ಬದಲಾವಣೆಗಾಗಿ ಬಿಜೆಪಿಯನ್ನು ಬೆಂಬಲಿಸಿ: ಡಾ.ಮುನೀರ್ ಬಾವ ಕರೆ
ಮಂಜೇಶ್ವರ, ಮೇ 7: ಮುಸ್ಲಿಮ್ ಲೀಗ್ ಪಕ್ಷ ಮುಸ್ಲಿಮ್ ಸಮುದಾಯದ ಅಸಹಾಯಕತೆಯನ್ನು ಬಂಡವಾಳವಾಗಿಸಿ ಅಪಪ್ರಚಾರಗಳ ಮೂಲಕ ನಾಡಿನ ಸೌಹಾರ್ದ ಕೆಡಿಸಿ ಮತ ಬೇಟೆಯಾಡಲು ರೂಪಿಸಿರುವ ತಂತ್ರಗಳು ಈ ಬಾರಿಯ ಚುನಾವಣೆಯಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಕರ್ನಾಟಕ ವಕ್ಫ್ ಬೋರ್ಡ್ನ ಮಾಜಿ ಉಪಾಧ್ಯಕ್ಷ ಡಾ.ಮುನೀರ್ ಬಾವ ಹಾಜಿ ಹೇಳಿದರು.
ಕುಂಬಳೆಯಲ್ಲಿ ನಡೆದ ಬಿಜೆಪಿ ಚುನಾವಣಾ ಸಭೆಯಲ್ಲಿ ಅವರು ಮಾತನಾಡಿದರು. ಮುಸ್ಲಿಮ ವಕ್ಫ್ ಆಸ್ತಿಗಳನ್ನು ಕಬಳಿಸಿದ ಖ್ಯಾತಿ ಕರ್ನಾಟಕದ ಕಾಂಗ್ರೆಸ್ ನೇತಾರರಿಗಿದೆ. ಕೇರಳದಲ್ಲಿಯೂ ಮುಸ್ಲಿಮ್ ಲೀಗ್, ಕಾಂಗ್ರೆಸ್ನೊಂದಿಗೆ ಸೇರಿಕೊಂಡು ಇದೇ ಮಾಡಿರಬಹುದೆಂದು ಡಾ.ಮುನೀರ್ ಸಂಶಯ ವ್ಯಕ್ತಪಡಿಸಿದರು. ಬಡ ಮುಸ್ಲಿಮ್ ವಿಭಾಗ ಈಗಲೂ ಗುಜರಿ ವ್ಯಾಪಾರ, ಇತರ ಸಣ್ಣ ಪುಟ್ಟ ವಾಪಾರದಲ್ಲೇ ಜೀವನ ನಡೆಸಬೇಕಾಗಿದೆ. ವಿದ್ಯಾವಂತರು ದೇಶ ಬಿಟ್ಟು ವಿದೇಶಿಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ನಿರುದ್ಯೋಗ ಕೇರಳವನ್ನಾಳಿದ ಎಡರಂಗ ಮತ್ತು ಐಕ್ಯರಂಗದ ಕೊಡುಗೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಮ್ ಲೀಗ್ನ ಕಪಟತನ ಬಯಲಾಗಿದೆ. ಸರ್ವ ಜನಾಂಗದ ಸಂರಕ್ಷಣೆ ಹಾಗೂ ನೆಮ್ಮದಿಯ ಜೀವನ ಬಿಜೆಪಿಯಿಂದ ಮಾತ್ರ ಸಾಧ್ಯ. ಬದಲಾವಣೆಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಡಾ.ಮುನೀರ್ ಬಾವ ಹಾಜಿ ಕರೆ ನೀಡಿದರು.
ಸಬೆಯಲ್ಲಿ ಬಿಜೆಪಿ ಸಹಿತ ಎನ್ಡಿಎ ಪ್ರಮುಖರು ಉಪಸ್ಥಿತರಿದ್ದರು.