ಮೂಡುಬಿದಿರೆ: ಕೆರೆಗಳ ಪುನಶ್ಚೇತನಕ್ಕೆ ಆಗ್ರಹ
ಮೂಡುಬಿದಿರೆ, ಮೇ 8: ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಪುಚ್ಚಮೊಗರು ಡ್ಯಾಮ್ ಬರಿದಾಗಿದೆ. ಇದೀಗ ಪುರಸಭೆಯು 10 ಲಕ್ಷ ರೂ. ಖರ್ಚು ಮಾಡಿ ಪೈಪುಗಳನ್ನು ಅಳವಡಿಸಿ ದೇವರಗುಂಡಿಯಿಂದ ನೀರು ತೆಗೆದು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ನೀರಿನ ಸಮಸ್ಯೆ ಎದುರಾಗಲಾಗಲಿದೆ ಎಂದು ಸದಸ್ಯ ಪಿ.ಕೆ.ಥಾಮಸ್ ಹೇಳಿದರು.
ಪುರಸಭಾಧ್ಯಕ್ಷೆ ರೂಪಾ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಅವರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಬಾಹುಬಲಿ ಪ್ರಸಾದ್, ಕಳೆದ ಮೂರು ವರ್ಷಗಳಿಂದ ನಾನು ಈ ಬಗ್ಗೆ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಆದರೆ, ಆಡಳಿತ ವ್ಯವಸ್ಥೆ ಅದಕ್ಕೆ ಸ್ಪಂದಿಸಿಲ್ಲ. ಇನ್ನಾದರು ಪುರಸಭಾ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಮಾಡಲು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮುಖ್ಯಾಧಿಕಾರಿ ಶೀನ ನಾಯ್ಕಾ, ಸದಸ್ಯರಾದ ರಮಣಿ, ಸುರೇಶ್ ಕೋಟ್ಯಾನ್, ನಾಗರಾಜ ಪೂಜಾರಿ, ರತ್ನಾಕರ ದೇವಾಡಿಗ, ಪ್ರೇಮಾ ಸಾಲ್ಯಾನ್, ಲಕ್ಷ್ಮಣ್ ಪೂಜಾರಿ, ನಾಮ ನಿರ್ದೇಶಿತ ಸದಸ್ಯರಾದ ಆಲ್ವಿನ್ ಮಿನೇಜಸ್, ಇಕ್ಬಾಲ್ ಕರೀಂ, ಉಮೇಶ್ ದೇವಾಡಿಗ, ಕಂದಾಯ ಅಧಿಕಾರಿ ಧನಂಜಯ, ಇಂಜಿನಿಯರ್ ದಿನೇಶ್, ಯಶಸ್ವಿನಿ ಚರ್ಚೆಯಲ್ಲಿ ಪಾಲ್ಗೊಂಡರು.