17 ಮಂದಿ ಸಂಸದರನ್ನು ಕೊಟ್ಟ ರಾಜ್ಯಕ್ಕೆ ಪ್ರಧಾನಿ ಭೇಟಿಯ 'ಬರ'ವೇಕೆ ?

ಬೆಂಗಳೂರು.ಮೇ.8: ಬರ ಪರಿಸ್ಥಿತಿ ಮುಗಿಯುವ ಹಂತಕ್ಕೆ ಬಂದಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ತಮ್ಮಲ್ಲಿಗೆ ಕರೆಸಿಕೊಂಡು ಅಭಾವ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿರುವುದು ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ.
ಕಳೆದ 1972 ರ ನಂತರ ಇದೇ ಮೊದಲ ಬಾರಿಗೆ ಅತ್ಯಂತ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಅವರನ್ನೇ ತಮ್ಮಲ್ಲಿಗೆ ಕರೆಸಿಕೊಂಡು ಚರ್ಚೆ ನಡೆಸುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ಎದ್ದಿದೆ.
ದೆಹಲಿಗೆ ಕರೆಸಿಕೊಂಡು ನೆರೆ ಪರಿಸ್ಥಿತಿ ಎದುರಿಸಲು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಅವರು ಇಡೀ ದೇಶದ ಪ್ರಧಾನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ 17 ಮಂದಿ ಸಂಸದರನ್ನು ಗೆಲ್ಲಿಸಿಕೊಟ್ಟ ರಾಜ್ಯ ಕರ್ನಾಟಕ. ಇಂತಹ ಸಹೃದಯ ಜನ ಸಂಕಷ್ಟಕ್ಕೆ ಸಿಲುಕಿರುವಾಗ ಇಲ್ಲಿನ ಜನರ ಸಮಸ್ಯೆ ಆಲಿಸುವಲ್ಲಿ ಮೋದಿ ಮಾನವೀಯ ಕಳಕಳಿ ತೋರಿಲ್ಲ.
ಇಡೀ ದೇಶದಲ್ಲಿನ ಬರ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡಿದೆ. ಆ ನಂತರವೇ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ನೆರವು ಪ್ರಕಟಿಸಲಾಗಿದೆ.
ಇಷ್ಟಕ್ಕೂ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ನಿರ್ಲಕ್ಷಿಸಿದ ಪರಿಣಾಮ ಈ ಬಾರಿ ಕರ್ನಾಟಕ ಸೇರಿ ಬಹುತೇಕ ಕಡೆಗಳಲ್ಲಿ ಜನ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಅಂಶಗಳತ್ತ ಕೇಂದ್ರ ಸಚಿವರು, ಕೇಂದ್ರದ ಅಧಿಕಾರಿಗಳು ಗಮನ ಹರಿಸದೇ ಇರುವುದು ವಿಷಾದನೀಯ.
ಬರ ಪರಿಹಾರಕ್ಕೆ ಕೇಂದ್ರ ಹೆಚ್ಚಿನ ಪರಿಹಾರ ನೀಡಿರಬಹುದು. ಒಮ್ಮೆ 1540 ಕೋಟಿ ರೂ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ 723 ಕೋಟಿ ರೂ, ಬಿಡುಗಡೆ ಮಾಡುವುದಾಗಿ ಪ್ರಕಟಿಸಲಾಗಿದೆ.ಅತ್ಯಂತ ಭೀಕರ ಬರ ಇರುವಾಗ ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಲೇಬೇಕು. ಇದರಲ್ಲಿ ಹೆಚ್ಚುಗಾರಿಕೆ ಇಲ್ಲ. ಆದರೆ ಮೋದಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರೆ ಅವರಿಗೆ ಹೆಚ್ಚಿನ ಗೌರವ ದೊರೆಯುತ್ತಿತ್ತು. ಇಡೀ ಜಗತ್ತಿನಲ್ಲಿಯೆ ನಮ್ಮದ್ದು ಅತಿ ದೊಡ್ಡ ಪಕ್ಷ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಅವರೂ ಸಹ ರಾಜ್ಯದತ್ತ ಸುಳಿದಿಲ್ಲ.
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಚುನಾವಣಾ ಉದ್ದೇಶಕ್ಕೆ, ರಾಜಕೀಯ ಭಾಷಣ ಮಾಡಲು ರಾಜ್ಯಕ್ಕೆ ಬರಬೇಕೆ. ಸಂಕಷ್ಟ ಇರುವಾಗ ರಾಜ್ಯಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬದಿದ್ದರೆ ಹೇಗೆ ಎನ್ನುವ ಆಕ್ಷೇಪ ಕೇಳಿ ಬಂದಿದೆ.
ಈ ಹಿಂದೆ 2009 ರಲ್ಲಿ ರಾಜ್ಯ ಪ್ರವಾಹ ಪರಿಸ್ಥಿತಿಗೆ ಸಿಲುಕಿದಾಗ ಆಗಿನ ಪ್ರಧಾನಿ ಡಾ: ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ವಿಶೇಷ ಪ್ಯಾಕೆಜ್ ಪ್ರಕಟಿಸಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತಾದರೂ, ರಾಜ್ಯದ ವಿಚಾರದಲ್ಲಿ ಹಿಂದಿನ ಸರ್ಕಾರ ತಾರತಮ್ಯ ಮಾಡಿರಲಿಲ್ಲ. ಇಂತಹ ಉದಾಹರಣೆ ಇರುವಾಗ ನರೇಂದ್ರ ಮೋದಿ ಅವರಾಗಲೀ, ಅಮಿತ್ ಷಾ ಅವರಾಗಲೀ ರಾಜ್ಯಕ್ಕೆ ಭೇಟಿ ನೀಡಬಹುದಿತ್ತು. ಆದರೆ ಮುಖ್ಯಮಂತ್ರಿ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಚರ್ಚೆ ನಡೆಸುವುದು ಯಾವ ರೀತಿಯಲ್ಲಿ ಸೂಕ್ತ.
ಕರ್ನಾಟಕ ಪರಿಸ್ಥಿತಿ ಇರಲಿ. ಮಹಾರಾಷ್ಟ್ರದಲ್ಲೂ ತೀವ್ರ ಬರ ಪರಿಸ್ಥಿತಿ ಇದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆಗಳಲ್ಲೂ ಬರ ಇದೆ. ಪ್ರಧಾನಿಯಾದಿಯಾಗಿ ಬಿಜೆಪಿಯ ಬೇರೆ ಯಾವುದೇ ಪ್ರಮುಖ ನಾಯಕರು ಎಲ್ಲಿಯೂ ಪ್ರವಾಸ ಕೈಗೊಂಡಿಲ್ಲ. ಚುನಾವಣೆ ಸಮಯದಲ್ಲಿ ಬಿಸಿಲು ಮಳೆಯನ್ನು ಲೆಕ್ಕಿಸದೇ ಪ್ರಚಾರ ನಡೆಸುವ ಇವರಿಗೆ ಬರಗಾಲದ ಬಿಸಿಲು, ತಾಪಮಾನ ಯಾಕೆ ಅಪಥ್ಯವಾಗಿದೆ ಎನ್ನುವ ಆಕ್ಷೇಪಗಳು ಕೇಳಿ ಬರುತ್ತಿವೆ.
ಪ್ರಧಾನಿ ಅವರು ರಾಜ್ಯ ಪ್ರವಾಸ ಕೈಗೊಳ್ಳಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮೊದಲು ಪ್ರಧಾನಿ ಅವರು ನೀಡಿರುವ ಹಣವನ್ನು ಮೊದಲು ಖರ್ಚು ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಪುಕ್ಕಟೆ ಸಲಹೆ ನೀಡಿ ಹೆಚ್ಚಿನ ಪ್ರತಿಕ್ರಿಯೆಗೆ ಹೋಗದೇ ನುಣುಚಿಕೊಂಡರು.
ಇನ್ನು ರಾಜ್ಯದ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಕಳೆದ ಹದಿನೈದು - ಹದಿನಾರು ವರ್ಷಗಳಿಂದ ಒಂದಲ್ಲಾ ಒಂದು ವರ್ಷ ಅಭಾವ ಪರಿಸ್ಥಿತಿ ಎದುರಾಗುತ್ತಿದೆ. ಆದರೆ 2015–16ನೇ ಸಾಲಿನಲ್ಲಿ ಅತಿ ಹೆಚ್ಚು ಬರ ಪರಿಸ್ಥಿತಿ ಇರುವುದನ್ನು ನೋಡಿದ್ದೇವೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಅನಿಯಮಿತ ಹಾಗೂ ತೀವ್ರ ಮಳೆ ಕೊರತೆ ಎದುರಾಗಿದೆ. ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪರಿಸ್ಥಿತಿ ತೀವ್ರವಾಗಿದ್ದರೆ ಬಯಲು ಸೀಮೆಯ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಉಸಿರಾಡುವ ಸ್ಥಿತಿ ಇದೆ. ಚೆನ್ನೈನಲ್ಲಿ ಸಂಭವಿಸಿದ ಜಲಪ್ರಳಯದ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಸ್ವಲ್ಪ ಮಟ್ಟಿಗೆ ಚಿತ್ರದುರ್ಗ ಜಿಲ್ಲೆಗಳಲ್ಲಿ ವಾಯಭಾರ ಒತ್ತಡ ಉಂಟಾದ ಪರಿಣಾಮ ಕೆಲವೆಡೆ ಕೆರೆಗಳು ತುಂಬಿ, ಆಂತರ್ಜಲ ಸ್ವಲ್ಪ ಮಟ್ಟಿಗೆ ವೃದ್ಧಿಯಾಗಿದೆ.
ಇಷ್ಟಾದರೂ 27 ಜಿಲ್ಲೆಗಳ 137 ತಾಲ್ಲೂಕುಗಳನ್ನು ಅಭಾವ ಸಂತ್ರಸ್ಥ ಪ್ರದೇಶಗಳೆಂದು ಘೋಷಿಸಲಾಗಿದೆ. ಬರಪರಿಸ್ಥಿತಿಯಿಂದಾಗಿ ಮುಂಗಾರು ಹಂಗಾಮಿನಲ್ಲಿ 28.88 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಶೇ.33ಕ್ಕಿಂತ ಹೆಚ್ಚು ಕೃಷಿ ಬೆಳೆ ಹಾನಿಗೀಡಾಗಿದ್ದು, 14,471ಕೋಟಿ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. 1 ಒಂದು ಲಕ್ಷದ 8 ಸಾವಿರದ ಹೆಕ್ಟೇರ್ ಪ್ರದೇಶದಲ್ಲಿ ಶೇ.33ಕ್ಕಿಂತ ಹೆಚ್ಚು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, 1 ಸಾವಿರದ 164 ರೂಪಾಯಿ ಮೌಲ್ಯದ ತೋಟಗಾರಿಕೆ ಬೆಳೆ ನಷ್ಟವಾಗಿದೆ.
ಹಿಂಗಾರು ಹಂಗಾಮಿನಲ್ಲಿ 34.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತೇವಾಂಶ ಕೊರತೆ, ಒಣ ಹವೆಯಿಂದಾಗಿ 22.33 ಲಕ್ಷ ಹೆಕ್ಟೇರ್ ಅಂದರೆ ಒಟ್ಟಾರೆ ಶೇ.64.2 ಪ್ರದೇಶಗಳಲ್ಲಿ ಶೇ.33ಕ್ಕಿಂತ ಹೆಚ್ಚಾಗಿ ಕೃಷಿ ಬೆಳೆಗೆ ಹಾನಿಯಾಗಿದೆ. ಬರಪರಿಸ್ಥಿತಿಯಿಂದಾಗಿ ಜನ-ಜಾನುವಾರುಗಳಿಗೆ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ, ವಿದ್ಯುದ್ಧೀಕರಣ, ಮೇವು ಪೂರೈಕೆಗಾಗಿ526 ಕೋಟಿ ರೂಪಾಯಿ ಜತೆಗೆ ಇತ್ತೀಚೆಗೆ ಹೊಸದಾಗಿ ಕುಡಿಯುವ ನೀರಿಗಾಗಿಯೇ ಕಳೆದ ತಿಂಗಳು 50 ಕೋಟಿ ರೂಪಾಯಿ ಹಾಗೂ ಈ ತಿಂಗಳಲ್ಲಿ 100 ಕೋಟಿ ರೂಪಾಯಿ, ಜಾನುವಾರುಗಳ ಮೇವು, ಗೋ ಶಾಲೆಗಳನ್ನು ತೆರೆಯಲು 15 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 350 ಕೋಟಿ ರೂಪಾಯಿ ಹಣ ಲಭ್ಯವಿದೆ ಎಂದು ಸರ್ಕಾರ ತಿಳಿಸಿದೆ.
ಈ ಬಾರಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಕುಡಿಯುವ ನೀರಿಗೆ ಹಿಂದೆಂದಿಗಿಂತಲೂ ಸಮಸ್ಯೆ ಇದೆ. ಪ್ರಮುಖ 13 ಜಲಾಶಯಗಳಲ್ಲಿ ನೀರೇ ಇಲ್ಲದ ಪರಿಸ್ಥಿತಿ ಇದೆ. ಲಭ್ಯವಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಆಣೆಕಟ್ಟೆಗಳಿಂದ ಹೊರಗಡೆ ಹರಿಸಲು ಸಾಧ್ಯವಿಲ್ಲ.
ಇಷ್ಟೆಲ್ಲಾ ಸಮಸ್ಯೆಗಳಿರುವಾಗ ರಾಜ್ಯದ ಸಂಸದರು, ಬಿಜೆಪಿ ಮುಖಂಡರು ಪ್ರಧಾನಿ ಬಳಿಗೆ ತೆರಳಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಮನವರಿಕೆ ಮಾಡಿಕೊಡುವ, ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವಂತೆ ಸಲಹೆ ನೀಡುವ ಗೋಜಿಗೆ ಹೋಗಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಪ್ರಧಾನಿ ಅವರ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಜನರ ನಾಡಿ ಮಿಡಿತವನ್ನು ಮೋದಿ ಅವರ ಗಮನಕ್ಕೆ ತರಲು ರಾಜ್ಯ ನಾಯಕರಿಂದ ಸಾಧ್ಯವಾಗಿಲ್ಲ. ಇದು ಕೂಡ ಬಿಜೆಪಿ ವೈಫಲ್ಯವಾಗಿದೆ.







