಿದೆ.
ಅದು ಟೀಕೆಯ ಸ್ಕ್ರೀನ್ ಶಾಟ್ಗಳನ್ನು ದೂರಿನೊಂದಿಗೆ ಲಗ್ತೀಕರಿಸಿದೆ.







