ಗಲ್ಲು ಶಿಕ್ಷಿತರಲ್ಲಿ ಹೆಚ್ಚಿನವರು ಬಡವರು, ಅಲ್ಪಸಂಖ್ಯಾತರು!
ದಿಲ್ಲಿ ಕಾನೂನು ವಿವಿಯ ಅಧ್ಯಯನ ವರದಿ

ಹೊಸದಿಲ್ಲಿ, ಮೇ 8: ದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರಲ್ಲಿ ಹೆಚ್ಚಿನವರು ಬಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿಭಾಗದವರು ಎಂದು ಅಧ್ಯಯನ ವರದಿ ತಿಳಿಸಿದೆ. ದಿಲ್ಲಿ ನ್ಯಾಶನಲ್ ಲಾ ಯೂನಿವರ್ಸಿಟಿಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ. ಗಲ್ಲುಶಿಕ್ಷೆ ವಿಧಿಸಲ್ಪಟ್ಟ ದಲಿತ,ಆದಿವಾಸಿ ಮೂಲದವರು ಶೇ.24.5(90 ಮಂದಿ) ಧಾರ್ಮಿಕ ಅಲ್ಪಸಂಖ್ಯಾತ ವಿಭಾಗಗಳವರು ಶೇ. 20 ಅಂದರೆ 76 ಮಂದಿ ಎಂದು ವರದಿ ತಿಳಿಸಿದೆ. ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ ಶೇ. 80ರಷ್ಟು ಮಂದಿ ಶಾಲಾಭ್ಯಾಸವನ್ನು ಪೂರ್ತಿ ಮಾಡದವರಾಗಿದ್ದು ನಾಲ್ವರಲ್ಲೊಬ್ಬನಿಗೆ ಅಪರಾಧ ಎಸಗಿದ ಸಂದರ್ಭದಲ್ಲಿ 18-20 ವಯಸ್ಸಿನಲ್ಲಿರುವವರೂ ಅರುವತ್ತು ವಯಸ್ಸು ಹೆಚ್ಚಾದವರೋ ಆಗಿದ್ದಾರೆ ಎಂದು ವರದಿ ತಿಳಿಸಿದೆ.
2000ದಿಂದ 2015ರ ನಡುವೆ ವಿಚಾರಣಾ ಕೋರ್ಟು ವಿಧಿಸಿದ ಗಲ್ಲು ಶಿಕ್ಷೆಯಲ್ಲಿ ಮೇಲರ್ಜಿ ಹಾಕಿದಾಗ ಕೇವಲ ಶೇ.5ರಷ್ಟು ಮಂದಿಯ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ದೃಢೀಕರಿಸಿದೆ. ಒಟ್ಟು 1486 ಪ್ರಕರಣಗಳಲ್ಲಿ 73 ಮಂದಿಗೆ ಮಾತ್ರ ಗಲ್ಲು ಶಿಕ್ಷೆ ದೃಢೀಕರಣವಾಗಿದೆ. ಅಧ್ಯಯನ ತಂಡ ಭೇಟಿಯಾದ 373 ಮಂದಿಯಲ್ಲಿ 127 ಮಂದಿಯ ವಿಚಾರಣೆ ಐದು ವರ್ಷದವರೆಗೆ ಆಗಿದ್ದರೆ, 54 ಮಂದಿಯ ವಿಚಾರಣಾವಧಿ ಹತ್ತುವರ್ಷಕ್ಕೂ ಹೆಚ್ಚು ಆಗಿತ್ತು ಅವರು ತಿಳಿಸಿದ್ದಾರೆ.
2013 ಜುಲೈಯಿಂದ 2015 ಜನವರಿವರೆಗೆ ನಡೆಸಿದ ಅಧ್ಯಯನ ಆಧಾರದಲ್ಲಿ ವರದಿಯನ್ನು ಎರಡು ಭಾಗಗಳಾಗಿಸಿ ಶುಕ್ರವಾರ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗಿದೆ. ದೇಶದ ಕಾನೂನು ವ್ಯವಸ್ಥೆಯಲ್ಲಿ ಕೆಲವು ಸುಧಾರಣೆ ಅಗತ್ಯವೆಂದು ಸಮಾರಂಭದಲ್ಲಿ ಮಾತಾಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮದನ್ ಬಿ ಲೋಕೂರ್ ಹೇಳಿದ್ದಾರೆಂದು ವರದಿಯಾಗಿದೆ.







