ಎತ್ತರದ ಪ್ರದೇಶಗಳಿಗೆ ನೀರು ಪೂರೈಸಲು ಮನಪಾ ನೋಂದಾಯಿತ ಗುತ್ತಿಗೆದಾರರ ಸಂಘದಿಂದ 38 ವಾಹನಗಳ ಕೊಡುಗೆ
ಮಂಗಳೂರು, ಮೇ 7:ಮಂಗಳೂರು ಮಹಾನಗರದಲ್ಲಿ ನೀರು ಬಾರದೆ ಇರುವ ಪ್ರದೇಶಗಳಿಗೆ ನೀರನ್ನು ತಲುಪಿಸುವ ನಿಟ್ಟಿನಲ್ಲಿ ಮನಪಾ ನೋಂದಾಯಿತ ಗುತ್ತಿಗೆದಾರರ ಸಂಘದಿಂದ ನೀಡಲಾದ 38 ನೀರಿನ ವಾಹನಗಳಿಗೆ ಇಂದು ನಗರದ ಕರಾವಳಿ ಮೈದಾನದಲ್ಲಿ ಮನಪಾ ಮೇಯರ್ ಹರಿನಾಥ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಲ್ಲಿ ಈವರೆಗೆ ಈ ರೀತಿಯ ನೀರಿನ ಸಮಸ್ಯೆ ಬಂದಿರಲಿಲ್ಲ. ನೀರಿನ ಸಮಸ್ಯೆಯ ಸಂದರ್ಭದಲ್ಲಿ ಮನಪಾ ಗುತ್ತಿಗೆದಾರರು ಉಚಿತವಾಗಿ 38 ಸಣ್ಣ ಮತ್ತು ದೊಡ್ಡ ವಾಹನಗಳನ್ನು ನೀಡಿ ಜನರ ಸೇವೆಗೆ ನಿಂತಿರುವುದು ಶ್ಲಾಘನೀಯ. ಈಗಾಗಲೆ ಹಾಸನ ಕೆಎಂಎಫ್ ನಿಂದ 18 ಟ್ಯಾಂಕರ್ಗಳು ಕಾರ್ಯನಿರ್ವಹಿಸುತ್ತಿದ್ದು ಇದೀಗ ಸೇರ್ಪಡೆಯಾಗಿರುವ 38 ನೀರು ಸಾಗಾಟದ ವಾಹನಗಳು ಸೇರಿದಂತೆ 56 ವಾಹನಗಳು ನಗರದಲ್ಲಿ ನೀರು ಸರಬರಾಜು ಮಾಡಲು ಕಾರ್ಯಾರಂಭಿಸಿದಂತಾಗಿದೆ. ಮನಪಾ ಸದಸ್ಯರುಗಳು ಕೇವಲ ತಮ್ಮ ವಾರ್ಡ್ಗೆ ಮಾತ್ರ ನೀರು ಸಿಗಬೇಕೆಂಬ ಇಚ್ಛೆಯನ್ನು ಬಿಟ್ಟು ಪಕ್ಕದಲ್ಲಿರುವ ವಾರ್ಡ್ಗಳಿಗೂ ನೀರು ಸಿಗಲು ಬೇಕಾಗುವ ರೀತಿಯಲ್ಲಿ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮನಪಾ ಕಮಿಷನರ್ ಡಾ.ಎಚ್.ಗೋಪಾಲಕೃಷ್ಣ , ವಾಹನಗಳಲ್ಲಿ ನೀರು ಪೂರೈಕೆ ಮಾಡಲು ಮನಪಾದಿಂದ ಈಗಾಗಲೆ ಸಿಂಟೆಕ್ಸನ್ನು ಖರೀದಿಸಲಾಗಿದ್ದು ಎತ್ತರದ ಪ್ರದೇಶಗಳಲ್ಲಿ ಸರಿಯಾಗಿ ನೀರು ಸರಬರಾಜು ಆಗದೆ ಇರುವುದರಿಂದ ಈ ಪ್ರದೇಶಗಳಲ್ಲಿ ಈ ವಾಹನ ಬಳಕೆಯಾಗಲಿದೆ. ಈಗಾಗಲೆ ನೀರಿನ ವಾಹನಗಳಲ್ಲಿ ನೀರು ತುಂಬಿಸಲು 174 ಬೋರ್ವೆಲ್, 90 ತೆರೆದ ಬಾವಿ ಗುರುತಿಸಲಾಗಿದ್ದು ಸುಮಾರು 20 ಬೋರ್ ವೆಲ್ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಮಳೆ ಬರುವವರೆಗೆ ಈ ನೀರಿನ ಮೂಲಗಳಿಂದ ನೀರನ್ನು ಸರಿಯಾದ ರೀತಿಯಲ್ಲಿ ಪೂರೈಕೆ ಮಾಡುವಂತೆ ಇಂಜಿನಿಯರ್ಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಪಾ ಸಚೇತಕ ಶಶಿಧರ್ ಹೆಗ್ಡೆ, ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಮನಪಾ ಸದಸ್ಯರಾದ ಲ್ಯಾನ್ಸಿಲಾಟ್ ಪಿಂಟೋ, ಡಿ.ಕೆ.ಅಶೋಕ್ ಕುಮಾರ್, ದಯಾನಂದ, ದೀಪಕ್ ಪೂಜಾರಿ , ಮನಪಾ ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಎತ್ತರದ ಪ್ರದೇಶಗಳಿಗೆ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ಜನರಲ್ಲಿ ತುಂಬೆಯಲ್ಲಿ ನೀರಿಲ್ಲ ಎಂಬ ಚಿಂತೆ ಇದೆ. ನಾನು ಇವತ್ತು ಕೂಡ ತುಂಬೆಗೆ ಭೇಟಿ ನೀಡಿ ಬಂದಿದ್ದು ತುಂಬೆಯಲ್ಲಿ ಮಳೆಗಾಲ ಆರಂಭವಾಗುವವರೆಗೂ ಕುಡಿಯುವ ನೀರು ಸರಬರಾಜು ಮಾಡಲು ಬೇಕಾದಷ್ಟು ನೀರಿದೆ. ಜನರಲ್ಲಿ ಮನೋಸ್ಥೈರ್ಯ ಕುಸಿದಿದ್ದು ಅವರಲ್ಲಿ ನೀರಿನ ವಾಹನದ ಮೂಲಕ ನೀರು ಸರಬರಾಜು ಮಾಡುವ ಮೂಲಕ ಮನೋಸ್ಥೈರ್ಯ ತುಂಬಬೇಕಾಗಿದೆ
ಹರಿನಾಥ್, ಮನಪಾ ಮೇಯರ್