ಸೋನಿಯಾಗಾಂಧಿ, ರಾಹುಲ್- ಮನಮೋಹನ್ ಬಂಧನ, ಬಿಡುಗಡೆ
ಹೊಸದಿಲ್ಲಿ, ಮೇ 6: ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ದಾಳಿಗೊಳಗಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನರೇಂದ್ರ ಮೋದಿ ಸರಕಾರವು ಕಾಂಗ್ರೆಸನ್ನು ‘ಹೆದರಿಸಲು ಪ್ರಯತ್ನಿಸಬಾರದೆಂದು’ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ದುರ್ಬಲವೆಂದು ಯೋಚಿಸುವ ತಪ್ಪು ಮಾಡಬೇಡಿ. ತಾವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಅಥವಾ ನಾಶಗೊಳಿಸಲು ಅವಕಾಶ ನೀಡುವುದಿಲ್ಲ ಎಂದವರು, ಸಂಸತ್ತಿನೆಡೆಗೆ ನಡಿಗೆಗೆ ಪ್ರಯತ್ನಿಸುವ ಮುನ್ನ ಜಂತರ್-ಮಂತರ್ನಲ್ಲಿ ಕಾಂಗ್ರೆಸ್ ನಡೆಸಿದ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿಯಲ್ಲಿ ಹೇಳಿದರು.
ಜೀವನವು ತನಗೆ ಹೋರಾಟವನ್ನು ಕಲಿಸಿದೆಯೆಂದು ಸೋನಿಯಾ ತಿಳಿಸಿದರು.
ಸಂಸತ್ನೆಡೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ತಡೆದಾಗ ಸೋನಿಯಾ ಹಾಗೂ ಪಕ್ಷದ ಇತರ ಉನ್ನತ ನಾಯಕರು ಸ್ವಯಂ ಬಂಧನಕ್ಕೆ ಒಳಗಾದರು.
ಸೋನಿಯಾ, ರಾಹುಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತರರನ್ನು ಸಂಸದ್ಭವನ ರಸ್ತೆ ಪೊಲೀಸ್ ಠಾಣೆಯಲ್ಲಿ ಇರಿಸಿ, ಸ್ವಲ್ಪ ಸಮಯದ ಬಳಿಕ ಬಿಡುಗಡೆಗೊಳಿಸಲಾಯಿತು.
ತಮ್ಮನ್ನು ಹೆದರಿಸಲು ಅಥವಾ ಅಪಮಾನಿಸಲು ಪ್ರಯತ್ನಿಸಬೇಡಿ. ಜೀವನವು ತನಗೆ ಹೋರಾಟವನ್ನು ಕಲಿಸಿದೆಯೆಂದ ಸೋನಿಯಾ ಗುಡುಗಿದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಸರಕಾರ ಹೇಳಿದುದನ್ನು ಒಪ್ಪಿಕೊಳ್ಳದವರಿಗೆ ಕಿರುಕುಳ ನೀಡಲಾಗುತ್ತಿದೆ. ಅವರ ದಿನಗಳೀಗ ಮುಗಿದಿದೆ. ಇದೇ ರೀತಿ ಮುಂದುವರಿದರೆ ಜನರು ಅವರಿಗೆ ಪಾಠ ಕಲಿಸುತ್ತಾರೆ ಎಂದರು.
ಆರೆಸ್ಸೆಸ್ನತ್ತ ವಾಗ್ಪ್ರಹಾರ ಹರಿಸಿದ ಸೋನಿಯಾ, ರೈಸಿನಾ ಹಿಲ್ ಹಾಗೂ ನಾಗಪುರದಲ್ಲಿ ಕುಳಿತಿರುವವರಿಗೆ ಕೇಳಿಸುವಷ್ಟು ಪ್ರಬಲ ಸಂದೇಶವೊಂದನ್ನು ತಾವು ಕಳುಹಿಸಬೇಕೆಂದು ಹೇಳಿದರು.
ಮೋದಿ ಸರಕಾರ ಪ್ರಜಾಸತ್ತೆಯ ಕೊಲೆ ಮಾಡುತ್ತಿದೆ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಗೊಳಿಸುತ್ತಿದೆಯೆಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವ ನಾಶಕ್ಕೆ ಅವರು ಮಾಡುವ ಯಾವುದೇ ಪ್ರಯತ್ನವನ್ನೂ ಸಫಲವಾಗಲು ತಾವು ಬಿಡುವುದಿಲ್ಲ. ತಮಗೆ ಹೋರಾಟ ನಡೆಸುವುದು ಗೊತ್ತಿದೆ. ಹಿಂದೆಯೂ ತಾವು ಅನೇಕ ಸವಾಲುಗಳನ್ನೆದುರಿಸಿದ್ದೇವೆಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಗೆ ಹೋರಾಟ ಹೊಸದಲ್ಲ. ತಾವು ದೇಶಕ್ಕಾಗಿ ರಕ್ತ ಚೆಲ್ಲಿದ್ದೇವೆ. ಮೂಲಭೂತ ಸಿದ್ಧಾಂತಗಳ ರಕ್ಷಣೆಗಾಗಿ ರಕ್ತ ಹರಿಸಿ, ಪ್ರಾಣತೆತ್ತವರು ತಾವು. ತಾವದರಿಂದ ಹಿಂದೆಗೆಯುವುದಿಲ್ಲವೆಂದು ಸೋನಿಯಾ ಕಿಡಿಕಾರಿದರು.
ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡಗಳ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸಿದ ಅವರು, ಮೋದಿ ಸರಕಾರವು ಹಣದ ಬಲದಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸರಕಾರಗಳನ್ನು ಕೆಳಗಿಳಿಸುತ್ತಿದೆಯೆಂದು ಆರೋಪಿಸಿದರು.
ಅವರ ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ಇಂದು ಉತ್ತರಾಖಂಡದಲ್ಲಿ ಕಾಡುಗಳು ಉರಿಯುತ್ತಿವೆ. ಆದರೆ, ಬೆಂಕಿ ನಂದಿಸಲು ಅಲ್ಲಿ ಸರಕಾರವೇ ಇಲ್ಲವೆಂದು ಸೋನಿಯಾ ದೂರಿದರು.





