ದಲಿತ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು, ಮೇ 9: ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅನುಮಾನಾಸ್ಪದ ಸಾವು ಪ್ರಕರಣದ ಬೆನ್ನಲ್ಲೇ ರಾಜ್ಯದ ರಾಜಧಾನಿ ಬೆಂಗಳೂರಿನ ಸರಕಾರಿ ಕಲಾ ಕಾಲೇಜು ಹಾಸ್ಟೆಲ್ನಲ್ಲಿದ್ದ ದಲಿತ ವಿದ್ಯಾರ್ಥಿಯ ಮೇಲೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಹೇಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕೆ.ವಿ.ಹಟ್ಟಿಯ ಬಿಎ ದ್ವಿತೀಯ ವರ್ಷದ ದಲಿತ ವಿದ್ಯಾರ್ಥಿ ಜೆ.ಅಣ್ಣಪ್ಪ ದುಷ್ಕರ್ಮಿಗಳ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದಾನೆ. ವಿದ್ಯಾರ್ಥಿಯ ಎಡ ಕಿವಿಯನ್ನು ದುಷ್ಕರ್ಮಿಗಳು ಕೊಯ್ದಿದ್ದು, ಎದೆ, ಪಕ್ಕೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಇರಿದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡು ಅಸ್ವಸ್ಥಗೊಂಡಿರುವ ವಿದ್ಯಾರ್ಥಿ ಅಣ್ಣಪ್ಪನನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು, ಆತ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ.
ಉನ್ನತ ಶಿಕ್ಷಣದ ಕನಸಿಟ್ಟುಕೊಂಡು ನಗರದ ಮಲ್ಲೇಶ್ವರಂ 18ನೆ ಕ್ರಾಸ್ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿಯ ನಾಲ್ಕನೆ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದು, ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿಯನ ಸರಕಾರಿ ಕಲಾ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದಾನೆ.
ಮೇ 6ರ ಶುಕ್ರವಾರ ತಡರಾತ್ರಿ 12:30ರ ಸುಮಾರಿಗೆ ಏಳೆಂಟು ಮಂದಿ ದುಷ್ಕರ್ಮಿಗಳ ಗುಂಪು ಅಣ್ಣಪ್ಪ ಹಾಸ್ಟೆಲ್ನಲ್ಲಿದ್ದ ಕೊಠಡಿಗೆ ನುಗ್ಗಿದ್ದು, ಈ ವೇಳೆ ಮಲಗಿದ್ದ ವಿದ್ಯಾರ್ಥಿಯ ಮೇಲೆ ಗುಂಪು ಮನಸೋ ಇಚ್ಛೆ ಥಳಿಸಿ, ಚಾಕುವಿನಿಂದ ಇರಿದು ಪರಾರಿಯಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದ ಅಣ್ಣಪ್ಪನನ್ನು ಹಾಸ್ಟೆಲ್ನ ಸಹಪಾಠಿಗಳು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ, ಅಣ್ಣಪ್ಪ ಇಲ್ಲಿನ ಅಶೋಕ ನಗರ ಠಾಣಾ ಪೊಲೀಸರಿಗೆ ಈ ಪ್ರಕರಣ ಸಂಬಂಧ ದೂರು ನೀಡಿದ್ದಾನೆ ಎಂದು ಗೊತ್ತಾಗಿದೆ.
ಕ್ಷುಲ್ಲಕ ಜಗಳ: ಮೇ 5ರ ಗುರುವಾರ ವಿದ್ಯಾರ್ಥಿ ನಿಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಕಾರ್ಯಕ್ರಮ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿ ಅಣ್ಣಪ್ಪನೊಂದಿಗೆ ಹೊರಗಿನಿಂದ ಆಗಮಿಸಿದ್ದ ಕೆಲವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆ.
ಅದೇ ನೆಪದಲ್ಲಿ ದುಷ್ಕರ್ಮಿಗಳು ಗುಂಪು ಹಾಸ್ಟೆಲ್ ವಿದ್ಯಾರ್ಥಿ ಅಣ್ಣಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಇದರಿಂದಾಗಿ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ತನ್ನ ವಿದ್ಯಾಭ್ಯಾಸ ಮುಂದುವರಿಸಲು ಆತಂಕ ಪಡುತ್ತಿದ್ದಾನೆ. ಹೀಗಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆತ ಆಗ್ರಹಿಸಿದ್ದಾವೆ.
ತಾನು ಹಾಸ್ಟೆಲ್ನಲ್ಲಿ ಆ ದಿನ ನಿದ್ರೆ ಮಾಡುತ್ತಿದ್ದ ವೇಳೆ ಏಕಾಏಕಿ ನನ್ನ ಕೊಠಡಿಗೆ ನುಗ್ಗಿದ ಮದ್ಯದ ಅಮಲಿನಲ್ಲಿದ್ದ ಗುಂಪು ನನ್ನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ, ಚಾಕುವಿನಿಂದ ಕಿವಿಯನ್ನು ಕೊಯ್ದಿದೆ. ನೋವಿನಿಂದ ನಾನು ಜೋರಾಗಿ ಕಿರುಚಿಕೊಂಡೆ. ತಕ್ಷಣವೇ ನನ್ನ ಬಾಯಿ ಮುಚ್ಚಿದ ದುಷ್ಕರ್ಮಿಯೊಬ್ಬ ನನ್ನ ಎದೆಯ ಭಾಗಕ್ಕೆ ಇರಿದ. ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆಂದು ನನಗಿನ್ನೂ ಗೊತ್ತಿಲ್ಲ.
- ಜೆ.ಅಣ್ಣಪ್ಪ, ಹಲ್ಲೆಗೊಳಗಾದ ದಲಿತ ವಿದ್ಯಾರ್ಥಿ
ದಲಿತ ವಿದ್ಯಾರ್ಥಿ ಅಣ್ಣಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ನಿಜಕ್ಕೂ ದುರಂತ. ಈ ಪ್ರಕರಣದ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇದೀಗ ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗುವುದು.
- ಎಂ.ವಿ.ಸಾವಿತ್ರಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತೆ
ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿರುವ ಸರಕಾರಿ ಕಾಲೇಜು ಹಾಸ್ಟೆಲ್ನಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ, ಗೂಂಡಾಗಿರಿ ಅಕ್ಷಮ್ಯ. ಈ ಘಟನೆ ಹಾಸ್ಟೆಲ್ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಒಂದು ನಿದರ್ಶನ. ಈ ಪ್ರಕರಣವನ್ನು ಸಮಾಜ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು.
- ಆರ್.ಮೋಹನ್ರಾಜ್, ಪ್ರಧಾನ ಸಂಚಾಲಕ, ದಸಂಸ







