ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ಬದಲಾಗಿ ತೆಂಗಿನ ಎಣ್ಣೆ ಬಳಕೆಗೆ ಆಗ್ರಹ
ತೆಂಗು ಉತ್ಪಾದಕರ ಅಭಿವೃದ್ಧಿ ಒಕ್ಕೂಟ ಉದ್ಘಾಟನೆ
ಮೂಡುಬಿದಿರೆ, ಮೇ 7: ತೆಂಗು ಬೆಳೆಗಾರರು ಸವಲತ್ತುಗಳನ್ನು ಪಡೆಯಲು ಪ್ರಯತ್ನ, ಹೋರಾಟಗಳನ್ನು ಮಾಡಬೇಕು. ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯು ದೇವಸ್ಥಾನಗಳಲ್ಲಿ ಉಪಯೋಗಿಸಲು ತೆಂಗಿನಕಾಯಿಗಳನ್ನು ದಲ್ಲಾಳಿಗಳಿಂದ ಪಡೆಯದೆ, ನೇರವಾಗಿ ತೆಂಗು ಫೆಡರೇಶನ್ ಮುಖಾಂತರವೇ ಪಡೆಯುವಂತಾಗಬೇಕು.ದೇವಸ್ಥಾನಗಳಲ್ಲಿ ಎಳ್ಳೆಣ್ಣೆಗಳ ಬದಲಾಗಿ ತೆಂಗಿನ ಎಣ್ಣೆ ಉಪಯೋಗಿಸಿದರೆ, ಜಿಲ್ಲೆಯ ತೆಂಗು ಬೆಳೆಗಾರರಿಗೆ ಸಹಾಯವಾಗುತ್ತದೆ. ಸರಕಾರ ಈ ಕುರಿತ ಚಿಂತನೆ ನಡೆಸಬೇಕು ಎಂದು ಮೂಡುಬಿದಿರೆ ಹೋಬಳಿ ತೆಂಗು ಉತ್ಪಾದಕರ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಎಚ್.ಧನಕೀರ್ತಿ ಬಲಿಪ ಆಗ್ರಹಿಸಿದ್ದಾರೆ.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ತೆಂಗು ಉತ್ಪಾದಕರ ಅಭಿವೃದ್ಧಿ ಒಕ್ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ವರು ಮಾತನಾಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಒಕ್ಕೂಟವನ್ನು ಉದ್ಘಾಟಿಸಿ, ಕಲ್ಪವೃಕ್ಷ ಎನಿಸಿಕೊಂಡಿರುವ ತೆಂಗು ಜೀವನದ ವೃಕ್ಷ. ಕೃಷಿಯನ್ನು ಮತ್ತಷ್ಟು ಲಾದಾಯಿಕವಾಗುವುದರೊಂದಿಗೆ ಮುಂದಿನ ಪೀಳಿಗೆಯನ್ನು ಕೃಷಿಯತ್ತ ಸೆಳೆಯಬೇಕು ಎಂದರು.
ಪ್ರಗತಿಪರ ತೆಂಗು ಬೆಳೆಗಾರ ಉಳೆಪಾಡಿಗುತ್ತು ರಾಜೇಶ್ ನಾಯಕ್ ಮಾತನಾಡಿ, ಭಾರತದಲ್ಲಿ ವರ್ಷಪೂರ್ತಿ ವಿವಿಧ ರೀತಿಯಲ್ಲಿ ಕೃಷಿ ಮಾಡಲು ಬೇಕಾದ ನೈಸರ್ಗಿಕ ಅವಕಾಶವಿದೆ. ಆದರೆ ಕೃಷಿಕರಲ್ಲಿ ವಿಶ್ವಾಸ ಕಡಿಮೆಯಾಗುತ್ತಿರುವುದು ಮಾತ್ರ ಖೇದಕರ. ಕೃಷಿಯಲ್ಲಿ ಉತ್ಪತ್ತಿಯಿದ್ದರೆ ಯುವಜನರನ್ನು ಆಕರ್ಷಿತರನ್ನಾಗಿಸಬಹುದು. ಕೃಷಿಗೆ ಪೂರಕವಾದ ಕೋರ್ಸ್, ತರಬೇತಿಗಳನ್ನು ಯುವಕರಿಗೆ ನೀಡಬೇಕು. ಮುದ್ರಾ ಯೋಜನೆಗಳಲ್ಲಿ ವಿಶೇಷ ಸಾಲ ಸೌಲಭ್ಯಗಳನ್ನು ಸರ್ಕಾರದ ಕಡೆಯಿಂದ ಮಾಡಬೇಕು. ನಮ್ಮಲ್ಲಿರುವ ಕೌಶಲ್ಯಯುತ ಯುವಕರನ್ನು ಇಲ್ಲಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡಬೇಕು ಎಂದರು.
ಬೆಂಗಳೂರು ತೆಂಗು ಅಭಿವೃದ್ಧಿ ಮಂಡಳಿಯ ಉಪನಿರ್ದೇಶಕ ಹೇಮಚಂದ್ರ, ಮಂಗಳೂರು ತೆಂಗು ಬೆಳೆಗಾರರ ಅಧ್ಯಕ್ಷ ಪುಣಚ ಬೈಲಗುತ್ತು ಶ್ರೀಧರ ಶೆಟ್ಟಿ, ಪ್ರಗತಿಪರ ಕೃಷಿಕ ಮಹಾಬಲ ಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಮಾಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೂಡುಬಿದಿರೆ ಒಕ್ಕೂಟದ ನಿರ್ದೇಶಕರಾದ ಪೌಸ್ತೀನ್, ಪೌಲ್ ಡಿ’ಸೋಜಾ, ಕಾರ್ಯದರ್ಶಿ ನಾಗೇಶ್ ಭಟ್ ಅತಿಥಿಗಳನ್ನು ಗೌರವಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.