ನಿಯಮ ಉಲ್ಲಂಘಿಸಿ ಸ್ವನಿವಾಸಕ್ಕಾಗಿ ರಾತ್ರೋರಾತ್ರಿ ಬೋರ್ವೆಲ್ ಕೊರೆಸಿದ ಅಧಿಕಾರಿ!
ಮಂಗಳೂರು, ಮೇ 7: ಉಳ್ಳಾಲ ಪುರಸಭಾ ಅಧಿಕಾರಿ ರೂಪಾ ಶೆಟ್ಟಿ ನಿಯಮವನ್ನು ಉಲ್ಲಂಘಿಸಿ ತಮ್ಮ ನಿವಾಸಕ್ಕಾಗಿ ರಾತ್ರೋರಾತ್ರಿ ಬೋರ್ವೆಲ್ ಕೊರೆಸಿದ ಘಟನೆ ಇಂದು ರಾತ್ರಿ ನಡೆದಿದೆ.
ನಗರದ ಪ್ರಭಾತ್ ಟಾಕೀಸ್ ಬಳಿಯಲ್ಲಿ ನಿವಾಸ ಹೊಂದಿರುವ ರೂಪಾ ಶೆಟ್ಟಿ, ತಮ್ಮ ನಿವಾಸದಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದ್ದುದರಿಂದ ಇಂದು ರಾತ್ರಿ 9 ಗಂಟೆಯ ಹೊತ್ತಿಗೆ ಪ್ರಭಾತ್ ಟಾಕೀಸ್ನ ಮುಂಭಾಗದ ರಸ್ತೆಯ ಮಧ್ಯ ಭಾಗದಲ್ಲಿ ಬೋರ್ವೆಲ್ನ್ನು ಕೊರೆಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಬೋರ್ವೆಲ್ ಕೊರೆಯಲು ಅನುಮತಿ ಇಲ್ಲದಿರುವುದರಿಂದ ನಿಯಮಗಳನ್ನು ಗಾಳಿ ತೂರಿ ಬೋರ್ವೆಲ್ ಕೊರೆಯಲು ಪ್ರಯತ್ನಿಸಿದ್ದಾರೆ. ಮಾಹಿತಿ ಪಡೆದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ರಾತ್ರಿ 11:30ಕ್ಕೆ ಸ್ಥಳಕ್ಕೆ ಭೇಟಿ ನೀಡಿದಾಗ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಅಲ್ಲಿದ್ದ ಬೋರ್ವೆಲ್ ಕೊರೆಯುವ ಯಂತ್ರ ಮತ್ತು ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಲ್ಲದೆ, ಅಕ್ರಮವಾಗಿ ಬೋರ್ವೆಲ್ ಕೊರೆಸಿದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
Next Story