ಸಾಮಾಜಿಕ ಅಸಮತೋಲನದ ವಿರುದ್ಧ ಚಿಂತನೆ ನಡೆಸಿದವರು ಬಸವಣ್ಣನವರು: ಪ್ರೊ. ಸುರೇಶ್
ಕಾರ್ಕಳ, ಮೇ 9: 12ನೆ ಶತಮಾನದಲ್ಲಿ ಸಾಮಾಜಿಕ ಅಸಮತೋಲನದ ವಿರುದ್ಧ ತನ್ನದೇಯಾದ ಚಿಂತನೆ ನಡೆಸಿದವರು ಬಸವಣ್ಣ. ಅವರ ಅಂದಿನ ವಿಚಾರಧಾರೆಗಳು ಇಂದು ಕೂಡಾ ಪ್ರಸ್ತುತ ಎಂದು ಮುಲ್ಕಿ ವಿಜಯ ಕಾಲೇಜಿನ ಪ್ರೊಫೆಸರ್ ಸುರೇಶ್ ಮೆರಿಣಾಪುರ ಹೇಳಿದ್ದಾರೆ.
ತಾಲೂಕಾಡಳಿತ ಕಾರ್ಕಳ ಮತ್ತು ಪುರಸಭೆಯ ಸಂಯುಕ್ತಾಶ್ರಯದಲ್ಲಿ ನಡೆದ ಬಸವೇಶ್ವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಬಾಷಣ ಮಾಡಿದರು.
ಬಸವಣ್ಣನವರು ಕೇವಲ ಸಂತರಲ್ಲ. ಅವರೊಬ್ಬ ಯುಗಪುರುಷ. ಲಿಂಗ ತಾರತಮ್ಯ, ವರ್ಣ ತಾರತಮ್ಯ, ಜಾತಿ ತಾರತಮ್ಯದ ವಿರುದ್ದ ಹೋರಾಡಿದ ಅವರು, ಸಾಮಾನ್ಯ ವರ್ಗದ ಜನತೆಯೂ ಸಾರ್ವಜನಿಕವಾಗಿ ದೇವರಾಧನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟವರು. ಸಣ್ಣಗುಣಗಳನ್ನು ಬಿಟ್ಟು ದೊಡ್ಡ ಗುಣಗಳನ್ನು ಹೊಂದಿರುವವರು ದೇವರಾಗುತ್ತಾರೆ ಎಂದ ಅವರು, ಮಹಾತ್ಮಗಾಂಧಿ, ಅಂಬೇಡ್ಕರ್ರವರ ಸಾಲಿನಲ್ಲಿ ಬಸವಣ್ಣನ ನಿಲ್ಲುತ್ತಾರೆ ಎಂದು ಪ್ರತಿಪಾದಿಸಿದರು.
ಸರಕಾರಗಳು ಹಮ್ಮಿಕೊಳ್ಳುತ್ತಿರುವ ಅಕ್ಷರ ದಾಸೋಹ, ಅಂತರ್ಜಾತಿ ವಿವಾಹ ಮುಂತಾದವುಗಳ ಬಗ್ಗೆ 12ನೆ ಶತಮಾನದಲ್ಲೇ ಬಸವಣ್ಣನು ತಿಳಿಯಪಡಿಸಿದ್ದರು ಎನ್ನುವುದನ್ನು ಈ ಸಂದರ್ಭ ಉಲ್ಲೇಖಿಸಿದರು.
ಪುರಸಬೆ ಉಪಾಧ್ಯಕ್ಷ ಗಿರಿಧರ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ಒಂದು ಕಾಲಕ್ಕೆ ಸೀಮಿತವಾಗದೆ, ಸರ್ವ ಕಾಲಕ್ಕೂ ಅನ್ವಯವಾಗುತ್ತಾರೆ ಎಂದರು.
ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಅನಿತಾ ಅಂಚನ್, ಕ್ಷೇತ್ರ ತಹಶೀಲ್ದಾರ್ ರಾಘವೇಂದ್ರ ಎಸ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಲಾಯಿತು.
ಬಾಬೋಜಿ ರಾವ್ ಕಾರ್ಯಕ್ರಮ ನಿರೂಪಿಸಿದರು. ಉಪತಹಶೀಲ್ದಾರ್ ಮಾಧವ ವಂದಿಸಿದರು.