ಗೋದಾಮಿನಲ್ಲಿ ಬೆಂಕಿ: ಭಾರೀ ಪ್ರಮಾಣದ ರದ್ದಿ ಪೇಪರ್ ಭಸ್ಮ

ಪುತ್ತೂರು, ಮೇ 9: ಗೋದಾಮಿನಲ್ಲಿ ಬೆಂಕಿ ಆಕಸ್ಮಿಕದಿಂದ ಭಾರೀ ಪ್ರಮಾಣದ ರದ್ದಿ ಪೇಪರ್ ಸುಟ್ಟು ಭಸ್ಮವಾದ ಘಟನೆ ಪುತ್ತೂರು ನಗರದ ಹೊರ ವಲಯದ ಚಿಕ್ಕಮುಡ್ನೂರು ಗ್ರಾಮದ ಉರಮಾಲು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಊರಮಾಲು ನಿವಾಸಿ ಇಬ್ರಾಹೀಂ ಎಂಬವರಿಗೆ ಸೇರಿದ ಹಳೆ ಗೋದಾಮು ಇದಾಗಿದ್ದು, ಇದರಲ್ಲಿ ರದ್ದಿ ಪೇಪರ್ಗಳನ್ನು ತುಂಬಿಸಿಡಲಾಗಿತ್ತು. ಸೋಮವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಅದು ಇಡೀ ಕಟ್ಟಡವನ್ನು ವ್ಯಾಪಿಸಿತು. ಬಿರು ಬಿಸಿಲು ಮತ್ತು ಪೇಪರ್ ರಾಶಿ ಬೆಂಕಿ ವ್ಯಾಪಿಸಲು ನೆರವಾಯಿತು. ಸುದ್ದಿ ತಿಳಿದ ತಕ್ಷಣ ನಗರದ ಅಗ್ನಿಶಾಮಕ ದಳ ಕೇಂದ್ರದಿಂದ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿದವು.
ಎರಡು ವಾಹನಗಳಲ್ಲಿ ತಂದಿದ್ದ ನೀರು ಬೆಂಕಿ ನಂದಿಸಲು ಸಾಕಾಗದೆ ಇದ್ದಾಗ ಮತ್ತೊಂದು ಸಲ ನೀರು ತರಬೇಕಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆಸಿದ ಸತತ ಕಾರ್ಯಾಚರಣೆಯ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಗೋದಾಮಿನಲ್ಲಿದ್ದ ಪೇಪರ್ ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿವೆ.





