ಮೇ 12ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ
ಮಂಗಳೂರು, ಮೇ 9: ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡ ಸಂಕೀರ್ಣದ ಶಿಲಾನ್ಯಾಸ ಸಮಾರಂಭ ಮೇ 12ರಂದು ಸಂಜೆ 4 ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ವಠಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುಮಾರು 230 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ 4 ಅಂತಸ್ತಿನ ಕಟ್ಟಡ ಸಂಕೀರ್ಣವು 4ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.ಶಿಲಾನ್ಯಾಸ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಆರ್ಎನ್ ಶೆಟ್ಟಿ ಸಮೂಹ ಸಂಸ್ಥೆಗಳ ಸಿಎಮ್ಡಿ ಡಾ.ಆರ್.ಎನ್.ಶೆಟ್ಟಿ, ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎನ್.ವಿನಯ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಂಕುತಳಾ ಶೆಟ್ಟಿ, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ನಾಗರಾಜ ಶೆಟ್ಟಿ, ಕರ್ನಾಟಕ ಸರಕಾರದ ಡಿಜಿ ಮತ್ತು ಐಜಿಪಿ ಓಂಪ್ರಕಾಶ್, ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ .ಶಾಂತಾರಾಮ ಶೆಟ್ಟಿ, ಮುಂಬಯಿಯ ಉದ್ಯಮಿ ಸುಧೀರ್ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಮೋಹನ ಆಳ್ವ, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹರ್ಧೀಶ್ ಕುಮಾರ್, ಪದ್ಮನಾಭ ಪಯ್ಯಡೆ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಬಯಿ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶೇಖರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ.ನರೇಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್ ಶೆಟ್ಟಿ, ಮಾಜಿ ಅಧ್ಯಕ್ಷ ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಲತಾ ಜಯರಾಮಶೆಟ್ಟಿ, ಮಾಜಿ ಅಧ್ಯಕ್ಷೆ ಆಶಾ ಮನೋಹರ ಹೆಗ್ಡೆ, ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಮಂಜುಳಾ ಶೆಟ್ಟಿ, ಬಿಗ್ರೇಡಿಯರ್ ಐ.ಎನ್.ರೈ, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಬಂಟರ ಸಂಘ ಜಿಲ್ಲೆಯಲ್ಲಿ ಆರಂಭಗೊಂಡ ಪ್ರಥಮ ನೊಂದಾಯಿತ ಸಂಘವಾಗಿದ್ದು, ಬಂಟರ ಸಂಘಕ್ಕೆ 100 ವರ್ಷ ತುಂಬಿದ ಸಲುವಾಗಿ ಶತಮಾನೋತ್ಸವದ ಕಟ್ಟಡ ಸಂಕೀರ್ಣವನ್ನು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಕಟ್ಟಡ ಸಂಕೀರ್ಣದಲ್ಲಿ 6 ಲಕ್ಷ ಚದರ ಅಡಿಯ ವಾಣಿಜ್ಯ ಸಂಕೀರ್ಣ, 2,000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, 1,250 ವಾಹನ ನಿಲುಗಡೆ ಪ್ರದೇಶ, ಸಭೆ ಸಮಾರಂಭ ನಡೆಸಲು ಸಭಾ ಭವನ, ಮೂರು ಪ್ರತ್ಯೇಕ ಲಾಬಿಗಳು, 4ನೆ ಮಹಡಿಯಲ್ಲಿ 50 ಸಾವಿರ ಚದರ ಅಡಿಯಷ್ಟು ಓಪನ್ ಟೆರೇಸ್, ವಿಶ್ವ ದರ್ಜೆಯ ಜಿಮ್ಗಳು ಮತ್ತು ಕ್ಲಬ್ಗಳು ನಿರ್ಮಾಣಗೊಳ್ಳಲಿವೆ.
ಶಿಲಾನ್ಯಾಸ ಸಮಾರಂಭದ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಸಿ.ವಿ.ನಾಯಕ್ ಸಭಾಭವನ, ರಾಮಕೃಷ್ಣ ಕಾಲೇಜಿನ ಹಿಂಭಾಗದ ಕದ್ರಿ ಕಂಬಳ ಪಿಂಟೋಸ್ ಲೇನ್ ಮಧ್ಯದಲ್ಲಿ ಇರುವ ಹೆಗ್ಡೆ ಕಂಪೌಂಡ್ ಮತ್ತು ಶ್ರೀ ರಾಮಕೃಷ್ಣ ಕಾಲೇಜಿನ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ್ ಶೆಟ್ಟಿ, ಕೋಶಾಧಿಕಾರಿ ಮನಮೋಹನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.